ಉದ್ಧವ್ ಠಾಕ್ರೆಗೆ ಶುಭ ಸುದ್ದಿ, ಚುನಾವಣೆಗೆ ಅನುಮತಿ ಕೊಟ್ಟ ಆಯೋಗ
ಮುಂಬೈ, ಮೇ 1: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಶುಕ್ರವಾರದಂದು ಕೇಂದ್ರ ಚುನಾವಣಾ ಆಯೋಗದಿಂದ ಶುಭ ಸುದ್ದಿ ಸಿಕ್ಕಿದೆ. ಮಹಾರಾಷ್ಟ್ರದಲ್ಲಿ ವಿಧಾನಪರಿಷತ್ ಚುನಾವಣೆ ನಡೆಸಲು ಆಯೋಗದಿಂದ ಅನುಮತಿ ಸಿಕ್ಕಿದೆ.
ಪ್ರಧಾನಿ ಮೋದಿ ಅವರಿಗೆ ಉದ್ಧವ್ ಕರೆ ಮಾಡಿ ಮಹಾರಾಷ್ಟ್ರದ ರಾಜಕೀಯ ಪರಿಸ್ಥಿತಿಯನ್ನು ತಿಳಿಸಿದ್ದರು. ಇದಾದ ಬಳಿಕ ಗುರುವಾರದಂದು ಮಹಾರಾಷ್ಟ್ರದ ರಾಜ್ಯಪಾಲ ಕೊಶ್ಯಾರಿ ಅವರು ಚುನಾವಣಾ ಆಯೋಗಕ್ಕೆ ಪತ್ರ ಬರೆದು ಶೀಘ್ರದಲ್ಲೇ ಚುನಾವಣೆಗೆ ಅನುಮತಿ ನೀಡುವಂತೆ ಕೋರಿದ್ದರು.
ನನ್ನ ಸಿಎಂ ಹುದ್ದೆ ಉಳಿಸಲು ನಿಮ್ಮಿಂದ ಮಾತ್ರ ಸಾಧ್ಯ: ಮೋದಿಗೆ ಮಹಾ ಸಿಎಂ ಉದ್ಧವ್ ಠಾಕ್ರೆ ಮನವಿ
ಈ ತಿಂಗಳ (ಮೇ) 28ನೇ ತಾರೀಕಿನೊಳಗೆ ಠಾಕ್ರೆ ಅಸೆಂಬ್ಲಿ ಸದಸ್ಯರಾಗಬೇಕು, ಇಲ್ಲವೇ, ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಬೇಕು. ಎಲ್ಲಾ ಪ್ರಯತ್ನಗಳನ್ನೂ ಮಾಡಿ, ಅದು ಫಲಕೊಡದೇ ಇದ್ದಿದ್ದರಿಂದ, ಠಾಕ್ರೆ, ಪ್ರಧಾನಿ ಮೋದಿಗೆ ಬುಧವಾರ (ಏ 29) ದೂರವಾಣಿ ಕರೆ ಮಾಡಿ, ಮನವಿ ಮಾಡಿಕೊಂಡಿದ್ದರು.
ರಾಜ್ಯಪಾಲ ಕೊಶ್ಯಾರಿಗೆ ಬಿಜೆಪಿ ಮುಖಂಡರು ಒತ್ತಡ ಹಾಕುತ್ತಿದ್ದಾರೆ. ಒಂದು ತಿಂಗಳ ಹಿಂದೆಯೇ ನಾನು ಚುನಾವಣೆ ನಡೆಸುವಂತೆ ರಾಜ್ಯಪಾಲರಿಗೆ ಮನವಿ ಮಾಡಿದ್ದೆ. ಆದರೆ, ನಮ್ಮ ಮನವಿಯನ್ನು ರಾಜ್ಯಪಾಲರು ತಿರಸ್ಕರಿಸಿದ್ದಾರೆ. ನೀವು ಈಗ ಮಧ್ಯಪ್ರವೇಶಿಸಬೇಕು ಎಂದು ಠಾಕ್ರೆ, ಮೋದಿಗೆ ಮನವಿ ಮಾಡಿದ್ದಾರೆಂದು ವರದಿಯಾಗಿದೆ.