ಹೀಗೆ ಮುಂದುವರಿದರೆ ನಾನು ಜೈಲಿನಲ್ಲಿಯೇ ಸಾಯಬಹುದು: ಸ್ಟಾನ್ ಸ್ವಾಮಿ
ಮುಂಬೈ, ಮೇ 21: ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಬಂಧಿತ ಹಿರಿಯ ಆದಿವಾಸಿ ಹಕ್ಕುಗಳ ಹೋರಾಟಗಾರ ಸ್ಟಾನ್ ಸ್ವಾಮಿ, ಆಸ್ಪತ್ರೆಗೆ ದಾಖಲಾಗಲು ನಿರಾಕರಿಸಿದ್ದು, ಪರಿಸ್ಥಿತಿ ಹೀಗೆಯೇ ಮುಂದುವರಿದರೆ ನಾನು ಇಲ್ಲಿಯೇ ಸಾಯಬಹುದು. ನಾನು ಆಸ್ಪತ್ರೆಗೆ ದಾಖಲಾಗುವ ಬದಲು ಇಲ್ಲೇ ಇರುತ್ತೇನೆ ಎಂದು ಬಾಂಬೆ ಹೈಕೋರ್ಟ್ಗೆ ಹೇಳಿದ್ದಾರೆ.
ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಬಂಧಿತರಾಗಿ ತಲೋಜ ಜೈಲಿನಲ್ಲಿರುವ 84 ವರ್ಷದ ಸ್ವಾಮಿ ಪಾರ್ಕಿನ್ಸನ್ಸ್ ಕಾಯಿಲೆಯಿಂದ ಬಳಲುತ್ತಿದ್ದು ಈ ಹಿನ್ನೆಲೆ ಸರ್ ಜೆಜೆ ಆಸ್ಪತ್ರೆಗೆ ದಾಖಲಿಸುವಂತೆ ಹಾಗೂ ವೈದ್ಯಕೀಯ ವರದಿಯನ್ನು ಮೇ 21ರಂದು ಸಲ್ಲಿಸುವಂತೆ ಮೇ 19ರಂದು ನಡೆದ ವಿಚಾರಣೆ ವೇಳೆ ನ್ಯಾಯಾಲಯ ಸೂಚಿಸಿತ್ತು.
ಸರ್ಕಾರ ಉರುಳಿಸಲು ದಂಗೆಗೆ ಸಂಚು: ಸ್ಟಾನ್ ಸ್ವಾಮಿಗೆ ಜಾಮೀನು ನಿರಾಕರಣೆ
ಈ ಸೂಚನೆಯಂತೆ ನೀಡಿದ ವೈದ್ಯಕೀಯ ವರದಿಯಲ್ಲಿ ಸ್ಟಾನ್ ಸ್ವಾಮಿ ಅವರಿಗೆ ತೀವ್ರ ಶ್ರವಣ ದೋಷವಿದೆ. ಸ್ವಾಮಿ ಮೈ ನಡುಗುತ್ತಿದೆ. ವಾಕಿಂಗ್ ಸ್ಟಿಕ್ ಅಥವಾ ಗಾಲಿಕುರ್ಚಿಯ ಅಗತ್ಯವಿದೆ ಎಂದು ಉಲ್ಲೇಖಿಸಲಾಗಿದೆ.
ಈ ಅರ್ಜಿ ವಿಚಾರಣೆ ನಡೆಸುವ ಸಂದರ್ಭ ನ್ಯಾಯಮೂರ್ತಿಗಳಾದ ಎಸ್ ಜೆ ಕತವಲ್ಲ ಹಾಗೂ ಎಸ್ ಪಿ ತವಡೆ ಅವರ ಪೀಠದ ಮುಂದೆ ಸ್ಟಾನ್ ಸ್ವಾಮಿ ಅವರು ತಲೋಜ ಜೈಲಿನಿಂದ ವೀಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದಾರೆ. ಈ ವೇಳೆ ನ್ಯಾಯಾಲಯವು ನಿಮ್ಮನ್ನು ಆಸ್ಪತ್ರೆಗೆ ದಾಖಲಿಸಬೇಕೇ ಎಂದು ಸ್ಟಾನ್ ಸ್ವಾಮಿ ಬಳಿ ಕೇಳಿದಾಗ ಸ್ಟಾನ್ ಸ್ವಾಮಿ, ಆಸ್ಪತ್ರೆಗೆ ದಾಖಲಾಗುವುದಕ್ಕೆ ನಿರಾಕರಿಸಿದ್ದು, ಪರಿಸ್ಥಿತಿ ಹೀಗೆಯೇ ಮುಂದುವರಿದರೆ ನಾನು ಇಲ್ಲಿಯೇ ಸಾಯಬಹುದು. ಜೆಜೆ ಆಸ್ಪತ್ರೆಗೆ ದಾಖಲಾಗುವ ಬದಲು ನಾನು ಇಲ್ಲಿಯೇ ಇರುತ್ತೇನೆ ಎಂದು ಹೇಳಿದ್ದಾರೆ. ಹಾಗೆಯೇ ಮಧ್ಯಂತರ ಜಾಮೀನು ನೀಡುವಂತೆ ಬಾಂಬೆ ಹೈಕೋರ್ಟ್ಗೆ ಮನವಿ ಮಾಡಿದ್ದಾರೆ.
'ನಾನು ನನ್ನ ಕೊನೆಯ ಸಂದರ್ಭದಲ್ಲಿ ರಾಂಚಿಯಲ್ಲಿರಲು ಬಯಸುತ್ತೇನೆ. ಈಗ ನನ್ನನ್ನು ಆಸ್ಪತ್ರೆಗೆ ದಾಖಲು ಮಾಡುವುದರಿಂದ ಏನೂ ಪ್ರಯೋಜನವಾಗದು ಎಂದು ನನಗನಿಸುತ್ತಿದೆ. ನಿಧಾನವಾಗಿ ನನ್ನ ಸ್ಥಿತಿ ಶೋಚನೀಯವಾಗುತ್ತಿದೆ. ಎಂಟು ತಿಂಗಳ ಹಿಂದೆ ನಾನು ನನ್ನ ಕೆಲವು ಕೆಲಸಗಳನ್ನಾದರೂ ಮಾಡುತ್ತಿದೆ. ಊಟ ಮಾಡುತ್ತಿದ್ದೆ, ಸ್ವಲ್ಪ ಬರೆಯುತ್ತಿದ್ದೆ, ನಡೆದಾಡುತ್ತಿದ್ದೆ, ಯಾರ ಸಹಾಯ ಪಡೆಯದೆಯೇ ಸ್ನಾನ ಮಾಡುತ್ತಿದ್ದೆ, ಆದರೆ ಈಗ ಪರಿಸ್ಥಿತಿ ಬಿಗಾಡಯಿಸಿದೆ. ನನಗೆ ಬರೆಯಲು ನಡೆದಾಡಲು ಕೂಡ ಸಾಧ್ಯವಿಲ್ಲದ ಸ್ಥಿತಿಯಲ್ಲಿ ನಾನು ಇದ್ದೇನೆ. ಆಹಾರವನ್ನೂ ಯಾರಾದರು ತಿನ್ನಿಸಬೇಕಾಗಿದೆ. ಹೀಗಿರುವಾಗ ನಾನು ರಾಂಚಿಯಲ್ಲಿರಲು ಬಯಸುತ್ತೇನೆ' ಎಂದು ಹೇಳಿದ್ದಾರೆ.
ಭೀಮಾ ಕೋರೆಗಾಂವ್: ಬಂಧಿತ ಆರೋಪಿಗೆ ಐಎಸ್ಐ ನಂಟು ಆರೋಪ
'ನಾನು ನ್ಯಾಯಾಲಯದ ಮುಂದೆ ಒಂದೇ ಒಂದು ಮನವಿ ಮಾಡುತ್ತೇನೆ, ನನ್ನ ಮಧ್ಯಂತರ ಜಾಮೀನು ಅರ್ಜಿಯನ್ನು ಪರಿಗಣಿಸಿ. ಇದೊಂದೇ ನನ್ನ ಕೋರಿಕೆ' ಎಂದು ಮನವಿ ಮಾಡಿದ್ದಾರೆ. ಬಾಂಬೆ ಹೈಕೋರ್ಟ್ ಪ್ರಕರಣದ ವಿಚಾರಣೆಯನ್ನು ಜೂನ್ 7 ಕ್ಕೆ ಮುಂದೂಡಿದೆ. (ಒನ್ಇಂಡಿಯಾ ಸುದ್ದಿ)