ಮಹಾರಾಷ್ಟ್ರ: ಮನ್ಸುಖ್ ಮೃತದೇಹ ಪತ್ತೆಯಾದ ಸ್ಥಳದಲ್ಲೇ ಮತ್ತೊಂದು ಶವ ಪತ್ತೆ
ಮುಂಬೈ, ಮಾರ್ಚ್ 20: ಉದ್ಯಮಿ ಮುಕೇಶ್ ಅಂಬಾನಿ ನಿವಾಸಿ ಬಳಿ ಸ್ಪೋಟಕಗಳು ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ಮನ್ಸುಖ್ ಹಿರೇನ್ ಮೃತದೇಹ ಪತ್ತೆಯಾದ ಸ್ಥಳದಲ್ಲೇ ಮತ್ತೊಂದು ಶವ ಪತ್ತೆಯಾಗಿದೆ.
ಮುಂಬೈ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆಯುತ್ತಿದೆ. ಈಗಾಗಲೇ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಪೊಲೀಸ್ ಅಧಿಕಾರಿ ಸಚಿನ್ ವಾಜೆಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಮುಕೇಶ್ ಅಂಬಾನಿಗೆ ಬೆದರಿಕೆ ಪ್ರಕರಣ: ಸ್ಫೋಟಕ ಪತ್ತೆಗೂ ಕೆಲವು ದಿನ ಮುಂಚೆ ವಾಜೆ-ಹಿರೇನ್ ಭೇಟಿ
ಮುಂಬ್ರಾದ ರೇತಿ ಬಂದರ್ ಪ್ರದೇಶದಲ್ಲಿ ಮನ್ಸುಖ್ ಹಿರೇನ್ ಮೃತದೇಹ ಪತ್ತೆಯಾದ ಸ್ಥಳದಲ್ಲೇ ಇನ್ನೊಂದು ಮೃತದೇಹ ಪತ್ತೆಯಾಗಿರುವುದು ಹಲವು ಸಂಶಯಕ್ಕೆ ಕಾರಣವಾಗಿದೆ. ಸ್ಥಳೀಯ ನಿವಾಸಿ ಶೇಖ್ ಸಲೀಂ ಅಬ್ದುಲ್ ಎಂಬುವವರ ಮೃತದೇಹ ಇದು ಎಂದು ಗುರುತಿಸಲಾಗಿದೆ.
ಅಂಬಾನಿ ಮನೆ ಮುಂದೆ ಪತ್ತೆಯಾದ ಸ್ಫೋಟಕಗಳಿದ್ದ ಸ್ಕಾರ್ಪಿಯೋ ನಮ್ಮದು ಎಂದು ಥಾಣೆ ಮೂಲದ ವ್ಯಾಪಾರಿ ಮನ್ಸುಖ್ ಹೇಳಿಕೊಂಡಿದ್ದರು.
ತಮ್ಮ ವಾಹನ ಫೆ.18 ರಂದು ಐರೋಲಿ ಮುಲುಂದ್ ಸೇತುವೆ ಬಳಿಯಿಂದ ಕಳುವಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ಆದರೆ ಮಾರ್ಚ್ 5 ರಂದು ಹಿರೇನ್ ಅವರ ಮೃತದೇಹ ಪತ್ತೆಯಾಗಿತ್ತು.
ಇದೀಗ ಅದೇ ಜಾಗದಲ್ಲಿ ಪತ್ತೆಯಾಗಿರುವ ದೇಹಕ್ಕೂ ಈ ಪ್ರಕರಣಕ್ಕೂ ಏನಾದರೂ ಸಂಬಂಧವಿದೆಯೇ ಎಂದು ತನಿಖೆ ನಡೆಸಲಾಗುತ್ತಿದೆ.