ಮಹಾರಾಷ್ಟ್ರ ಚುನಾವಣೆ: ಅನುಮಾನ ಹುಟ್ಟಿಸುವ ಅಮಿತ್ ಶಾ ಹೇಳಿಕೆ
ಮುಂಬೈ, ಸೆಪ್ಟೆಂಬರ್ 23: ಮಹಾರಾಷ್ಟ್ರದಲ್ಲಿ ಬಿಜೆಪಿ ತನ್ನ ಯಾವತ್ತಿನ ಮೈತ್ರಿಪಕ್ಷ ಶಿವಸೇನೆಯೊಂದಿಗೆ ಮೈತ್ರಿ ಮುರಿದುಕೊಳ್ಳಲಿದೆಯಾ? ಈ ಬಾರಿ ವಿಧಾನಸಭೆ ಚುನಾವಣೆಯಲ್ಲೂ ಏಕಾಂಗಿಯಾಗಿ ಸ್ಪರ್ಧಿಸುವ ಬಗ್ಗೆ ಬಿಜೆಪಿ ಚಿಂತನೆ ನಡೆಸಿದೆ.
ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಕುರಿತಂತೆ ನಡೆಸಿದ ಸಭೆಯಲ್ಲಿ ಮಾತನಾಡಿದ ಅಮಿತ್ ಶಾ, "ಮಹಾರಾಷ್ಟ್ರದಲ್ಲಿ ಏನೇ ಆಗಲಿ, ಆಗದಿರಲಿ ಬಿಜೆಪಿಯಂತೂ ಬಹುಮತದಿಂದ ಅಧಿಕಾರಕ್ಕೆ ಬರುತ್ತದೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಹಾರಾಷ್ಟ್ರ ಮತ್ತು ಹರ್ಯಾಣದಲ್ಲಿ ಅ.21 ರಂದು ವಿಧಾನಸಭೆ ಚುನಾವಣೆ
ಅವರ ಮಾತಲ್ಲಿದ್ದ "ಏನೇ ಆಗಲಿ, ಆಗದಿರಲಿ" ಎಂಬ ಮಾತನ್ನು 'ಶಿವಸೇನೆಯೊಂದಿಗೆ ಮೈತ್ರಿಯಾಗಲಿ, ಆಗದೇ ಇರಲಿ' ಎಮದು ಅರ್ಥೈಸಿಕೊಂಡರೆ, ಸ್ವತಂತ್ರ ಸ್ಪರ್ಧೆಗೂ ಬಿಜೆಪಿ ಸಿದ್ಧ ಎಂಬ ಸುಳಿವನ್ನು ಅಮಿತ್ ಶಾ ಕೊಟ್ಟಿದ್ದಾರೆ. ಅದಕ್ಕೆ ಪೂರಕ ಎಂಬಂತೆ ಬಿಜೆಪಿ ರಾಷ್ಟ್ರಾಧ್ಯಕ್ಷ, ಗೃಹಸಚಿವ ಅಮಿತ್ ಶಾ ಹೇಳಿಕೆ
ಆದಿತ್ಯ ಠಾಕ್ರೆ V/s ದೇವೇಂದ್ರ ಫಡ್ನವಿಸ್
ಈ ಬಾರಿ ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದರೆ ಶಿವಸೇನೆ ಮುಖಂಡ ಉದ್ಧವ್ ಠಾಕ್ರೆ ಅವರ ಪುತ್ರ ಆದಿತ್ಯ ಠಾಕ್ರೆ ಅವರನ್ನೇ ಮುಖ್ಯಮಂತ್ರಿಯನ್ನಾಗಿ ಮಾಡಲಾಗುವುದು ಎಂದು ಶಿವಸೇನೆಯ ನಾಯಕರು ಹಲವು ಬಾರಿ ಹೇಳಿದ್ದರು. ಈ ಹೇಳಿಕೆ ಉತ್ತರ ಎಂಬಂತೆ ಮಾತನಾಡಿದ ಅಮಿತ್ ಶಾ, ಆದಿತ್ಯ ಠಾಕ್ರೆ ಅವರ ಹೆಸರನ್ನೇ ಉಲ್ಲೇಖಿಸದೆ, ಮಹಾರಾಷ್ಟ್ರದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ದೇವೇಂದ್ರ ಫಡ್ನವಿಸ್ ಅವರೇ ಮತ್ತೆ ಮುಖ್ಯಮಂತ್ರಿಯಾಗುತ್ತಾರೆ ಎಂದು ಹೇಳಿದ್ದಾರೆ.
ಮೈತ್ರಿಗೆ ಒಲ್ಲೆ ಎಂದರೆ ಶಿವಸೇನೆಗೇ ನಷ್ಟ
ಈಗ ಮೈತ್ರಿಗೆ ಒಪ್ಪುವುದು, ಬಿಡುವುದು ಶಿವಸೇನೆಯ ಕೈಲಿದೆ. ದೇಶದಲ್ಲಿ ಬಿಜೆಪಿ ಪರ ಅಲೆ ಇದೆ ಎಂಬುದು ಕಳೆದ ಲೋಕಸಭೆ ಚುನಾವಣೆಯ ಸಂದರ್ಭದಲ್ಲೇ ತಿಳಿದುಬಂದಿದೆ. ಇಂಥ ಸಂದರ್ಭದಲ್ಲಿ ತಾನು ಸ್ವತಂತ್ರವಾಗಿ ಸ್ಪರ್ಧಿಸುವ ನಿರ್ಧಾರಕ್ಕೆ ಶಿವಸೇನೆ ಬಂದರೆ ನಷ್ಟವೇ. ಅಕಸ್ಮಾತ್ ಸ್ವತಂತ್ರವಾಗಿ ಸ್ಪರ್ಧಿಸಿದರೂ, ಶಿವಸೇನೆ ಬಹುಮತ ಪಡೆಯುವುದಕ್ಕೂ ಸಾಧ್ಯವಿಲ್ಲ ಎಂಬುದು ಶಿವಸೇನೆಗೂ ಗೊತ್ತಿರುವ ವಿಚಾರ! ಆದ್ದರಿಂದ ಸಾಧ್ಯವಾದಷ್ಟು ಸೀಟು ಗಿಟ್ಟಿಸಿಕೊಳ್ಳುವ ಚೌಕಾಸಿ ಮಾಡಿ, ನಂತರ ಶಿವಸೇನೆ ಮೈತ್ರಿಗೆ ಒಪ್ಪುತ್ತದೆ ಎಂಬುದು ಅಮಿತ್ ಶಾಗೆ ಗೊತ್ತಿಲ್ಲದ ವಿಚಾರವೇನಲ್ಲ. ಅಕಸ್ಮಾತ್ ಚುನಾವಣೆ ಪೂರ್ವ ಮೈತ್ರಿಗೆ ಒಪ್ಪಿಗೆ ಸೂಚಿಸದಿದ್ದರೂ ಚುನಾವಣೆಯ ನಂತರವಾದರೂ ಅದು ಮೈತ್ರಿಗೆ ಮುಂದಾಗುತ್ತದೆ ಎಂಬುದು ಬಿಜೆಪಿಗೆ ಗೊತ್ತಿರುವ ಸಂಗತಿ.
ಜ್ಯೋತಿಷ್ಯ: ಮಹಾರಾಷ್ಟ್ರದಲ್ಲಿ ಬಿಜೆಪಿ ಗೆದ್ದರೂ ಫಡ್ನವೀಸ್ ಗೆ ಸಿಎಂ ಯೋಗವಿಲ್ಲ
50:50 ಸೀಟು ಹಂಚಿಕೆ ಎಂದಿದ್ದ ಶಿವಸೇನೆ
ಮಹಾರಾಷ್ಟ್ರದ ಒಟ್ಟು 288 ಕ್ಷೇತ್ರಗಳ ಪೈಕಿ ಬಿಜೆಪಿ ಮತ್ತು ಶಿವಸೇನೆಗಳು ತಲಾ 144 ಕ್ಷೇತ್ರ ಹಂಚಿಕೊಳಳಬೇಕು ಎಂದು ಶಿವಸೇನೆ ಹೇಳಿತ್ತು. ಆದರೆ ಬಿಜೆಪಿ ಅದಕ್ಕೆ ಒಪ್ಪಿಗೆ ಸೂಚಿಸಿರಲಿಲ್ಲ. ಕೊನೆಗೆ ಕನಿಷ್ಠ 120 ಕ್ಷೇತ್ರಗಳಲ್ಲಾದರೂ ಸ್ಪರ್ಧಿಸಲು ಅವಕಾಶ ನೀಡುವಂತೆ ಶಿವಸೇನೆ ಕೇಳಿಕೊಂಡಿತ್ತು. ಅದಕ್ಕೂ ಬಿಜೆಪಿ ಸೊಪ್ಪು ಹಾಕಿಲ್ಲ.
2014 ರಲ್ಲೂ ಸ್ವತಂತ್ರ ಸ್ಪರ್ಧೆ
2014 ರಲ್ಲೂ ಉಭಯ ಪಕ್ಷಗಳ ನಡುವೆ ಸೀಟು ಹಂಚಿಕೆ ವಿಷಯದಲ್ಲಿ ಉಂಟಾದ ಭಿನ್ನಾಭಿಪ್ರಾಯದಿಂದಾಗಿ ಶಿವಸೇನೆ ಸ್ತಂತ್ರವಾಗಿ ಸ್ಪರ್ಧಿಸಿತ್ತು. ಆ ನಂತರ ಬಿಜೆಪಿ 122(288), ಶಿವಸೇನೆ 63 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದವು. ಕೆಲವು ತಿಂಗಳ ನಂತರ ಉಭಯ ಪಕ್ಷಗಳೂ ಮೈತ್ರಿ ಮಾಡಿಕೊಂಡಿದ್ದವು. ಈ ಬಾರಿ ಮಹಾರಾಷ್ಟ್ರದಲ್ಲಿ ಅಕ್ಟೋಬರ್ 21 ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು, ಅ.24 ರಂದು ಫಲಿತಾಂಶ ಹೊರಬೀಳಲಿದೆ.