ಬಲವಂತದ ಕ್ವಾರಂಟೈನ್ನಲ್ಲಿದ್ದ ಬಿಹಾರ ಐಪಿಎಸ್ ಅಧಿಕಾರಿ ಬಿಡುಗಡೆ
ಮುಂಬೈ, ಆಗಸ್ಟ್ 7: ಬಾಲಿವುಡ್ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಲವಂತವಾಗಿ ಕ್ವಾರಂಟೈನ್ ಮಾಡಲಾಗಿದ್ದ ಪಾಟ್ನಾ ಐಪಿಎಸ್ ಅಧಿಕಾರಿಯನ್ನು ಮುಂಬೈ ಮಹಾನಗರ ಪಾಲಿಕೆ ಬಿಡುಗಡೆಗೊಳಿಸಿದೆ.
ಸುಶಾಂತ್ ಸಿಂಗ್ ಪ್ರಕರಣದ ತನಿಖೆಗಾಗಿ ಮುಂಬೈಗೆ ಬಂದಿದ್ದ ಐದು ಮಂದಿ ಪಾಟ್ನಾ ಪೊಲೀಸರ ಪೈಕಿ, ವಿನಯ್ ತಿವಾರಿ ಎಂಬ ಐಪಿಎಸ್ ಅಧಿಕಾರಿಯನ್ನು ಕಳೆದ ಭಾನುವಾರ ಬಲವಂತವಾಗಿ ಕ್ವಾರಂಟೈನ್ ಮಾಡಲಾಗಿತ್ತು. ಕೊರೊನಾ ವೈರಸ್ ಮಾರ್ಗಸೂಚಿ ಅನ್ವಯ ಅಧಿಕಾರಿಯನ್ನು 14 ದಿನಗಳ ಕಾಲ ಕ್ವಾರಂಟೈನ್ನಲ್ಲಿರಿಸಲಾಗುವುದು ಎಂದು ಮುಂಬೈ ಮಹಾನಗರ ಪಾಲಿಕೆ ತಿಳಿಸಿತ್ತು.
ಬಿಹಾರ ಪೊಲೀಸ್ ಕ್ವಾರಂಟೈನ್: ನ್ಯಾಯಾಲಯಕ್ಕೆ ಹೋಗಲು ನಿರ್ಧಾರ
ಅಧಿಕೃತ ಕರ್ತವ್ಯದಲ್ಲಿದ್ದ ಅಧಿಕಾರಿಯನ್ನು ಬಲವಂತವಾಗಿ ಕ್ವಾರಂಟೈನ್ ಮಾಡಿರುವುದನ್ನು ಬಿಹಾರ ಸರ್ಕಾರ ಮತ್ತು ಪೊಲೀಸ್ ಇಲಾಖೆ ಖಂಡಿಸಿತ್ತು. ಸುಶಾಂತ್ ಸಿಂಗ್ ಪ್ರಕರಣದಲ್ಲಿ ಮುಂಬೈ ಪೊಲೀಸರು ತನಿಖೆಗೆ ಸಹಕಸರಿಸುತ್ತಿಲ್ಲ. ಹಾಗಾಗಿ, ನಮ್ಮ ಅಧಿಕಾರಿಯನ್ನು ಬಲವಂತವಾಗಿ ಗೃಹ ಬಂಧನದಲ್ಲಿರಿಸಿದ್ದಾರೆ ಎಂದು ಬಿಹಾರ ಡಿಐಜಿ ಗುಪ್ತೇಶ್ವರ್ ಪಾಂಡೆ ಆರೋಪಿಸಿದ್ದರು.
ಅಧಿಕಾರಿಯನ್ನು ಕ್ವಾರಂಟೈನ್ ಮುಕ್ತಗೊಳಿಸುವಂತೆ ಮುಂಬೈ ಪೊಲೀಸರಿಗೆ ಪತ್ರದ ಮೂಲಕ ಮನವಿ ಸಲ್ಲಿಸಿದ್ದರು. ಆದರೆ, ಅದಕ್ಕೆ ಪಾಸಿಟಿವ್ ಪ್ರತಿಕ್ರಿಯೆ ಸಿಗಲಿಲ್ಲ. ಇದರಿಂದ ನಿರಾಸೆಗೊಳಗಾದ ಬಿಹಾರ ಪೊಲೀಸ್ ಸುಪ್ರೀಂಕೋರ್ಟ್ ಮೊರೆ ಹೋಗಲು ನಿರ್ಧರಿಸಿತ್ತು.
ಬಿಹಾರ ಪೊಲೀಸರು ನ್ಯಾಯಾಲಯದ ಮೊರೆ ಹೋಗುವ ನಿರ್ಧಾರ ಪ್ರಕಟಗೊಂಡ ಒಂದು ದಿನದ ಬಳಿಕ ಮುಂಬೈ ಪಾಲಿಕೆ ಅಧಿಕಾರಿಯನ್ನು ಬಿಡುಗಡೆಗೊಳಿಸಿದೆ. ಮುಂಬೈಗೆ ಬಂದಿದ್ದ ಐದು ಜನರ ತಂಡದಲ್ಲಿ ನಾಲ್ಕು ಜನ ಪೊಲೀಸರು ಪಾಟ್ನಾಗೆ ಹಿಂತಿರುಗಿದ್ದರು. ಇದೀಗ, ವಿನಯ್ ತಿವಾರಿ ಸಹ ಮುಂಬೈನಿಂದ ಪಾಟ್ನಾಗೆ ವಾಪಸ್ ಆಗುತ್ತಿದ್ದಾರೆ.
ಅಂದ್ಹಾಗೆ, ಸುಶಾಂತ್ ಸಿಂಗ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಟ್ನಾ ಮತ್ತು ಮುಂಬೈನ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರು ದಾಖಲಾಗಿದ್ದು, ಇಬ್ಬರು ಪೊಲೀಸರು ಪ್ರತ್ಯೇಕ ತನಿಖೆ ನಡೆಸುತ್ತಿದ್ದರು.