ಟಿಆರ್ಪಿ ಹಗರಣ; ಅರ್ನಬ್ ಗೋಸ್ವಾಮಿಯಿಂದ ಲಕ್ಷ ಲಕ್ಷ ಲಂಚ?
ಮುಂಬೈ, ಡಿಸೆಂಬರ್ 29: ನಕಲಿ ಟಿಆರ್ಪಿ ಹಗರಣಕ್ಕೆ ಸಂಬಂಧಿಸಿದಂತೆ ಕಳೆದ ವಾರ ಬಂಧಿತರಾಗಿದ್ದ ಬ್ರಾಡ್ ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ (ಬಾರ್ಕ್) ಮಾಜಿ ಸಿಇಒ ಪಾರ್ಥೋ ದಾಸ್ ಗುಪ್ತಾ ಹಲವು ಮಾಹಿತಿಗಳನ್ನು ಪೊಲೀಸರಿಗೆ ನೀಡಿದ್ದಾರೆ. ರಿಪಬ್ಲಿಕ್ ಟಿ.ವಿ ಮಾಲೀಕ ಹಾಗೂ ಸಂಪಾದಕ ಅರ್ನಬ್ ಗೋಸ್ವಾಮಿ ತಮ್ಮ ಚಾನೆಲ್ ಟಿಆರ್ಪಿ ತಿರುಚಲು ಲಕ್ಷಾಂತರ ರೂಪಾಯಿ ಲಂಚ ನೀಡಿದ್ದರು ಎಂದು ತಿಳಿಸಿದ್ದಾರೆ.
ಸೋಮವಾರ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಮುಂಬೈ ಅಪರಾಧ ವಿಭಾಗದ ಪೊಲೀಸರು ವರದಿ ಸಲ್ಲಿಸಿದ್ದು, ಬಾರ್ಕ್ ಮಾಜಿ ಸಿಇಒ ಪಾರ್ಥೋ ದಾಸ್ ಗುಪ್ತಾ ಟಿಆರ್ಪಿ ತಿರುಚಿರುವುದಾಗಿ ತಿಳಿಸಿದ್ದಾರೆ. ಹೆಚ್ಚಿನ ವಿಚಾರಣೆಗೆ ಅವರನ್ನು ತಮ್ಮ ವಶಕ್ಕೆ ನೀಡುವಂತೆ ನ್ಯಾಯಾಲಯಕ್ಕೆ ಕೋರಿಕೊಂಡಿದ್ದಾರೆ.
ನಕಲಿ ಟಿಆರ್ಪಿ ಹಗರಣ: ಬಾರ್ಕ್ ಮಾಜಿ ಸಿಇಒ ಬಂಧನ
ಕಳೆದ ವಾರ ಪೊಲೀಸರು ಪುಣೆಯಲ್ಲಿ ದಾಸ್ ಗುಪ್ತಾರನ್ನು ಬಂಧಿಸಿದ್ದು, ಅವರ ಮನೆಯಿಂದ ಮೂರು ಕೆಜಿ ಬೆಳ್ಳಿ ಸೇರಿದಂತೆ ಹಲವು ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಂಡಿದ್ದರು. ಈ ದುಬಾರಿ ವಸ್ತುಗಳನ್ನು ಅರ್ನಬ್ ಗೋಸ್ವಾಮಿ ನೀಡಿದ ಹಣದಿಂದಲೇ ಖರೀದಿಸಿದ್ದು ಎಂದು ಹೇಳಿಕೆ ನೀಡಿದ್ದಾರೆ.
ದಾಸ್ ಗುಪ್ತಾ 2013ರಿಂದ 2019ರ ಅವಧಿಯಲ್ಲಿ ಬಾರ್ಕ್ ಸಿಇಒ ಆಗಿದ್ದು, ಆ ಅವಧಿಯಲ್ಲಿ ಅರ್ನಬ್ ಗೋಸ್ವಾಮಿ ಲಕ್ಷ ಲಕ್ಷ ಲಂಚ ನೀಡಿದ್ದರು ಎಂದು ತಿಳಿಸಿದ್ದಾರೆ. ಟಿಆರ್ಪಿ ಮಾಪನದ ಗೌಪ್ಯ ಮಾಹಿತಿಯನ್ನು ದಾಸ್ ಗುಪ್ತಾ ಅರ್ನಬ್ ಗೋಸ್ವಾಮಿಯೊಂದಿಗೆ ಹಂಚಿಕೊಂದ್ದರು ಎನ್ನಲಾಗಿದೆ. ದಾಸ್ ಗುಪ್ತಾ ತಮ್ಮ ಹುದ್ದೆ ದುರುಪಯೋಗ ಮಾಡಿಕೊಂಡು ರಿಪಬ್ಲಿಕ್ ಟಿವಿ ಇಂಗ್ಲಿಷ್ ಹಾಗೂ ರಿಪಬ್ಲಿಕ್ ಭಾರತ್ ಹಿಂದಿ ಟಿಆರ್ಪಿ ತಿರುಚಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ.
ಟಿಆರ್ಪಿ ಹಗರಣಕ್ಕೆ ಸಂಬಂಧಿಸಿದಂತೆ ಇದುವರೆಗೂ 15 ಮಂದಿ ಬಂಧಿಸಲಾಗಿದೆ. ಸದ್ಯಕ್ಕೆ ದಾಸ್ ಗುಪ್ತಾ ಪೊಲೀಸ್ ಕಸ್ಟಡಿಯನ್ನು ಡಿ.30ರವರೆಗೂ ವಿಸ್ತರಿಸಲಾಗಿದೆ.