ಮಾದಕ ವ್ಯಸನಿಗಳ ಮೂಲಕ ನನ್ನ ಕುಟುಂಬವನ್ನು ಬಲೆಗೆ ಬೀಳಿಸುವ ಯತ್ನ - ಸಮೀರ್ ವಾಂಖೆಡೆ
ಮುಂಬೈ ಅಕ್ಟೋಬರ್ 25: ಡ್ರಗ್ ಪೆಡ್ಲರ್ ಮೂಲಕ ತನ್ನ ಕುಟುಂಬವನ್ನು ಬಲೆಗೆ ಬೀಳಿಸಲು ಪ್ರಯತ್ನಿಸಲಾಗುತ್ತಿದೆ ಎಂದು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ಸಿಬಿ) ಅಧಿಕಾರಿ ಸಮೀರ್ ವಾಂಖೆಡೆ ಹೇಳಿದ್ದಾರೆ. ಸಮೀರ್ ವಾಂಖೆಡೆ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಒಳಗೊಂಡಿರುವ ಮಾದಕ ದ್ರವ್ಯ ದಂಧೆ ಪ್ರಕರಣದ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.
"ಸಲ್ಮಾನ್ ಎಂಬ ಡ್ರಗ್ ಪೆಡ್ಲರ್ ನನ್ನ ಸಹೋದರಿಯನ್ನು ಸಂಪರ್ಕಿಸಿದ್ದರು. ಆದರೆ ಅವರು ಎನ್ಡಿಪಿಎಸ್ ಪ್ರಕರಣಗಳನ್ನು ತೆಗೆದುಕೊಳ್ಳುವುದಿಲ್ಲ ಆದ್ದರಿಂದ ಅವರು ಅವನನ್ನು ಹಿಂದಕ್ಕೆ ಕಳುಹಿಸಿದ್ದಾರೆ. ಸಲ್ಮಾನ್ ಮಧ್ಯವರ್ತಿ ಮೂಲಕ ನಮ್ಮನ್ನು ಬಲೆಗೆ ಬೀಳಿಸಲು ಪ್ರಯತ್ನಿಸಿದ್ದರು ಎಂದು ವಾಟ್ಸಾಪ್ ಚಾಟ್ಗಳಿಂದ ತಿಳಿದು ಬಂದಿದೆ. ಹೀಗಾಗಿ ಅವರನ್ನು ಬಂಧಿಸಿ ಜೈಲಿನಲ್ಲಿ ಇರಿಸಲಾಗಿದೆ" ಎಂದು ಸಮೀರ್ ವಾಂಖೆಡೆ ಹೇಳಿದರು.
ಮಹಾರಾಷ್ಟ್ರದ ಸಚಿವ ನವಾಬ್ ಮಲಿಕ್ ಅವರ ಕುಟುಂಬದ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿದ್ದಕ್ಕೆ ತಿರುಗೇಟು ನೀಡಿದ ಸಮೀರ್ ವಾಂಖೆಡೆ, "ನಮ್ಮನ್ನು ಬಲೆಗೆ ಬೀಳಿಸಲು ಯತ್ನಿಸಿದ ಮಧ್ಯವರ್ತಿ ಈ ವರ್ಷದ ಆರಂಭದಲ್ಲಿ ಮುಂಬೈ ಪೊಲೀಸರಿಗೆ ಸುಳ್ಳು ದೂರು ನೀಡಿದ್ದರು. ಅದರಿಂದ ಏನೂ ಹೊರಬರಲಿಲ್ಲ. ನನ್ನ ಕುಟುಂಬವನ್ನು ಬಲೆಗೆ ಬೀಳಿಸಲು ಸಲ್ಮಾನ್ನಂತಹ ಪೆಡ್ಲರ್ಗಳನ್ನು ಬಳಸಲಾಗಿದೆ. ಇದರ ಹಿಂದೆ ಡ್ರಗ್ಸ್ ಮಾಫಿಯಾ ಇದೆ" ಎಂದು ಆರೋಪಿಸಿದ್ದಾರೆ.
ಹಿಂದಿನ ದಿನ, ನವಾಬ್ ಮಲಿಕ್ ಅವರು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ, ಸಮೀರ್ ವಾಂಖೆಡೆ ಅವರ ಸಹೋದರಿ ಯಾಸ್ಮೀನ್ ವಾಂಖೆಡೆ ಮತ್ತು ಮಾದಕವಸ್ತು ಆರೋಪಿಗಳ ನಡುವೆ ವಾಟ್ಸಾಪ್ ಚಾಟ್ಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಸಮೀರ್ ವಾಂಖೆಡೆ ಅವರು 1 ಲಕ್ಷ ರೂಪಾಯಿ ಮೌಲ್ಯದ ಪ್ಯಾಂಟ್, 70,000 ಕ್ಕೂ ಹೆಚ್ಚು ಬೆಲೆಯ ಶರ್ಟ್ ಮತ್ತು 25-50 ಲಕ್ಷ ರೂಪಾಯಿ ಮೌಲ್ಯದ ವಾಚ್ಗಳನ್ನು ಧರಿಸುತ್ತಾರೆ ಎಂದು ನವಾಬ್ ಮಲಿಕ್ ಹೇಳಿಕೊಂಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಸಮೀರ್ ವಾಂಖೆಡೆ, ನನ್ನ ದುಬಾರಿ ಬಟ್ಟೆಗಳ ವಿಚಾರ ಕೇವಲ ವದಂತಿ, ಅವರಿಗೆ ಜ್ಞಾನ ಕಡಿಮೆ ಇರುವುದರಿಂದ ಈ ವಿಷಯಗಳನ್ನು ಪತ್ತೆ ಹಚ್ಚಬೇಕು ಎಂದಿದ್ದಾರೆ. ನವಾಬ್ ಮಲಿಕ್ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸುವುದಾಗಿಯೂ ಸಮೀರ್ ವಾಂಖೆಡೆ ಹೇಳಿದ್ದಾರೆ.
ನವಾಬ್ ಮಲಿಕ್ ಅವರು ಎನ್ಸಿಬಿ ಮುಂಬೈ ವಲಯ ನಿರ್ದೇಶಕ ಸಮೀರ್ ವಾಂಖೆಡೆ ವಿರುದ್ಧ ಅಕ್ರಮ ಫೋನ್ ಟ್ಯಾಪಿಂಗ್ ಮತ್ತು ತಮ್ಮ ಉದ್ಯೋಗವನ್ನು ಭದ್ರಪಡಿಸಿಕೊಳ್ಳಲು ನಕಲಿ ದಾಖಲೆಗಳ ಬಳಕೆ ಸೇರಿದಂತೆ ಹಲವು ಆರೋಪಗಳನ್ನು ಮಾಡಿದ್ದಾರೆ. ಸಮೀರ್ ವಾಂಖೆಡೆ ಹುಟ್ಟಿನಿಂದ ಮುಸ್ಲಿಂ ಆಗಿದ್ದು, ಸರ್ಕಾರಿ ನೌಕರಿ ಪಡೆಯಲು ನಕಲಿ ಪ್ರಮಾಣ ಪತ್ರ ಸಲ್ಲಿಸಿದ್ದಾರೆ ಎಂದು ಮಲಿಕ್ ಆರೋಪಿಸಿದ್ದಾರೆ. ಕ್ರೂಸ್ ಡ್ರಗ್ಸ್ ಪ್ರಕರಣದಲ್ಲಿ ಸುಲಿಗೆ ಆರೋಪದ ನಂತರ ಸಮೀರ್ ವಾಂಖೆಡೆ ರಾಜಕೀಯ ಬಿರುಗಾಳಿಯಲ್ಲಿ ಸಿಲುಕಿದ್ದಾರೆ. ಮಾತ್ರವಲ್ಲದೆ ಅಧಿಕಾರಿ ಇಲಾಖಾ ವಿಜಿಲೆನ್ಸ್ ತನಿಖೆ ಎದುರಿಸುತ್ತಿದ್ದಾರೆ.
ಅಕ್ಟೋಬರ್ 2 ಮುಂಬೈ ಕ್ರೂಸ್ ಮೇಲೆ ದಾಳಿ ನಡೆಸಿದ ಸಮೀರ್ ವಾಂಖೆಡೆ ನೇತೃತ್ವದ ಎನ್ಸಿಬಿ ತಂಡ ಬಾಲಿವುಡ್ ಸ್ಟಾರ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಸೇರಿದಂತೆ ಹಲವಾರು ಜನರನ್ನು ಬಂಧಿಸಿತ್ತು. ಸುಮಾರು ಮೂರು ವಾರಗಳವರೆಗೂ ಜೈಲುವಾಸ ಅನುಭವಿಸಿದ ಆರ್ಯನ್ ಖಾನ್ಗೆ ಎರಡು ಬಾರಿ ಜಾಮೀನು ನಿರಾಕರಿಸಲಾಗಿತ್ತು. ನಂತರ ಮೊನ್ನೆಯಷ್ಟೇ ಆರ್ಯನ್ ಖಾನ್ಗೆ ಷರತ್ತುಬದ್ಧ ಜಾಮೀನು ದೊರೆತಿದೆ. ಈ ನಡುವೆ ಮಹಾರಾಷ್ಟ್ರದ ಸಚಿವ ನವಾಬ್ ಮಲಿಕ್ ಸಮೀರ್ ವಾಂಖೆಡೆ ಮೇಲೆ ಲಂಚ ತೆಗೆದುಕೊಂಡಿರುವ, ಜಾತಿ ವಂಚಿತ, ಕುಟುಂಬಸ್ಥರು ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿರುವ ಆರೋಪ ಮಾಡಿದ್ದಾರೆ. ಈ ಎಲ್ಲಾ ಆರೋಪಗಳನ್ನು ತಳ್ಳಿ ಹಾಕಿದ ಸಮೀರ್ ವಾಂಖೆಡೆ ನವಾಬ್ ವಿರುದ್ಧ ದೂರು ದಾಖಲಿಸಿದ್ದಾರೆ.