ಆರ್ಯನ್ ಕೇಸ್: ಸಮೀರ್ ವಾಂಖೆಡೆ ವಿರುದ್ಧ ನವಾಬ್ ಮಲಿಕ್ ಹೊಸ ದಾಳಿ
ಮುಂಬೈ ನವೆಂಬರ್ 8: ಮುಂಬೈ ಕ್ರೂಸ್ ಪ್ರಕರಣ ನಾನಾ ಆರೋಪಗಳಿಂದ ದಿಕ್ಕು ತಪ್ಪುತ್ತಿರುವಂತೆ ಕಾಣಿಸುತ್ತಿದೆ. ಮಹಾರಾಷ್ಟ್ರದ ಸಚಿವ ನವಾಬ್ ಮಲಿಕ್ ಸೋಮವಾರ ಎನ್ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಮೇಲೆ ಹೊಸ ದಾಳಿ ಮಾಡಿದ್ದಾರೆ. ಸಮೀರ್ ವಾಂಖೆಡೆ ಅತ್ತಿಗೆ ಹರ್ಷದಾ ದೀನಾನಾಥ್ ರೆಡ್ಕರ್ ಡ್ರಗ್ ವ್ಯವಹಾರದಲ್ಲಿ ಭಾಗಿಯಾಗಿದ್ದಾರೆಯೇ ಎಂದು ಪ್ರಶ್ನಿಸುವ ಮೂಲಕ ಸುದ್ದಿಯಾಗಿದ್ದಾರೆ. ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ ಟೆನ್ಸಸ್ ಕಾಯ್ದೆ, ಅಕ್ರಮ ಸಾಗಣೆಯನ್ನು ತಡೆಗಟ್ಟುವ ಕಾಯ್ದೆಯಡಿಯಲ್ಲಿ 2008 ರಲ್ಲಿ ದಾಖಲಿಸಲಾದ ಪ್ರಕರಣದಲ್ಲಿ ಹರ್ಷದಾ ದೀನಾನಾಥ್ ರೆಡ್ಕರ್ ಅವರು "ಪ್ರತಿವಾದಿ ಮತ್ತು ವಕೀಲ" ಅಡಿಯಲ್ಲಿ ಪಟ್ಟಿ ಮಾಡಿರುವುದನ್ನು ನವಾಬ್ ಮಲಿಕ್ ಅವರು "ಪುರಾವೆ" ಹಂಚಿಕೊಂಡಿದ್ದಾರೆ.
ಎನ್ಸಿಪಿ ನಾಯಕ ಟ್ವೀಟ್ ಮಾಡಿ, "ಸಮೀರ್ ದಾವೂದ್ ವಾಂಖೆಡೆ, ನಿಮ್ಮ ಅತ್ತಿಗೆ ಹರ್ಷದಾ ದೀನಾನಾಥ್ ರೆಡ್ಕರ್ ಡ್ರಗ್ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದಾರೆಯೇ? ಪುಣೆ ನ್ಯಾಯಾಲಯದಲ್ಲಿ ಆಕೆಯ ಪ್ರಕರಣ ಬಾಕಿ ಇರುವ ಕಾರಣ ನೀವು ಉತ್ತರಿಸಬೇಕು" ಎಂದು ಬರೆದಿದ್ದಾರೆ. ನವಾಬ್ ಮಲಿಕ್ ಅವರ ಇತ್ತೀಚಿನ ಆರೋಪದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಮೀರ್ ವಾಂಖೆಡೆ ಅವರು ಜನವರಿ 2008 ರಲ್ಲಿ ಪ್ರಕರಣ ನಡೆದಾಗ ಅವರು ಸೇವೆಯಲ್ಲಿ ಇರಲಿಲ್ಲ ಎಂದು ಹೇಳಿದರು. ಜೊತೆಗೆ ಸಮೀರ್ ವಾಂಖೆಡೆ ಅವರ ತಂದೆ ಧ್ಯಾನದೇವ್ ವಾಂಖೆಡೆ ಅವರು ನವಾಬ್ ಮಲಿಕ್ ವಿರುದ್ಧ ಬಾಂಬೆ ಹೈಕೋರ್ಟ್ನಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ಮಾದಕ ವ್ಯಸನಿಗಳ ಮೂಲಕ ನನ್ನ ಕುಟುಂಬವನ್ನು ಬಲೆಗೆ ಬೀಳಿಸುವ ಯತ್ನ - ಸಮೀರ್ ವಾಂಖೆಡೆ
ಮಾತ್ರವಲ್ಲದೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ(ಎನ್ಸಿಬಿ)ದ ಮುಂಬೈ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಅವರ ಸಹೋದರಿ ಯಾಸ್ಮೀನ್ ವಾಂಖೆಡೆ ಅವರು ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಅವರು ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಸಚಿವ ನವಾಬ್ ಮಲಿಕ್ ಅವರು ತಮ್ಮ ಕುಟುಂಬದ ಗೌರವಕ್ಕೆ ಧಕ್ಕೆ ಉಂಟು ಮಾಡಿದ್ದಾರೆ ಎಂದು ಆರೋಪಿಸಿ ಯಾಸ್ಮೀನ್ ವಾಂಖೆಡೆ ದೂರು ನೀಡಿರುವುದಾಗಿ ಎಂದು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ. ಮಲಿಕ್ ತನ್ನ ಮತ್ತು ತನ್ನ ಕುಟುಂಬ ಸದಸ್ಯರ ಗೌರವಕ್ಕೆ ಧಕ್ಕೆ ಉಂಟು ಮಾಡುತ್ತಿದ್ದಾರೆ ಎಂದು ಯಾಸ್ಮೀನ್ ವಾಂಖೆಡೆ ಅವರು ಆರೋಪಿಸಿದ್ದಾರೆ.
ನನ್ನನ್ನು ಆನ್ಲೈನ್ನಲ್ಲಿ ಹಿಂಬಾಲಿಸುತ್ತಿದ್ದಾರೆ. ಸಾಮಾಜಿಕ ಮಾಧ್ಯಮಗಳಾದ ಇನ್ಸ್ಟಾಗ್ರಾಂ ಮತ್ತು ಫೇಸ್ಬುಕ್ಗಳಲ್ಲಿ ಇತ್ತೀಚೆಗೆ ನಾನು ಪೋಸ್ಟ್ ಮಾಡಿದ್ದ ನನ್ನ ವೈಯಕ್ತಿಕ ಫೋಟೋಗಳನ್ನು ಮಾಧ್ಯಮದವರಿಗೆ ಅಕ್ರಮವಾಗಿ ನೀಡುತ್ತಿದ್ದಾರೆ ಎಂದು ಯಾಸ್ಮೀನ್ ದೂರಿದ್ದಾರೆ. ಕಳೆದ ವಾರ ಯಾಸ್ಮೀನ್ ವಾಂಖೆಡೆಯವರಿಂದ ದೂರು ಸ್ವೀಕರಿಸಿದ್ದೇವೆ. ಆದರೆ, ಇಲ್ಲಿವರೆಗೂ ಯಾರ ವಿರುದ್ಧವೂ ಪ್ರಕರಣ ದಾಖಲಾಗಿಲ್ಲ ಎಂದು ಒಶಿವಾರಾ ಪೊಲೀಸ್ ಠಾಣೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Recommended Video
ಮುಂಬೈ ಡ್ರಗ್ ಕೇಸ್ ಕೈಗೆತ್ತಿಕೊಂಡಾಗಿನಿಂದಾಗಲೂ ಸಮೀರ್ ವಾಂಖೆಡೆ ವಿರುದ್ಧ ಹಲವು ಆರೋಪಗಳು ಕೇಳಿ ಬರುತ್ತಲೇ ಇವೆ. ಪ್ರಕರಣದ ಅರೋಪಿ ಪ್ರಭಾಕರ್ ಡ್ರಗ್ ಪ್ರಕರಣದಲ್ಲಿ 25 ಕೋಟಿ ಡೀಲ್ ನಡೆದಿದೆ ಎಂದು ದೂರಿದ್ದರು. ಇದರಲ್ಲಿ ಸಮೀರ್ ವಾಂಖೆಡೆ ಅವರು ಸೇರಿದ್ದಾರೆಂದು ಗಂಭೀರ ಆರೋಪ ಮಾಡಿದ್ದರು. ಇದರೊಂದಿಗೆ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಅವರು ಸಮೀರ್ ಅವರ ಮೇಲೆ ಫೋರ್ಜರಿ ಆರೋಪಗಳನ್ನು ಮಾಡಿದ್ದಾರೆ. ಡ್ರಗ್ ಕೇಸ್ಗೆ ಸಂಬಂಧಿಸಿದಂತೆ ಮಾಲ್ಡೀವ್ಸ್ನಲ್ಲಿ ಹಣದ ವ್ಯವಹಾರ ಮಾಡಿಕೊಳ್ಳಲಾಗಿದೆ. ಈ ವೇಳೆ ಸಮೀರ್ ಕೂಡ ಮಾಲ್ಡೀವ್ಸ್ನಲ್ಲಿದ್ದರು ಎಂದು ನೇರವಾಗಿ ಆರೋಪ ಮಾಡಿದ್ದರು. ಸಮೀರ್ ವಿವಾಹದ ಬಗ್ಗೆ ಜೊತೆಗೆ ಸಮೀರ್ ಅವರ 'ತಾಯಿಯ ಧರ್ಮ'ದ ಮೇಲೆ ಟಾರ್ಗೆಟ್ ಮಾಡಲಾಗಿತ್ತು. ಈಗ ನವಾಬ್ ಸಮೀರ್ ಅವರ ಅತ್ತಿಗೆ ವಿರುದ್ಧ ಧ್ವನಿ ಎತ್ತಿದ್ದಾರೆ. ಇಷ್ಟೆಲ್ಲಾ ಆರೋಪಗಳನ್ನು ತಳ್ಳಿ ಹಾಕಿದ ಸಮೀರ್ ವಾಂಖೆಡೆ ತನಿಖೆಗೆ ತಾವು ಸಿದ್ಧ ಎಂದಿದ್ದಾರೆ. ನವಾಬ್ ಮಲಿಕ್ ವಿನಾಕಾಋಣ ತಮ್ಮ ಮೇಲೆ ಆರೋಪಗಳನ್ನು ಮಾಡುತ್ತಿದ್ದಾರೆಂದು ದೂರಿದ್ದಾರೆ. ಒಟ್ಟಾರೆಯಾಗಿ ಮುಂಬೈ ಡ್ರಗ್ಸ್ ಕೇಸ್ ಬೇರೆ ಯಾವುದೋ ಹಂತಕ್ಕೆ ಬಂದು ತಲುಪುವಂತೆ ಮಾಡುವ ಪ್ರಯತ್ನಗಳು ನಡೆಯುತ್ತಿರುವುದು ಸುಳ್ಳಲ್ಲ.