ನಿತೀಶ್ ಮತ್ತೆ ಸಿಎಂ ಆದರೆ ಶಿವಸೇನಾಕ್ಕೆ ಧನ್ಯವಾದ ಹೇಳಬೇಕು: ರಾವತ್
ಮುಂಬೈ, ನವೆಂಬರ್ 10: ತನ್ನ ಮಿತ್ರಪಕ್ಷ ಬಿಜೆಪಿಗಿಂತ ಕಡಿಮೆ ಸ್ಥಾನದಲ್ಲಿ ಗೆದ್ದರೂ ಬಿಹಾರದ ಮುಖ್ಯಮಂತ್ರಿ ಸ್ಥಾನವನ್ನು ಮರಳಿ ಪಡೆದುಕೊಳ್ಳುವಲ್ಲಿ ಜೆಡಿಯು ನಾಯಕ ನಿತೀಶ್ ಕುಮಾರ್ ಯಶಸ್ವಿಯಾದರೆ ಅವರು ತಮಗೆ ಕೃತಜ್ಞತೆ ತಿಳಿಸಬೇಕು ಎಂದು ಶಿವಸೇನಾ ಮಂಗಳವಾರ ಹೇಳಿದೆ.
Recommended Video
ಕಳೆದ ವರ್ಷ ಮಹಾರಾಷ್ಟ್ರ ರಾಜಕೀಯದಲ್ಲಿ ನಡೆದ ತೀರಾ ನಾಟಕೀಯ ಬೆಳವಣಿಗೆಗಳನ್ನು ಉದಾಹರಣೆಯಾಗಿ ನೀಡಿರುವ ಶಿವಸೇನಾ ಮುಖಂಡ, ಸಂಸದ ಸಂಜಯ್ ರಾವತ್, ತನ್ನ ಮಿತ್ರ ಪಕ್ಷಕ್ಕೆ ಕೊಟ್ಟ ಮಾತನ್ನು ಉಳಿಸಿಕೊಳ್ಳದೆ ಹೋದರೆ ಏನಾಗುತ್ತದೆ ಎಂಬುದನ್ನು ತಮ್ಮ ಪಕ್ಷ ತೋರಿಸಿದೆ ಎಂದಿದ್ದಾರೆ.
ಬಿಜೆಪಿ ದಾಳಕ್ಕೆ ಮಣಿದರೇ ನಿತೀಶ್ ಕುಮಾರ್?
ಮಹಾರಾಷ್ಟ್ರ ಚುನಾವಣೆ ಬಳಿಕ ಬಿಜೆಪಿ ಮತ್ತು ಶಿವಸೇನಾ ಜತೆಯಾಗಿ ಸರ್ಕಾರ ರಚಿಸಲು ಮುಂದಾಗಿದ್ದವು. ಆದರೆ ಚುನಾವಣಾ ಪೂರ್ವ ಮೈತ್ರಿಗೂ ಮುನ್ನ ಬಿಜೆಪಿಯು ಮುಖ್ಯಮಂತ್ರಿ ಸ್ಥಾನದ ಅಧಿಕಾರವನ್ನು ಹಂಚಿಕೊಳ್ಳುವುದಾಗಿ ಮಾತು ನೀಡಿತ್ತು ಎಂದು ಶಿವಸೇನಾ ಹೇಳಿತ್ತು. ಇದನ್ನು ಬಿಜೆಪಿ ಒಪ್ಪಿರಲಿಲ್ಲ. ಹೀಗಾಗಿ ತನ್ನ ಸುದೀರ್ಘ ಸಮಯದ ಮೈತ್ರಿಯನ್ನು ಕಡಿದುಕೊಂಡು ಬಿಜೆಪಿಯಿಂದ ಹೊರನಡೆದಿದ್ದ ಶಿವಸೇನಾ, ತನ್ನ ಕಟು ವೈರಿ ಪಕ್ಷಗಳಾದ ಎನ್ಸಿಪಿ ಮತ್ತು ಕಾಂಗ್ರೆಸ್ ಜತೆಗೂಡಿ ಸರ್ಕಾರ ರಚಿಸಿತ್ತು. ಶಿವಸೇನಾದ ಮೊದಲ ಸಿಎಂ ಆಗಿ ಉದ್ಧವ್ ಠಾಕ್ರೆ ಆಯ್ಕೆಯಾಗಿದ್ದರು.
'ನಿತೀಶ್ ಕುಮಾರ್ ಅವರೇ ಮುಂದಿನ ಮುಖ್ಯಮಂತ್ರಿ ಆಗುತ್ತಾರೆ ಎಂದು ಬಿಜೆಪಿ ನಾಯಕರು ಪದೇ ಪದೇ ಹೇಳುವುದನ್ನು ಕೇಳಿದ್ದೇನೆ. ಅದಕ್ಕಾಗಿ ನಿತೀಶ್ ಬಾಬು ಶಿವಸೇನಾಕ್ಕೆ ಧನ್ಯವಾದ ಹೇಳಬೇಕು. ವಾಗ್ದಾನಗಳನ್ನು ಉಳಿಸಿಕೊಳ್ಳದೆ ಹೋಗುವುದು ಬಿಹಾರದಲ್ಲಿ ನಡೆಯುವುದಿಲ್ಲ. ಏಕೆಂದರೆ ಕೊಟ್ಟ ಮಾತನ್ನು ಉಳಿಸಿಕೊಳ್ಳದೆ ಹೋದರೆ ಏನಾಗಬಹುದು ಎಂಬುದನ್ನು ಮಹಾರಾಷ್ಟ್ರದಲ್ಲಿ ಶಿವಸೇನಾ ತೋರಿಸಿಕೊಟ್ಟಿದೆ' ಎಂದು ರಾವತ್ ಹೇಳಿದ್ದಾರೆ.
ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶ: ಇಲ್ಲಿದೆ ಕ್ಷಣಕ್ಷಣದ ಮಾಹಿತಿ
'ಹೀಗಾಗಿ ಒಂದು ವೇಳೆ ಬಿಜೆಪಿಗೆ ಹೋಲಿಸಿದರೆ ಕಡಿಮೆ ಸಂಖ್ಯೆಯ ಸೀಟುಗಳಲ್ಲಿ ಗೆದ್ದರೂ ನಿತೀಶ್ ಬಿಹಾರದ ಮುಖ್ಯಮಂತ್ರಿಯಾದರೆ ಅವರು ಅದಕ್ಕಾಗಿ ಶಿವಸೇನಾಕ್ಕೆ ಧನ್ಯವಾದ ಸಲ್ಲಿಸಬೇಕಾಗುತ್ತದೆ' ಎಂದಿದ್ದಾರೆ.