ಅರ್ನಬ್ ಬಂಧನ: ಈ ದಿನಕ್ಕಾಗಿ ಇಷ್ಟು ಕಾಲ ಕಾದಿದ್ದೆವು ಎಂದ ಅನ್ವಯ್ ಕುಟುಂಬ
ಮುಂಬೈ, ನವೆಂಬರ್ 4: ಪತ್ರಕರ್ತ ಅರ್ನಬ್ ಗೋಸ್ವಾಮಿ ಅವರ ಬಂಧನವನ್ನು ಅನ್ವಯ್ ನಾಯ್ಕ್ ಅವರ ಕುಟುಂಬದ ಸದಸ್ಯರು ಸ್ವಾಗತಿಸಿದ್ದಾರೆ. 2018ರಲ್ಲಿ ನಡೆದ 53 ವರ್ಷದ ಒಳಾಂಗಣ ವಿನ್ಯಾಸಕಾರ ಅನ್ವಯ್ ನಾಯ್ಕ್ ಅವರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಅರ್ನಬ್ ಗೋಸ್ವಾಮಿ ಅವರನ್ನು ಬುಧವಾರ ಬಂಧಿಸಲಾಗಿದೆ.
ಅರ್ನಬ್ ಅವರನ್ನು ಬಂಧಿಸಿದ ಕ್ರಮವನ್ನು ಸ್ವಾಗತಿಸಿರುವ ಅನ್ವಯ್ ಅವರ ಪತ್ನಿ ಮತ್ತು ಮಗಳು, ಈ ಕ್ಷಣಕ್ಕಾಗಿ ಬಹಳ ಕಾಲದಿಂದ ಕಾಯುತ್ತಿದ್ದು, ತಮಗೆ ನ್ಯಾಯ ಸಿಗಲಿದೆ ಎಂಬ ಭರವಸೆ ಹೊಂದಿರುವುದಾಗಿ ತಿಳಿಸಿದರು.
ಅರ್ನಬ್ ಗೋಸ್ವಾಮಿ ಬೆಂಬಲಕ್ಕೆ ನಿಂತ ಅಮಿತ್ ಶಾ, ಸ್ಮೃತಿ, ನಡ್ಡಾ
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅನ್ವಯ್ ನಾಯ್ಕ್ ಅವರ ಪತ್ನಿ ಅಕ್ಷತಾ ನಾಯ್ಕ್, 'ನನ್ನ ಪತಿ ತಮ್ಮ ಆತ್ಮಹತ್ಯೆ ನೋಟ್ನಲ್ಲಿ ಮೂವರು ವ್ಯಕ್ತಿಗಳ ಹೆಸರು ಬರೆದಿದ್ದರು. ಆದರೂ ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ಇಂದು ಮಹಾರಾಷ್ಟ್ರ ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ. ನಾನು ಅವರಿಗೆ ಕೃತಜ್ಞನಾಗಿದ್ದೇನೆ. ನನ್ನ ಪತಿಗೆ ಆಗ ಹಣ ಸಿಕ್ಕಿದ್ದರೆ ಅವು ಇಂದು ಬದುಕಿರುತ್ತಿದ್ದರು' ಎಂದರು. ಮುಂದೆ ಓದಿ.
ಪತ್ರ ಬರೆದರೂ ಪ್ರಯೋಜನವಾಗಲಿಲ್ಲ
ಈ ಪ್ರಕರಣದ ಬಗ್ಗೆ ಪ್ರಧಾನ ಮಂತ್ರಿಗಳ ಕಚೇರಿ, ಸೈಬರ್ ಘಟಕ ಇಲಾಖೆ, ಆರ್ಥಿಕ ಕಚೇರಿ ಘಟಕ ಸೇರಿದಂತೆ ಅನೇಕರಿಗೆ ಪತ್ರ ಬರೆಯಲಾಗಿತ್ತು. ಆದರೆ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ ಎಂದು ಕುಟುಂಬ ಆರೋಪಿಸಿದೆ.
ಅರ್ನಬ್ ಗೋಸ್ವಾಮಿ ಬಂಧನವಾಗಿರುವುದು ಯಾವ ಪ್ರಕರಣದಲ್ಲಿ?: ಇಲ್ಲಿದೆ ವಿವರ
ನಿರಂತರ ಬೆದರಿಕೆ ಹಾಕುತ್ತಿದ್ದರು
'ನನ್ನ ತಂದೆಗೆ ಬರಬೇಕಿದ್ದ 83 ಲಕ್ಷ ರೂ ಅನ್ನು ರಿಪಬ್ಲಿಕ್ ಟಿವಿ ನೀಡಿರಲಿಲ್ಲ. ಅಪ್ಪ ಅವರಿಗೆ ಇ-ಮೇಲ್ ಮಾಡಿದ್ದರೂ ಅವರಿಗೆ ಹಣ ಸಿಕ್ಕಿರಲಿಲ್ಲ. ನನ್ನ ತಂದೆಗೆ ನಿರಂತರವಾಗಿ ಬೆದರಿಕೆ ಬರುತ್ತಿತ್ತು. ಬೈಕ್ನಲ್ಲಿ ಫಾಲೋ ಮಾಡುತ್ತಿದ್ದರು. ಜನರು ನಮ್ಮ ಮನೆಗೆ ಬಂದು ಕುಳಿತುಕೊಳ್ಳುತ್ತಿದ್ದರು. ನಮ್ಮ ಫೋನ್ಗಳನ್ನು ಟ್ಯಾಪ್ ಮಾಡಲಾಗುತ್ತಿತ್ತು. ನನ್ನ ಜೀವನವನ್ನು ಹಾಳು ಮಾಡುವುದಾಗಿಯೂ ಬೆದರಿಕೆ ಹಾಕಿದ್ದರು' ಎಂದು ಅನ್ವಯ್ ಅವರ ಮಗಳು ಆದ್ನ್ಯಾ ನಾಯ್ಕ್ ತಿಳಿಸಿದರು.
ಅರ್ನಬ್ ಪ್ರಭಾವ ಬಳಸಿದ್ದರು
'ಅರ್ನಬ್ ಬಹಳ ಪ್ರಭಾವಿ ವ್ಯಕ್ತಿ. ಅವರಿಂದಾಗಿ ಈ ಪ್ರಕರಣವನ್ನು ಮುಚ್ಚಿಹಾಕಲಾಗಿತ್ತು. ಇಂದು ನಮಗೆ ಜನರಿಂದ ಬೆಂಬಲ ಸಿಗುತ್ತಿದೆ. ಆದರೆ ಆಗ ಏಕೆ ಬಂಧನವಾಗಿರಲಿಲ್ಲ? ಅದನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಆತ್ಮಹತ್ಯೆ ಪ್ರಕರಣ ನಡೆದಾಗ ತನಿಖಾ ಸಂಸ್ಥೆಗಳ ಮೇಲೆ ನಂಬಿಕೆ ಇರಿಸಿದ್ದ ನಾನು ಎಲ್ಲ ಕಚೇರಿಗಳಿಗೆ ಅಲೆದಾಡಿದ್ದೆ. 500 ಅಥವಾ 5000 ರೂ ಹೋಗಿದ್ದರೆ ಇಷ್ಟು ತಲೆಕಡೆಸಿಕೊಳ್ಳುತ್ತಿರಲಿಲ್ಲ' ಎಂದು ಹೇಳಿದರು.
ಮುಂಬೈನಲ್ಲಿ ಬೆಳ್ಳಂಬೆಳಿಗ್ಗೆ ಹೈಡ್ರಾಮಾ: ಅರ್ನಬ್ ಗೋಸ್ವಾಮಿ ಬಂಧನ
ಅರ್ನಬ್ ಮಾತ್ರ ಬದುಕಬೇಕೇ?
'ನಮಗೆ ಬದುಕುವ ಹಕ್ಕು ಇಲ್ಲವೇ? ಅರ್ನಬ್ ಗೋಸ್ವಾಮಿ ಅವರಿಗೆ ಮಾತ್ರವೇ ಬದುಕುವ ಹಕ್ಕು ಇದೆಯೇ? ಅವರು ಸುಶಾಂತ್ ಸಿಂಗ್ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು. ಡೆತ್ ನೋಟ್ನಲ್ಲಿ ನನ್ನ ಪತಿ ಅವರ ಹೆಸರನ್ನೇ ಬರೆದಿದ್ದರೂ ಯಾವ ಕ್ರಮವನ್ನೂ ತೆಗೆದುಕೊಳ್ಳಲಿಲ್ಲ. ಭಾರತದ ಜನರು ಸತ್ಯಕ್ಕೆ ಬೆಂಬಲ ನೀಡಬೇಕು. ಇದರಲ್ಲಿ ರಾಜಕೀಯ ಹಸ್ತಕ್ಷೇಪದ ಅಗತ್ಯವಿಲ್ಲ' ಎಂದರು.