ಮೈತ್ರಿ ಮಾಡಿಕೊಳ್ಳದಿದ್ರೆ ನೀವು ಪುಡಿ ಪುಡಿ: ಶಿವಸೇನಾಗೆ ಅಮಿತ್ ಶಾ ವಾರ್ನಿಂಗ್
Recommended Video
ಮುಂಬೈ, ಜನವರಿ 7: ಬಿಜೆಪಿ ವಿರುದ್ಧ ನಿರಂತರವಾಗಿ ಕಿಡಿಕಾರುತ್ತಿರುವ ಶಿವಸೇನಾಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಮುಂಬರುವ ಲೋಕಸಭೆ ಚುನಾವಣೆಯ ವೇಳೆಗೆ ಬಿಜೆಪಿ ಮತ್ತು ಶಿವಸೇನಾ ನಡುವೆ ಮೈತ್ರಿ ನಡೆಯದೆ ಹೋದರೆ, ಬಿಜೆಪಿಯು ಇತರೆ ವಿರೋಧ ಪಕ್ಷಗಳಂತೆಯೇ ಮಾಜಿ ಮಿತ್ರಪಕ್ಷಗಳನ್ನೂ ಪುಡಿಗಟ್ಟಲಿದೆ ಎಂದು ಅಮಿತ್ ಶಾ, ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರನ್ನು ಎಚ್ಚರಿಸಿದ್ದಾರೆ.
ಹಾಗೆಯೇ ಚುನಾವಣೆಗೂ ಮುನ್ನ ಮೈತ್ರಿ ಮಾಡಿಕೊಂಡರೆ ತನ್ನ ಎಲ್ಲ ಮಿತ್ರಪಕ್ಷಗಳಿಗೂ ಪಕ್ಷ ನಿಶ್ಚಿತವಾಗಿ ಗೆಲುವು ಕೊಡಿಸಲಿದೆ ಎಂದು ಅಮಿತ್ ಶಾ ಆಫರ್ ಮುಂದಿಟ್ಟಿದ್ದಾರೆ.
ಲಾತುರ್, ಒಸ್ಮಾನಾಬಾದ್, ಹಿಂಗೊಲಿ ಮತ್ತು ನಾಂಡೇದ್ ಜಿಲ್ಲೆಗಳಲ್ಲಿ ಭಾನುವಾರ ಅಮಿತ್ ಶಾ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ತಾಕತ್ತಿದ್ರೆ NDA ಯಿಂದ ಹೊರಹೋಗಿ... ಶಿವಸೇನೆಗೆ RSS ಖಡಕ್ ಎಚ್ಚರಿಕೆ?!
ರಾಜ್ಯದಲ್ಲಿನ 48 ಲೋಕಸಭೆ ಕ್ಷೇತ್ರಗಳಲ್ಲಿ 40 ಸೀಟುಗಳನ್ನು ಗೆಲ್ಲುವಂತೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಬಿಜೆಪಿ ಕಾರ್ಯಕರ್ತರಿಗೆ ಕರೆನೀಡಿದ್ದರು.
ನಮ್ಮೊಂದಿಗಿದ್ದರೆ ಅವರಿಗೆ ಗೆಲುವು ಖಚಿತ
'ಶಿವಸೇನಾ ಜೊತೆಗೆ ಮೈತ್ರಿ ವಿಚಾರದಲ್ಲಿ ಕಾರ್ಯಕರ್ತರು ಗೊಂದಲಕ್ಕೆ ಒಳಗಾಗುವುದು ಬೇಡ. ಒಂದು ವೇಳೆ ಮಿತ್ರಪಕ್ಷಗಳು ನಮ್ಮೊಂದಿಗೆ ಸೇರಿಕೊಂಡರೆ ಅವರ ಗೆಲುವನ್ನು ಖಚಿತಪಡಿಸುತ್ತೇವೆ ಅಥವಾ ಅವರನ್ನು ಸೋಲಿಸುತ್ತೇವೆ ಕೂಡ. ಪ್ರತಿ ಬೂತ್ನಲ್ಲಿಯೂ ಪಕ್ಷದ ಕಾರ್ಯಕರ್ತರು ಸಿದ್ಧತೆ ಆರಂಭಿಸಬೇಕು ಎಂದು ಸಲಹೆ ನೀಡಿದರು.
ಲೋಕಸಭಾ ಮೈತ್ರಿ: ಶಿವಸೇನೆಗೆ ಖಡಕ್ ಸಂದೇಶ ರವಾನಿಸಿದ ಅಮಿತ್ ಶಾ
ನಾವು ಸಿದ್ಧರಿದ್ದೇವೆ ಎಂದ ಶಿವಸೇನಾ
ಅಮಿತ್ ಶಾ ಅವರ ಎಚ್ಚರಿಕೆಯಿಂದ ಆಕ್ರೋಶಗೊಂಡಿರುವ ಶಿವಸೇನಾ, ಬಿಜೆಪಿ ಅಧ್ಯಕ್ಷ ಅವರ ಹೇಳಿಕೆ ಭಾವಾವೇಶದ್ದು ಮತ್ತು ಉದ್ದಟತನದ್ದು ಎಂದು ವ್ಯಾಖ್ಯಾನಿಸಿದೆ. ತನಗೆ ಸವಾಲು ಒಡ್ಡುವವರನ್ನು ಎದುರಿಸಲು ಸಿದ್ಧ ಇರುವುದಾಗಿ ಶಿವಸೇನಾ ಹೇಳಿದೆ.
'ಹಿಂದುತ್ವವನ್ನು ಅನುಸರಿಸುತ್ತಿರುವವರ ಸಹಾಯ ಬಿಜೆಪಿಗೆ ಬೇಕಾಗಿಲ್ಲ ಎಂದೆನಿಸುತ್ತಿದೆ. ಇತ್ತೀಚಿನ ಚುನಾವಣೆಗಳಲ್ಲಿ ಜನರು ಅವರಿಗೆ ಅವರ ಜಾಗವನ್ನು ತೋರಿಸಿದ್ದಾರೆ. ಮಹಾರಾಷ್ಟ್ರದಲ್ಲಿಯೂ ಜನರು ಅದನ್ನೇ ಮಾಡುತ್ತಾರೆ. ಅವರನ್ನು ಎದುರಿಸಲು ನಾವು ಸನ್ನದ್ಧರಾಗಿದ್ದೇವೆ' ಎಂದು ಸೇನಾ ಹೇಳಿದೆ.
ಮನಮೋಹನ್ ಸಿಂಗ್ ಯಶಸ್ವೀ ಪ್ರಧಾನಿ ಎಂದ ಶಿವಸೇನೆ ಮುಖಂಡ
ಮೋದಿ ವರ್ಚಸ್ಸಿಗೆ ಈಗ ಹೊಳಪಿಲ್ಲ
ದೇಶವು 'ಮುರಿದ ಜನಾದೇಶ'ದತ್ತ ಸಾಗುತ್ತಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರೇ ಹೊಣೆ' ಎಂದಿರುವ ಶಿವಸೇನಾ, 2014ರಲ್ಲಿ ನೀಡಿದ ಪೂರ್ಣ ಜನಾದೇಶದ ಅವಕಾಶವನ್ನು ವ್ಯರ್ಥಗೊಳಿಸಲಾಗಿದೆ ಎಂದಿದೆ.
2014ರಲ್ಲಿ ಕಾಂಗ್ರೆಸ್ಅನ್ನು ಸೋಲಿಸಲು ಮತದಾರರು ನಿರ್ಧರಿಸಿದ್ದರಿಂದ ಮೋದಿಗೆ ಬೆಂಬಲ ನೀಡುವ ಅಲೆ ಎದ್ದಿತ್ತು. ಮೋದಿ ಅವರ ಜೀವನಕ್ಕೂ ಮೀರಿದ ವರ್ಚಸ್ಸು ಈಗ ಹೊಳಪು ಕಳೆದುಕೊಂಡಿದೆ. ರಾಹುಲ್ ಗಾಂಧಿ ಅವರ ನಾಯಕತ್ವ ಮೋದಿ ಅವರಷ್ಟು ಎತ್ತರದ್ದಲ್ಲ. ಆದರೆ, ಪ್ರಸ್ತುತ ಸರ್ಕಾರದಿಂದ ಜನರು ಭ್ರಮನಿರಸನಗೊಂಡಿರುವುದರಿಂದ ರಾಹುಲ್ ಗಾಂಧಿ ಪ್ರಮುಖ್ಯ ಪಡೆದುಕೊಂಡಿದ್ದಾರೆ ಎಂದು ಶಿವಸೇನಾದ ಮುಖವಾಣಿ 'ಸಾಮ್ನಾ'ದ ಕಾರ್ಯನಿರ್ವಾಹಕ ಸಂಪಾದಕ, ಸಂಸದ ಸಂಜಯ್ ರಾವತ್ ಹೇಳಿದ್ದಾರೆ.
ಆಕ್ಸಿಜನ್ ಖಾಲಿನಾ? ಮೋದಿಗೆ ಶಿವಸೇನೆ ತಪರಾಕಿ!
ಗಡ್ಕರಿಗೆ ಪಟ್ಟ ತಪ್ಪಿದ್ದು ಏಕೆ?
2009-2013ರ ವರೆಗೆ ಬಿಜೆಪಿ ಅಧ್ಯಕ್ಷರಾಗಿದ್ದ ನಿತಿನ್ ಗಡ್ಕರಿ ಅವರಿಗೆ ಎರಡನೆಯ ಅವಧಿಯಲ್ಲಿ ಮುಂದುವರಿಯದಂತೆ ರಾಜಕೀಯ ಸಂಚುಗಳು ತಡೆದವು. ಪೂರ್ತಿ ಗ್ರೂಪ್ ಹಗರಣ ಸೇರಿದಂತೆ ಅನೇಕ ಆರೋಪಗಳನ್ನು ಅವರು ಎದುರಿಸಿದರು. ಅವರಿಗೆ ಎರಡನೆಯ ಅವಧಿಯ ಅಧಿಕಾರ ನೀಡಲಿಲ್ಲ. ಅದರ ಕಹಿ ನೆನಪು ಗಡ್ಕರಿ ಅವರಲ್ಲಿ ಇನ್ನೂ ಇದೆ. ಇದಕ್ಕಾಗಿಯೇ 2019ರ ಲೋಕಸಭೆ ಫಲಿತಾಂಶ ಅತಂತ್ರವಾಗಿರಬೇಕು ಎಂದು ಗಡ್ಕರಿ ಕಾಯುತ್ತಿದ್ದಾರೆ ಎಂಬುದಾಗಿ ರಾವತ್ ಬರೆದಿದ್ದಾರೆ.