ಮಹಾ ವಲಸೆ : ಬಿಜೆಪಿ ಸೇರಲು ಮುಂದಾದ ಎನ್ಸಿಪಿಯ 50 ಶಾಸಕರು
ಮುಂಬೈ, ಜುಲೈ 30: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಸಮೀಪವಾಗುತ್ತಿದ್ದಂತೆ ಕಾಂಗ್ರೆಸ್ ಹಾಗೂ ಎನ್ಸಿಪಿಯ ಶಾಸಕರು ಬಿಜೆಪಿ ಸೇರುವ ಪ್ರಕ್ರಿಯೆ ಮುಂದುವರೆದಿದೆ. ಎನ್ಸಿಪಿಯ ಹಿರಿಯ ಮುಖಂಡ, ಮಾಜಿ ಸಚಿವ ಮಧುಕರ್ ಪಿಚಾಡ್ ಅವರ ಪುತ್ರ ವೈಭವ್ ಅವರು ಶಿವಸೇನಾಗೆ ಸೇರುವ ಸುದ್ದಿ ಬಂದ ಬೆನ್ನಲ್ಲೇ ಸುಮಾರು 50 ಶಾಸಕರು ಬಿಜೆಪಿಗೆ ವಲಸೆ ಬರುವ ಮುನ್ಸೂಚನೆಯನ್ನು ಮಹಾರಾಷ್ಟ್ರದ ಜಲ ಸಂಪನ್ಮೂಲ ಸಚಿವ ಗಿರೀಶ್ ಮಹಾಜನ್ ನೀಡಿದ್ದಾರೆ.
'ವಿಧಾನಸಭಾ ಚುನಾವಣೆಗೂ ಮುನ್ನ ಬಿಜೆಪಿಗೆ ದೊಡ್ದ ಪ್ರಮಾಣದಲ್ಲಿ ಬೇರೆ ಪಕ್ಷಗಳಿಂದ ಸೇರ್ಪಡೆಯಾಗುತ್ತಿದ್ದೆ' ಎಂದು ಮಹಾರಾಷ್ಟ್ರದ ಜಲ ಸಂಪನ್ಮೂಲ ಸಚಿವ ಗಿರೀಶ್ ಮಹಾಜನ್ ಹೇಳಿದ್ದಾರೆ.
ಎನ್ಸಿಪಿಗೆ ಮತ್ತೆ ಆಘಾತ, ಬಿಜೆಪಿ ಸೇರಲು ಮುಂದಾದ ಶಾಸಕ
"ಎನ್ಸಿಪಿಯ ಹಿರಿಯ ನಾಯಕಿ ಚಿತ್ರಾ ವಾಘ್ ತಿಂಗಳ ಹಿಂದೆಯೇ ಬಿಜೆಪಿ ಸೇರ್ಪಡೆಯಾಗುವ ಬಯಕೆ ವ್ಯಕ್ತಪಡಿಸಿದ್ದರು. ಎನ್ಸಿಪಿಯಲ್ಲಿ ತನಗೆ ಭವಿಷ್ಯವಿಲ್ಲ ಎಂದಿದ್ದಾರೆ. ವಿಧಾನಸಭೆ ಚುನಾವಣೆಗೆ ಮೊದಲು ಬಿಜೆಪಿಗೆ ಸೇರಲು ಬೇರೆ ಪಕ್ಷಗಳ ಹಲವು ಶಾಸಕರು ಮುಂದಾಗಿದ್ದಾರೆ. ಕಾಂಗ್ರೆಸ್ ಹಾಗೂ ಎನ್ಸಿಪಿ ತಮ್ಮ ಶಾಸಕರನ್ನು ಕಳೆದುಕೊಂಡು ದುರ್ಬಲವಾಗಲಿವೆ'' ಎಂದು ಮಹಾಜನ್ ತಿಳಿಸಿದರು.
ಕೆಲ ದಿನಗಳ ಹಿಂದೆ ಮುಂಬೈನ ಎನ್ಸಿಪಿ ಘಟಕದ ಅಧ್ಯಕ್ಷ ಸಚಿನ್ ಆಹಿರ್ ಅವರು ಬಿಜೆಪಿ ಮಿತ್ರ ಪಕ್ಷ ಶಿವಸೇನಾ ಸೇರಿದ್ದರು. ಇದಾದ ಬಳಿಕ ಎನ್ಸಿಪಿ ರಾಜ್ಯ ಮಹಿಳಾ ಘಟಕದ ಮುಖ್ಯಸ್ಥೆ ಚಿತ್ರಾ ವಾಘ್ ಅವರು ಕೂಡಾ ಪಕ್ಷ ತೊರೆಯುತ್ತಿರುವುದಾಗಿ ಘೋಷಿಸಿದರು. ಚಿತ್ರಾ ಕೂಡಾ ಬಿಜೆಪಿ ಸೇರುವ ಸಾಧ್ಯತೆ ಹೆಚ್ಚಿದೆ.
ಎನ್ಸಿಪಿ ಮುಖಂಡ, ಮಾಜಿ ಅಬಕಾರಿ ಸಚಿವ ಗಣೇಶ್ ನಾಯ್ಕ್ ಅವರು ಭಾನುವಾರದಂದು ತಮ್ಮ ಬೆಂಬಲಿಗರ ಜೊತೆ ನವಿ ಮುಂಬೈನಲ್ಲಿ ಚರ್ಚೆ ನಡೆಸಿದ್ದು, ಸದ್ಯದಲ್ಲೇ ಬಿಜೆಪಿ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ.