ಮಹಾರಾಷ್ಟ್ರದಲ್ಲಿ ಇದೆಂಥಾ ದುಸ್ಥಿತಿ; ಕೊರೊನಾ ರೋಗಿಗಳಿಗೆ ಕುರ್ಚಿಯಲ್ಲೇ ಚಿಕಿತ್ಸೆ!
ಮುಂಬೈ, ಏಪ್ರಿಲ್ 12: ಮಹಾರಾಷ್ಟ್ರದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಏರಿಕೆಯಿಂದಾಗಿ ಸೋಂಕಿತರಿಗೆ ಚಿಕಿತ್ಸೆ ನೀಡುವುದಕ್ಕೆ ಹಾಸಿಗೆಗಳ ಕೊರತೆ ಎದುರಾಗಿದೆ. ಓಸ್ಮಾನಾಬಾದ್ ಜಿಲ್ಲೆಯಲ್ಲಿ ಕೊವಿಡ್-19 ಸೋಂಕಿತರಿಗೆ ವ್ಹೀಲ್ ಚೇರ್ ಮೇಲೆ ಕೂರಿಸಿ ಆಕ್ಸಿಜನ್ ನೀಡಲಾಗುತ್ತಿದೆ.
ಓಸ್ಮನಾಬಾದ್ ಜಿಲ್ಲಾಸ್ಪತ್ರೆಯಲ್ಲಿ ಕೊರೊನಾವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುವುದಕ್ಕೆ ಹಾಸಿಗೆಗಳೇ ಇಲ್ಲದಂತಾಗಿದೆ. ಬೆಡ್ ಕೊರತೆ ನಡುವೆ ಸೋಂಕಿತರು ವ್ಹೀಲ್ ಚೇರ್ ಮೇಲೆ ಕುಳಿತು ಚಿಕಿತ್ಸೆ ಪಡೆದುಕೊಳ್ಳುವಂತಾ ದುಸ್ಥಿತಿ ನಿರ್ಮಾಣವಾಗಿದೆ.
Corona Alert: ಯಾವ ರಾಜ್ಯಗಳು ಅತಿಹೆಚ್ಚು ಅಪಾಯ ಎದುರಿಸುತ್ತಿವೆ?
ಕಳೆದ 24 ಗಂಟೆಗಳಲ್ಲಿ ಓಸ್ಮಾನಾಬಾದ್ ಜಿಲ್ಲೆಯಲ್ಲಿ 681 ಹೊಸ ಕೊವಿಡ್-19 ಸೋಂಕಿತ ಪ್ರಕರಣಗಳು ವರದಿಯಾಗಿದ್ದು, ಏಳು ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಜಿಲ್ಲೆಯಲ್ಲಿ 4300 ಕೊರೊನಾವೈರಸ್ ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಪುಣೆ, ಪಾಲ್ಗರ್ ಮತ್ತು ಭಂಡಾರಾದಲ್ಲಿ ಆಕ್ಸಿಜನ್ ಅಭಾವ
ಮಹಾರಾಷ್ಟ್ರದಲ್ಲಿ ಸೋಂಕಿತ ಪ್ರಕರಮಗಳು ಏರಿಕೆಯಾಗುತ್ತಿರುವುದರಿಂದ ಹಾಸಿಗೆ ಕೊರತೆ ಜೊತೆಗೆ ಆಮ್ಲಜನಕದ ಅಭಾವ ಕೂಡಾ ಎದುರಾಗಿದೆ. ಭಾನುವಾರ ಪುಣೆ, ಪಾಲ್ಗರ್, ಭಂಡಾರಾ ಮತ್ತು ಓಸ್ಮಾನಾಬಾದ್ ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆ ಬಗ್ಗೆ ತಜ್ಞರ ತಂಡವು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ರಾಜ್ಯದ ಹಲವು ಪ್ರದೇಶಗಳಲ್ಲಿ ಕೊವಿಡ್-19 ಸೋಂಕಿತರಿಗೆ ಚಿಕಿತ್ಸೆ ನೀಡುವುದಕ್ಕೆ ಎದುರಾಗಿರುವ ವೈದ್ಯಕೀಯ ಸವಾಲುಗಳ ಕುರಿತು ವರದಿಯಲ್ಲಿ ವಿವರಿಸಲಾಗಿದೆ.
ರಾಜ್ಯದಲ್ಲಿ ಶೇ.48.57ರಷ್ಟು ಕೊವಿಡ್-19 ಸೋಂಕಿತ ಪ್ರಕರಣಗಳು
ಭಾರತದಲ್ಲಿ ಪ್ರತಿನಿತ್ಯ ಪತ್ತೆಯಾಗುತ್ತಿರುವ ಕೊರೊನಾವೈರಸ್ ಸೋಂಕಿತ ಪ್ರಕರಣಗಳಲ್ಲಿ ಮಹಾರಾಷ್ಟ್ರ ಸಿಂಹಪಾಲು ಹೊಂದಿದೆ. ದೇಶದ ಶೇ.48.57 ಸೋಂಕಿತ ಪ್ರಕರಣಗಳು ಈ ರಾಜ್ಯದಲ್ಲೇ ವರದಿಯಾಗಿರುವುದು ಅಂಕಿ-ಅಂಶಗಳಲ್ಲಿ ಸ್ಪಷ್ಟವಾಗುತ್ತಿದೆ. ಕೊವಿಡ್-19 ಸೋಂಕು ನಿಯಂತ್ರಿಸುವ ಉದ್ದೇಶದಿಂದ ವಾರಾಂತ್ಯದ ಲಾಕ್ಡೌನ್ ಹಾಗೂ ನೈಟ್ ಕರ್ಫ್ಯೂ ಜಾರಿಗೊಳಿಸಲಾಗಿದೆ. ಕಠಿಣ ನಿಯಮಗಳ ಜಾರಿ ನಂತರದಲ್ಲೂ ಮಹಾಮಾರಿಯ ಅಟ್ಟಹಾಸ ಮುಂದುವರಿದಿದೆ.
ರಾಜ್ಯದಲ್ಲಿ ಲಾಕ್ಡೌನ್ ಜಾರಿಗೊಳಿಸಲು ಕಾರಣ?
ಮಹಾರಾಷ್ಟ್ರದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಏರಿಕೆ ಜೊತೆಗೆ ಲಸಿಕೆ ಕೊರತೆ, ಔಷಧಿಗಳ ಅಭಾವ, ಆಸ್ಪತ್ರೆಯಲ್ಲಿ ಹಾಸಿಗೆಗಳ ಅಲಭ್ಯತೆಯು ಮತ್ತಷ್ಟು ಸಂದಿಗ್ಧಿ ಸ್ಥಿತಿಯನ್ನು ಸೃಷ್ಟಿ ಮಾಡಿದೆ. ಈ ಹಿನ್ನೆಲೆ ಮುಂದಿನ ವಾರ ರಾಜ್ಯದಲ್ಲಿ ಸಂಪೂರ್ಣ ಲಾಕ್ಡೌನ್ ಜಾರಿಗೊಳಿಸುವ ಎಲ್ಲ ಸೂಚನೆಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ.
ರಾಜ್ಯದಲ್ಲಿ ಅತಿಹೆಚ್ಚು ಕೊವಿಡ್-19 ಸೋಂಕಿತ ಪ್ರಕರಣ
ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಗಳಲ್ಲಿ 63,294 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಒಂದು ದಿನದಲ್ಲಿ 34,008 ಸೋಂಕಿತರು ಗುಣಮುಖರಾಗಿದ್ದು, ಮಹಾಮಾರಿಗೆ 349 ಮಂದಿ ಪ್ರಾಣ ಬಿಟ್ಟಿದ್ದಾರೆ. ಒಟ್ಟು ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ 34,07,245ಕ್ಕೆ ಏರಿಕೆಯಾಗಿದೆ. ಈವರೆಗೂ 27,82,161 ಸೋಂಕಿತರು ಗುಣಮುಖರಾಗಿದ್ದು, ಮಹಾಮಾರಿಗೆ ಒಟ್ಟು 57,987 ಮಂದಿ ಪ್ರಾಣ ಬಿಟ್ಟಿದ್ದಾರೆ. ಉಳಿದಂತೆ ರಾಜ್ಯದಲ್ಲಿ 5,65,587 ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.