ಅಂಟಿಲಿಯಾ ಕೇಸ್: ಎನ್ಐಎ ಬಲೆಗೆ ಮುಂಬೈ ಎನ್ಕೌಂಟರ್ ಸ್ಪೆಷಲಿಸ್ಟ್ ಪ್ರದೀಪ್ ಶರ್ಮಾ
ಮುಂಬೈ, ಜೂನ್ 17: ಅಂಟಿಲಿಯಾ ಬಾಂಬ್ ಬೆದರಿಕೆ ಪ್ರಕರಣ ಹಾಗೂ ಉದ್ಯಮಿ ಮನ್ ಸುಖ್ ಹಿರಾನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನ ಮಾಜಿ ಪೊಲೀಸ್ ಹಾಗೂ ಎನ್ಕೌಂಟರ್ ಸ್ಪೆಷಲಿಸ್ಟ್ ಆಗಿರುವ ಪ್ರದೀಪ್ ಶರ್ಮಾರನ್ನು ರಾಷ್ಟ್ರೀಯ ತನಿಖಾ ತಂಡದ ಅಧಿಕಾರಿಗಳು ಗುರುವಾರ ಬಂಧಿಸಿದ್ದಾರೆ.
ಮುಂಬೈನ ಎನ್ಐಎ ಕೇಂದ್ರ ಕಚೇರಿಯಲ್ಲಿ ಪ್ರದೀಪ್ ಶರ್ಮಾರನ್ನು ಬಂಧಿಸಲಾಗಿದೆ. ಇದಕ್ಕೂ ಮೂರು ಗಂಟೆಗಳ ಹಿಂದೆಯಷ್ಟೇ ಅಧೇರಿಯಲ್ಲಿ ಇರುವ ಅವರ ಮನೆಯಲ್ಲಿ ಎನ್ಐಎ ತಂಡದ ಅಧಇಕಾರಿಗಳು ಹುಡುಕಾಟ ನಡೆಸಿದ್ದರು.
ಅಂಬಾನಿ ಮನೆ ಬಾಂಬ್ ಬೆದರಿಕೆ: ಸಚಿನ್ ವಾಜೆ ಸೇವೆಯಿಂದ ವಜಾ
ಬಾಂಬ್ ಬೆದರಿಕೆ ಹಾಗೂ ಕೊಲೆ ಪ್ರಕರಣದಲ್ಲಿ ಇತರೆ ಆರೋಪಿಗಳು ನೀಡಿರುವ ಹೇಳಿಕೆ ಮತ್ತು ಸಾಕ್ಷ್ಯಗಳನ್ನು ಆಧರಿಸಿ ಪ್ರದೀಪ್ ಶರ್ಮಾರನ್ನು ಬಂಧಿಸಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಮೂರನೇ ಬಾರಿ ಪ್ರದೀಪ್ ಶರ್ಮಾ ವಿಚಾರಣೆ
ಅಂಟಿಲಿಯ ಬಾಂಬ್ ಬೆದರಿಕೆ ಪ್ರಕರಣ ಹಾಗೂ ಉದ್ಯಮಿ ಮನ್ ಸುಖ್ ಹಿರಾನ್ ಕೊಲೆ ಪ್ರಕರಣದಲ್ಲಿ ಎನ್ಕೌಂಟರ್ ಸ್ಪೆಷಲಿಸ್ಟ್ ಎನಿಸಿರುವ ಪ್ರದೀಶ್ ಶರ್ಮಾ ಈಗಾಗಲೇ ಎರಡು ಬಾರಿ ರಾಷ್ಟ್ರೀಯ ತನಿಖಾ ತಂಡದ ಅಧಿಕಾರಿಗಳ ವಿಚಾರಣೆ ಎದುರಿಸಿದ್ದಾರೆ. ಎರಡೂ ಪ್ರಕರಣಗಳಲ್ಲಿ ಪ್ರಮುಖ ಆರೋಪಿ ಎಂದು ಗುರುತಿಸಿಕೊಂಡಿರುವ ಮುಂಬೈನ ಮಾಜಿ ಪೊಲೀಸ್ ಸಚಿನ್ ವಾಜೆ ಅನ್ನು ಎನ್ಐಎ ಅಧಿಕಾರಿಗಳು ಬಂಧಿಸಿದ್ದರು. ಇದೇ ಸಚಿನ್ ವಾಜೆ ಜೊತೆ ನಿಕಟ ಸಂಪರ್ಕವನ್ನು ಹೊಂದಿರುವ ಹಿನ್ನೆಲೆ ಪ್ರದೀಶ್ ಶರ್ಮಾ ಹೆಸರು ಪ್ರಕರಣದಲ್ಲಿ ಕೇಳಿ ಬಂದಿತ್ತು.
ಪ್ರದೀಪ್ ಶರ್ಮಾ ಹೆಸರಿನಲ್ಲಿ 113 ಎನ್ಕೌಂಟರ್
ಕಳೆದ 1983ರಲ್ಲಿ ಮುಂಬೈನಲ್ಲಿ ಸಬ್-ಇನ್ಸ್ ಪೆಕ್ಟರ್ ಆಗಿ ಪ್ರದೀಪ್ ಶರ್ಮಾ ಆಯ್ಕೆಯಾಗಿದ್ದರು. ಮುಂಬೈ ಭೂಗತ ಲೋಕದಲ್ಲಿ ನಡೆದ 300ಕ್ಕೂ ಹೆಚ್ಚು ಎನ್ಕೌಂಟರ್ ಪೈಕಿ 113 ಎನ್ಕೌಂಟರ್ ಗಳು ಪ್ರದೀಪ್ ಶರ್ಮಾ ಹೆಸರಿನಲ್ಲಿವೆ. 2019ರಲ್ಲಿ ಪ್ರದೀಪ್ ಶರ್ಮಾ ಸ್ವಯಂಪ್ರೇರಿತವಾಗಿ ನಿವೃತ್ತಿ ಪಡೆದು ಶಿವಸೇನೆಗೆ ಸೇರ್ಪಡೆಯಾದರು. ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ನಾಲ ಸೋಪರಾ ಕ್ಷೇತ್ರದ ಶಿವಸೇನೆ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಕಂಡಿದ್ದರು.
ಇಬ್ಬರು ಆರೋಪಿಗಳ ಜೊತೆ ಪ್ರದೀಪ್ ಶರ್ಮಾ ನಂಟು
ಮುಂಬೈನಲ್ಲಿ ಅಂಬಾನಿ ಕಾರ್ ಬಾಂಬ್ ಬೆದರಿಕೆ ಪ್ರಕರಣದಲ್ಲಿ ಸಚಿನ್ ವಾಜೆ ಮತ್ತು ಕಾನ್ಸ್ ಟೇಬಲ್ ವಿನಾಯಕ್ ಶಿಂಧೆ ಅನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಈ ಇಬ್ಬರ ಜೊತೆ ಪ್ರದೀಪ್ ಶರ್ಮಾ ಸಂಪರ್ಕ ಹೊಂದಿರುವುದು ಬೆಳಕಿಗೆ ಬಂದಿತ್ತು. ಪ್ರದೀಪ್ ಶರ್ಮಾ, ಸಚಿನ್ ವಾಜೆ ಮತ್ತು ವಿನಾಯಕ್ ಶಿಂಧೆ ನಡುವಿನ ಸ್ನೇಹ ಸಂಪರ್ಕದ ಬಗ್ಗೆ ಇಡೀ ಮುಂಬೈ ಪೊಲೀಸ್ ಪಡೆಗೆ ತಿಳಿದಿತ್ತು. ಮುಂಬೈ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಮೊದಲ ಬಾರಿ ಭೇಟಿಯಾಗಿದ್ದ ಸಚಿನ್ ವಾಜೆ ಮತ್ತು ಪ್ರದೀಪ್ ಶರ್ಮಾ ನಂತರದಲ್ಲಿ ಉತ್ತಮ ಸ್ನೇಹಿತರಾಗಿದ್ದರು.
ಎನ್ಐಎ ತಂಡದಿಂದ ಮತ್ತಿಬ್ಬರು ಆರೋಪಿಗಳ ಬಂಧನ
ಕಳೆದ ಫೆಬ್ರವರಿ ತಿಂಗಳಿನಲ್ಲಿ ಉದ್ಯಮಿ ಮುಕೇಶ್ ಅಂಬಾನಿ ಮುಂಬೈ ನಿವಾಸದ ಎದುರಿನಲ್ಲಿ ಸ್ಫೋಟಕಗಳನ್ನು ತುಂಬಿಸಲಾದ SUV ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ರಾಷ್ಟ್ರೀಯ ತನಿಖಾ ತಂಡದ ಅಧಿಕಾರಿಗಳು ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿದ್ದರು. ಸಂತೋಷ್ ಶೇಲಾರ್ ಮತ್ತು ಆನಂದ್ ಜಾಧವ್ ಅನ್ನು ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಜೂನ್ 21ರವರೆಗೂ ಆರೋಪಿಗಳನ್ನು ಎನ್ಐಎ ಅಧಿಕಾರಿಗಳ ವಶಕ್ಕೆ ಒಪ್ಪಿಸಲಾಗಿದೆ.
ಅಂಟಿಲಿಯಾ ಬೆದರಿಕೆ ಹಾಗೂ ಮನ್ ಸುಖ್ ಮರ್ಡರ್ ಕೇಸ್?
ಕಳೆದ 2021ರ ಫೆಬ್ರವರಿ 25 ರಂದು ಉದ್ಯಮಿ ಮುಕೇಶ್ ಅಂಬಾನಿಯ ನಿವಾಸ ಆಂಟಿಲಿಯಾದ ಹೊರಗೆ ದೊರೆತ SUV ವಶಪಡಿಸಿಕೊಂಡಾಗ ಅದರಲ್ಲಿ ಸ್ಫೋಟಕಗಳು ಪತ್ತೆಯಾಗಿದ್ದವು. ಈ ಎಸ್ಯುವಿ ಮಾಲೀಕ ಥಾಣೆ ಮೂಲದ ಉದ್ಯಮಿ ಮನ್ ಸುಖ್ ಹತ್ಯೆ ನಡೆದಿದ್ದು, ಮಾರ್ಚ್ 5ರಂದು ಹಳ್ಳದಲ್ಲಿ ಶವ ಪತ್ತೆಯಾಗಿತ್ತು. ಈ ಎರಡು ಪ್ರಕರಣದಲ್ಲಿ ಆರೋಪಿ ಶೇಲಾರ್ ಮತ್ತು ಜಾಧವ್ ಪಾತ್ರವಿದೆ ಎಂದು ಆರೋಪಿಸಲಾಗಿತ್ತು. ಶೇಲಾರ್ ವಿಚಾರಣೆ ಸಂದರ್ಭದಲ್ಲಿ ಪ್ರದೀಪ್ ಶರ್ಮಾ ಹೆಸರನ್ನು ಉಲ್ಲೇಖಿಸಿದ್ದರು ಎನ್ನಲಾಗಿದೆ.