ಕೊರೊನಾ ನಿಯಂತ್ರಣಕ್ಕೆ ದೇಶಕ್ಕೆ ಮಾದರಿ: ಏನಿದು 'ಮುಂಬೈ ಮಾಡೆಲ್', ಯಾರಿದರ ನಾಯಕ?
ಎಲ್ಲೆಲ್ಲೂ ಸಾವುನೋವಿನ ಸುದ್ದಿ, ಸ್ಮಶಾನದಲ್ಲಿ ಹೆಣಗಳ ರಾಶಿ, ಶವಸಂಸ್ಕಾರಕ್ಕೆ ಕ್ಯೂ, ಲಸಿಕೆಗಳ ಅಭಾವ, ಆಕ್ಸಿಜನ್ ಸಮಸ್ಯೆ..ಇದು ಕಳೆದ ಏಪ್ರಿಲ್ ಮಧ್ಯ ಭಾಗದಲ್ಲಿ ದೇಶದ ವಾಣಿಜ್ಯ ನಗರಿ ಮುಂಬೈನ ಚಿತ್ರಣವಾಗಿತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದು ದೊಡ್ಡಸುದ್ದಿಯಾಗಿ ಹೋಯಿತು.
ಆದರೆ, ಮಹಾರಾಷ್ಟ್ರ ಇಂದು, ದೇಶದಲ್ಲಿ ಅತಿಹೆಚ್ಚು ಸೋಂಕಿತರನ್ನು ಹೊಂದಿರುವ ರಾಜ್ಯ ಎನ್ನುವ ಹಣೆಪಟ್ಟಿ ಕಟ್ಟಿಕೊಂಡಿದ್ದರೂ, ಮುಂಬೈ ಮಹಾನಗರದಲ್ಲಿ ಸದ್ಯ ಪಾಸಿಟಿವ್ ಸಂಖ್ಯೆ ದಿನದಿಂದ ದಿನಕ್ಕೆ ಗಣನೀಯವಾಗಿ ಇಳಿಮುಖವಾಗುತ್ತಿದೆ.
ನೋಡಿ ಕಲೀರಿ: ಮುಂಬೈನಲ್ಲಿ ಕೊರೊನಾವೈರಸ್ ಕಡಿವಾಣಕ್ಕೆ ಬಂದಿದ್ದು ಹೇಗೆ?
ಹೌದು, ಸರಕಾರ ಮೂಗು ತೂರಿಸದೆ ಫ್ರೀ ಹ್ಯಾಂಡ್ ನೀಡಿದರೆ ಹೇಗೆ ಶಿಸ್ತು ಮತ್ತು ಯೋಜನಾಬದ್ದವಾಗಿ ಕೆಲಸ ಮಾಡಬಹುದು ಎನ್ನುವುದನ್ನು ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೋರೇಶನ್ (ಬಿಎಂಸಿ) ಕಮಿಷನರ್ ಆಗಿರುವ ಇಕ್ಬಾಲ್ ಸಿಂಗ್ ಚಾಹಲ್ ಇಡೀ ದೇಶಕ್ಕೆ ತೋರಿಸಿಕೊಟ್ಟಿದ್ದಾರೆ.
ರಾಜ್ಯದಲ್ಲಿ ಹೊಸ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಇಳಿಕೆ: ಇದೇನಾ ಕಾರಣ?
ಸರ್ವೋಚ್ಚ ನ್ಯಾಯಾಲಯ ಕೂಡಾ ಇಕ್ಬಾಲ್ ಕಾರ್ಯವೈಖರಿಗೆ ಫಿದಾ ಆಗಿ ದೇಶದ ಎಲ್ಲಾ ರಾಜ್ಯಗಳು ಸೋಂಕು ನಿಯಂತ್ರಣಕ್ಕೆ ಮುಂಬೈ ಮಾಡೆಲ್ ಅನುಸರಿಸುವುದು ಉತ್ತಮ ಎಂದು ಕೇಂದ್ರ ಮತ್ತು ದೆಹಲಿ ಸರಕಾರಕ್ಕೆ ಸಲಹೆಯನ್ನು ನೀಡಿತ್ತು. ಏನಿದು ಮುಂಬೈ ಮಾಡೆಲ್?
ಉದ್ದವ್ ಠಾಕ್ರೆ, ಬಿಎಂಸಿ ಕಮಿಷನರ್ ಇಕ್ಬಾಲ್ ಚಾಹಲ್ ಗೆ ಫ್ರೀ ಹ್ಯಾಂಡ್
ಠಾಕ್ರೆ ಸರಕಾರ ಬಿಎಂಸಿ ಕಮಿಷನರ್ ಇಕ್ಬಾಲ್ ಚಾಹಲ್ ತೆಗೆದುಕೊಳ್ಳುವ ಯಾವ ನಿರ್ಧಾರಕ್ಕೂ ತಲೆಹಾಕಲು ಹೋಗಲಿಲ್ಲ. ಫುಲ್ ಪವರ್ ನೀಡಿದ್ದರಿಂದ ಇಡೀ ಮಹಾನಗರದ ಜವಾಬ್ದಾರಿಯನ್ನು ಹೊತ್ತುಕೊಂಡ ಇಕ್ಬಾಲ್, ಮೊದಲು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ರೆಮ್ಡೆಸಿವಿರ್ ಮತ್ತು ಇತರ ಲಸಿಕೆಗಳ ದಾಸ್ತಾನು ಕೊರತೆಯಾಗದಂತೆ ನೋಡಿಕೊಂಡರು.
ನಗರದ ಆಸ್ಪತ್ರೆಯೊಂದರಲ್ಲಿ ಸುಮಾರು 160 ಸೋಂಕಿತರು ತೀವ್ರ ಆಕ್ಸಿಜನ್ ಕೊರತೆಯಿಂದ ಬಳಲುತ್ತಿದ್ದರು. ಆ ವೇಳೆ, ಆಕ್ಸಿಜನ್ ಪೂರೈಸಲು ಕೇಂದ್ರ ಸರಕಾರ ತಡಪಡಿಸುತ್ತಿದ್ದಾಗ, ಎಲ್ಲಾ ರೋಗಿಗಳನ್ನು ಬೇರೊಂದು ಆಸ್ಪತ್ರೆಗೆ ರಾತ್ರೋರಾತ್ರಿ ಶಿಫ್ಟ್ ಮಾಡಿಸಿ, ಒಬ್ಬರ ಪ್ರಾಣಕ್ಕೂ ತೊಂದರೆಯಾಗದಂತೆ ಇಕ್ಬಾಲ್ ನೋಡಿಕೊಂಡರು. (ಚಿತ್ರ: ಪಿಟಿಐ)
ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೋರೇಶನ್ ಕಮಿಷನರ್ ಇಕ್ಬಾಲ್ ಸಿಂಗ್ ಚಾಹಲ್
ಮುಂಬೈ ಮಾಡೆಲ್ ಎಂದರೆ ಏನು ಎನ್ನುವ ಪ್ರಶ್ನೆಯನ್ನು ಇಕ್ಬಾಲ್ ಸಿಂಗ್ ಚಾಹಲ್ ಅವರಲ್ಲಿ ಕೇಳಿದಾಗ, "ವಿಕೇಂದ್ರಿಕೃತ ಹೋರಾಟ ಈ ಮಾಡೆಲ್ ಕಾರ್ಯವೈಖರಿಯಲ್ಲಿ ಅತಿಮುಖ್ಯ"ಎಂದು ಹೇಳುತ್ತಾರೆ. ಸದ್ಯದ ಮಟ್ಟಿಗೆ ಕೊರೊನಾ ಕಂಟ್ರೋಲ್ನಲ್ಲಿದ್ದರೂ, ತಮ್ಮ ಕೆಲಸ ಮತ್ತು ತಂಡದ ಮೇಲೆ ಸಂಪೂರ್ಣ ನಿಯಂತ್ರಣವನ್ನು ಹೊಂದಿರುವ ಇಕ್ಬಾಲ್, ವಾರ್ ರೂಂ ಸಹಾಯವಾಣಿ ದಿನದ 24 ಗಂಟೆಯಲ್ಲೂ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಂಡಿದ್ದಾರೆ. (ಚಿತ್ರ: ಪಿಟಿಐ, ಎಡಕ್ಕೆ ಇರುವವರು ಇಕ್ಬಾಲ್ ಸಿಂಗ್)
ಮೂಲತಃ ಇಂಜಿನಿಯರ್ ಮತ್ತು ರಕ್ಷಣಾ ಸೇವೆಯ ಹಿನ್ನೆಲೆಯನ್ನು ಹೊಂದಿರುವ ಇಕ್ಬಾಲ್
ಮೂಲತಃ ಇಂಜಿನಿಯರ್ ಮತ್ತು ರಕ್ಷಣಾ ಸೇವೆಯ ಹಿನ್ನೆಲೆಯನ್ನು ಹೊಂದಿರುವ ಇಕ್ಬಾಲ್, ಕಳೆದ ವರ್ಷ ಮೇ ತಿಂಗಳಲ್ಲಿ ಈ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ಮೂರು ಕಾರ್ಯತಂತ್ರವನ್ನು ಇಕ್ಬಾಲ್ ಬಳಸಿಕೊಂಡಿದ್ದಾರೆ. ಮೊದಲನೇಯದ್ದು ಜನರಿಗೆ ಕೋವಿಡ್ ಬಗ್ಗೆ ಇರುವ ಭೀತಿಯನ್ನು ತೆಗೆದುಹಾಕುವುದು, ಎರಡನೇಯದ್ದು ವಾರ್ ರೂಂಗಳನ್ನು ವಿಕೇಂದ್ರಿಕರಿಸಿ ಪ್ರತಿಕ್ರಿಯೆ ನೀಡುವ ಸಮಯವನ್ನು ಕಡಿತಗೊಳಿಸಿದ್ದು, ಮೂರನೇಯದ್ದು ಮೂಲ ಸೌಕರ್ಯವನ್ನು ತುರ್ತಾಗಿ ನಿರ್ಮಿಸುವುದು. (ಚಿತ್ರ: ಪಿಟಿಐ)
ಕೋವಿಡ್ ಪರೀಕ್ಷೆ ರಿಪೋರ್ಟ್ ಗಳು ನೇರವಾಗಿ ಬಿಎಂಸಿಗೆ, ನಂತರ ಜನರಿಗೆ
ಕೋವಿಡ್ ಪರೀಕ್ಷೆ ಮಾಡುವವರ ರಿಪೋರ್ಟ್ ಗಳನ್ನು ಲ್ಯಾಬ್ ಗಳು ನೇರವಾಗಿ ಜನರಿಗೆ ನೀಡುತ್ತಿತ್ತು. ಇದರಿಂದ ಪಾಸಿಟಿವ್ ಇದ್ದವರು ಭೀತಿಗೆ ಒಳಗಾಗುತ್ತಿದ್ದರು. ಈ ನಿಯಮವನ್ನು ರದ್ದು ಪಡಿಸಿದ ಇಕ್ಬಾಲ್, ಲ್ಯಾಬ್ ಗಳು ಪರೀಕ್ಷಾ ವರದಿಯನ್ನು ಬಿಎಂಸಿಗೆ ಮಾತ್ರ ಶೇರ್ ಮಾಡಲು ಸೂಚನೆ ನೀಡಿದರು. ಮಹಾನಗರದ ವಿವಿದೆಡೆ 24 ವಾರ್ ರೂಂ ನಿರ್ಮಿಸಿದರು. ಪ್ರತೀ ವಾರ್ ರೂಂನಲ್ಲಿ ಮೂವತ್ತು ಟೆಲಿಫೋನ್ ಲೈನ್ ಹಾಕಿ, ಹತ್ತು ಜನ ಆಪರೇಟರ್ ಗಳನ್ನು ಭರ್ತಿ ಮಾಡಿದರು. ಜೊತೆಗೆ, ಹತ್ತು ವೈದ್ಯರು, ಹತ್ತು ಅಂಬುಲೆನ್ಸ್ ಮತ್ತು ಪ್ಯಾರಾ ಮೆಡಿಕಲ್ ಸ್ಟಾಫ್ ಗಳನ್ನು ಅಪಾಯಿಟ್ಮೆಂಟ್ ಮಾಡಿಕೊಂಡರು. (ಚಿತ್ರ: ಪಿಟಿಐ)
ಮೂರು ಪಾಳೆಯದಲ್ಲಿ ದಿನದ 24 ಚಾಲನೆಯಲ್ಲಿರುವ ಈ ವಾರ್ ರೂಂ
ಮೂರು ಪಾಳೆಯದಲ್ಲಿ ದಿನದ 24 ಗಂಟೆ ಚಾಲನೆಯಲ್ಲಿರುವ ಈ ವಾರ್ ರೂಂ, ಆಸ್ಪತ್ರೆ, ಬೆಡ್ ಸೌಲಭ್ಯತೆ, ಆಕ್ಸಿಜನ್ ಮುಂತಾದ ಮಾಹಿತಿ ತಕ್ಷಣಕ್ಕೆ ಸಿಗುವಂತಾಗಲು ಹತ್ತು ಡ್ಯಾಶ್ ಬೋರ್ಡ್ ಸಿಸ್ಟಂ ಜಾರಿಗೆ ತಂದರು. ಮಹಾನಗರದ ಕಾರ್ಯದ ಒತ್ತಡವನ್ನು 24 ವಾರ್ ರೂಂಗಳಿಗೆ ಹಂಚಲಾಯಿತು. ಪದವೀಧರರಾಗಿರುವ ವೈದ್ಯರನ್ನು ಮಾಸಿಕ ಐವತ್ತು ಸಾವಿರ ರೂಪಾಯಿ ಸಂಬಳಕ್ಕೆ ಮತ್ತು ನರ್ಸ್ ಗಳನ್ನು ಗುತ್ತಿಗೆ ಆಧಾರದ ಮೇಲೆ ಸೇರಿಸಿಕೊಂಡರು.
Recommended Video
ರಾಜ್ಯದಲ್ಲಿ ಕೋವಿಡ್ ವಿಶೇಷ ಸೇವೆಯಲ್ಲಿರುವ, ಪ್ರಿನ್ಸಿಪಲ್ ಸೆಕ್ರೆಟರಿ ಮಂಜುನಾಥ ಪ್ರಸಾದ್
ಮುಂಬೈ ಐಐಟಿ ಸಹಯೋಗದೊಂದಿಗೆ, ನಗರದ 47 ಸ್ಮಶಾನಗಳ ಡ್ಯಾಶ್ ಬೋರ್ಡ್ ಸಿದ್ದಪಡಿಸಿದರು. ಹಾಗಾಗಿ, ಆರಂಭದಲ್ಲಿ ಸ್ಮಶಾನದಲ್ಲಿ ದೊಡ್ಡ ಕ್ಯೂ ಇದ್ದರೂ, ಇದನ್ನೂ ಶಿಸ್ತುಬದ್ದ ರೀತಿಯಲ್ಲಿ ಸರಿದಾರಿಗೆ ತಂದು ಅಂತಿಮ ಸಂಸ್ಕಾರದಲ್ಲಿ ತಡವಾಗದೇ ಆಗುವಂತೆ ನೋಡಿಕೊಂಡರು. ಇಕ್ಬಾಲ್ ಕಾರ್ಯವೈಖರಿಯ ಮುಂಬೈ ಮಾಡೆಲ್ ಅನ್ನು ಬೆಂಗಳೂರಿನಲ್ಲೂ ಜಾರಿಗೆ ತರಲು ಬಿಬಿಎಂಪಿ ನಿರ್ಧರಿಸಿದೆ. ಇದನ್ನು, ಕೋವಿಡ್ ವಿಶೇಷ ಸೇವೆಯಲ್ಲಿರುವ, ಪ್ರಿನ್ಸಿಪಲ್ ಸೆಕ್ರೆಟರಿ ಮಂಜುನಾಥ ಪ್ರಸಾದ್ ಖಚಿತ ಪಡಿಸಿದ್ದಾರೆ.