ಸುಶಾಂತ್ ಕೇಸ್: ತಿರುವು ನೀಡುತ್ತಿದೆ ಆಂಬ್ಯುಲೆನ್ಸ್ ಸಿಬ್ಬಂದಿ ಹೇಳಿಕೆ
ಮುಂಬೈ, ಆ.10: ಹಿಂದಿ ಚಿತ್ರರಂಗದ ಜನಪ್ರಿಯ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಬೆಳವಣಿಗೆ ನಡೆದಿವೆ. ಪ್ರಕರಣವನ್ನು ಕೈಗೆತ್ತಿಕೊಂಡಿರುವ ಜಾರಿ ನಿರ್ದೇಶನಾಲಯವು ಒಂದೆಡೆ ರಿಯಾ ಚಕ್ರವರ್ತಿ ಹಾಗೂ ಸ್ನೇಹಿತರ ವಿಚಾರಣೆ ತೀವ್ರಗೊಳಿಸಿದೆ. ಇನ್ನೊಂದೆಡೆ ಸುಶಾಂತ್ ಶವವನ್ನು ಅಪಾರ್ಟ್ಮೆಂಟ್ ನಿಂದ ಆಸ್ಪತ್ರೆಗೆ ದಾಖಲಿಸಿದ ಆಂಬ್ಯುಲೆನ್ಸ್ ಸಿಬ್ಬಂದಿ ನೀಡಿರುವ ಹೇಳಿಕೆ ಈ ಪ್ರಕರಣದಲ್ಲಿ ತಿರುವು ನೀಡುತ್ತಿದೆ.
ಸುಶಾಂತ್ ಸಿಂಗ್ ಅವರ ದೇಹವನ್ನು ಅಪಾರ್ಟ್ಮೆಂಟ್ ನಿಂದ ಲೀಲಾವತಿ ಆಸ್ಪತ್ರೆ ನಂತರ ಆರ್ ಸಿ ಕೂಪರ್ ಆಸ್ಪತ್ರೆಗೆ ಸಾಗಿಸುವ ತನಕ ಆಂಬ್ಯುಲೆನ್ಸ್ ಸಿಬ್ಬಂದಿ ಸೂಕ್ಷ್ಮ ಪರಿಶೀಲಿಸಿ, ತಾವು ಕಂಡಿದ್ದನ್ನು ಹೇಳಿದ್ದಾರೆ.
ನಟ ಸುಶಾಂತ್ ಸಿಂಗ್ ಸಾವಿಗೆ 'Asphyxia' ಕಾರಣ ಎಂದ ಮರಣೋತ್ತರ ಪರೀಕ್ಷೆ ವರದಿ
ಆತ್ಮಹತ್ಯೆ ಪ್ರಕರಣಗಳ ದೇಹಕ್ಕೂ ಸುಶಾಂತ್ ಅವರ ದೇಹಕ್ಕೂ ಇದ್ದ ವ್ಯತ್ಯಾಸ, ಮೊಣ ಕಾಲು ಟ್ವಿಸ್ಟ್ ಆಗಿದ್ದರ ಬಗ್ಗೆ, ಕುತ್ತಿಗೆಯಲ್ಲಿನ ಒತ್ತಡದ ಗುರುತಿನ ಬಗ್ಗೆ ಸಿಬ್ಬಂದಿ ಹೇಳಿದ್ದನ್ನು ಉಲ್ಲೇಖಿಸಿ ಸಂಸದ ಸುಬ್ರಮಣಿಯನ್ ಸ್ವಾಮಿ ಕೂಡಾ ಟ್ವೀಟ್ ಮಾಡಿ, ಸುಶಾಂತ್ ದೇಹದ ಮರಣೋತ್ತರ ಪರೀಕ್ಷೆ ನಡೆಸಿದ ಐವರು ವೈದ್ಯರನ್ನು ಮೊದಲಿಗೆ ಪ್ರಶ್ನಿಸಿ ಎಂದಿದ್ದಾರೆ.
ಚಂದ್ರನಲ್ಲಿ ಫ್ಲಾಟ್ ಖರೀದಿಸಿದ್ದ ಸುಶಾಂತ್, ಸಾವಿಗೆ ಆರ್ಥಿಕ ಬಿಕ್ಕಟ್ಟು ಕಾರಣವೆ?
|
ವೈದ್ಯರ ವಿಚಾರಣೆ ಮಾಡಲಿ
ಆರ್ ಸಿ ಕೂಪರ್ ಮುನ್ಸಿಪಾಲ್ ಆಸ್ಪತ್ರೆಯ ಐವರು ವೈದ್ಯರನ್ನು ಮೊದಲಿಗೆ ಸಿಬಿಐ ವಿಚಾರಣೆ ನಡೆಸಲಿ. ಆಂಬ್ಯುಲೆನ್ಸ್ ಸಿಬ್ಬಂದಿ ಪ್ರಕಾರ ಮೊಣಕಾಲು ಮುರಿದಿತ್ತು. ವೈದ್ಯರು ನೀಡಿದ ಅಟಾಪ್ಸಿ ವರದಿಗೂ ಈ ಹೇಳಿಕೆಗೂ ಹೋಲಿಸಿದರೆ ಬೇರೆಯದ್ದೇ ಕಥೆ ಹೇಳುತ್ತದೆ. ಈ ಬಗ್ಗೆ ವಿಚಾರಣೆ ಅಗತ್ಯ ಎಂದು ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.
ಆಂಬ್ಯುಲೆನ್ಸ್ ಸಿಬ್ಬಂದಿ ಹೇಳಿದ್ದೇನು
ಸುಶಾಂತ್ ದೇಹವನ್ನು ಮೊದಲಿಗೆ ನೋಡಿದಾಗ ಹಳದಿ ಬಣ್ಣಕ್ಕೆ ತಿರುಗಿತ್ತು. ನೇಣು ಹಾಕಿಕೊಂಡು ಸತ್ತಿದ್ದರೆ ದೇಹದ ಬಣ್ಣದಲ್ಲಿ ಬದಲಾವಣೆಯಾಗುವುದಿಲ್ಲ. ಬಾಯಿಂದ ನೊರೆ ಬಂದಿರಬೇಕಿತ್ತು. ಕಣ್ಣು ಮೇಲಕ್ಕೆ ತಿರುಗಿರಬೇಕಿತ್ತು. ನಾಲಗೆ ಕಚ್ಚಿಕೊಂಡಿರಬೇಕಿತ್ತು. ಇಂಥ ಯಾವುದೇ ಲಕ್ಷಣಗಳು ಕಂಡು ಬಂದಿರಲಿಲ್ಲ. ಇದೆಲ್ಲಕ್ಕಿಂತ ಮುಖ್ಯವಾಗಿ ಕುತ್ತಿಗೆ ಬಳಿ ಕಾಣಿಸುವ ಗುರುತು ಕೂಡಾ ಮುಂಭಾಗದಲ್ಲಿ ಗಾಢವಾಗಿದೆ. ಸಾಮಾನ್ಯವಾಗಿ ನೇಣು ಬಿಗಿದಾಗ ಇರುವಂಥ ಗುರುತು ಇಲ್ಲ. ಕಾಲು ಬಾಗಿತ್ತು. ಮೊಣಕಾಲು ಮುರಿದಂತೆ ಕಾಣುತ್ತಿತ್ತು. ಕಾಲಿನಲ್ಲಿ ಗುರುತು ಪರೀಕ್ಷಿಸಬಹುದು ಎಂದಿದ್ದಾರೆ.
ವಿಸೇರಾದಲ್ಲಿ ವಿಷ ಇಲ್ಲ, ಸುಶಾಂತ್ ಸಾವು ಪ್ರಕರಣಕ್ಕೆ ತಿರುವು
ಮರಣೋತ್ತರ ಪರೀಕ್ಷೆ ವರದಿ ಮಹತ್ವ
ಜೂನ್ 14ರಂದು 34 ವರ್ಷ ವಯಸ್ಸಿನ ಬಿಹಾರ ಮೂಲದ ನಟ ಸುಶಾಂತ್ ಸಿಂಗ್ ಅವರ ದೇಹವು ಬಾಂದ್ರಾದ ಅವರ ನಿವಾಸದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ ಕಗ್ಗಂಟಾಗಿರುವ ಸಂದರ್ಭದಲ್ಲಿ ಮರಣೋತ್ತರ ಪರೀಕ್ಷೆ ವರದಿ ಮಹತ್ವ ಪಡೆದುಕೊಂಡಿತ್ತು. ಅಂತಿಮ ಮರಣೋತ್ತರ ಪರೀಕ್ಷೆಯ ವರದಿಯನ್ನು ಮುಂಬೈ ಪೊಲೀಸರಿಗೆ ವೈದ್ಯರು ಸಲ್ಲಿಸಿದ್ದಾರೆ. ಇದು 'ನೇಣು ಹಾಕಿಕೊಂಡ ಕಾರಣದಿಂದ ಉಸಿರುಗಟ್ಟಿ ಸಂಭವಿಸಿದ ಸಾವು' ಎಂದೇ ಹೇಳಿದ್ದಾರೆ. ಸುಶಾಂತ್ ಸಿಂಗ್ ರಜಪೂತ್ ಅವರ ದೇಹದಲ್ಲಿ ಯಾವುದೇ ಒದ್ದಾಟದ ಕುರುಹು ಅಥವಾ ಹೊರ ಭಾಗದ ಗಾಯಗಳಿಲ್ಲ. ಅವರ ಉಗುರುಗಳು ಸಹ ಸ್ವಚ್ಛವಾಗಿವೆ. ಇದು ಸ್ಪಷ್ಟವಾಗಿ ಆತ್ಮಹತ್ಯೆಯ ಪ್ರಕರಣ. ಇದರಲ್ಲಿ ಯಾವುದೇ ಬೇರೆ ಕೈವಾಡಗಳು ಇಲ್ಲ ಎಂದು ಆರ್ ಸಿ ಕೂಪರ್ ಮುನ್ಸಿಪಾಲ್ ಆಸ್ಪತ್ರೆಯ ಐವರು ತಜ್ಞ ವೈದ್ಯರು ತಮ್ಮ ವರದಿಯಲ್ಲಿ ಹೇಳಿದ್ದಾರೆ.
ವಿಸೇರಾ ಪರೀಕ್ಷಾ ವರದಿಯಲ್ಲಿ ಏನಿದೆ?
ಸುಶಾಂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದ ವಿಸೇರಾ ಪರೀಕ್ಷಾ ವರದಿ ಹೊರ ಬಂದಿದೆ. ಇದರಲ್ಲಿ ಯಾವುದೇ ರೀತಿ ಸಂಚು ಕಂಡು ಬಂದಿಲ್ಲ, ವಿಷಪ್ರಾಶನವಾಗಿಲ್ಲ ಎಂದು ಹೇಳಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡುವ ಸಾಧ್ಯತೆಯಿದೆ. ಆದರೆ, ಬಲವಂತವಾಗಿ ನೇಣು ಹಾಕಿರುವ ಸಾಧ್ಯತೆ, ಆತ್ಮಹತ್ಯೆಗೆ ಪ್ರಚೋದನೆ, ಮಾನಸಿಕ ಹಿಂಸೆ ನೀಡಿರುವ ಸಾಧ್ಯತೆ ಬಗ್ಗೆ ತನಿಖಾಧಿಕಾರಿಗಳು ಗಮನ ಹರಿಸಿದ್ದು ತನಿಖೆ ಮುಂದುವರೆದಿದೆ. ಜುಲೈ 1ರಂದು ಜೆಜೆ ಆಸ್ಪತ್ರೆ ನೀಡಿರುವ ವರದಿಯಲ್ಲೇ ವಿಸೇರಾದಲ್ಲಿ ವಿಷ ಇಲ್ಲ ಎಂಬುದು ಸ್ಪಷ್ಟವಾಗಿತ್ತು. ಆದರೆ, ಪ್ರಕರಣದ ಸೂಕ್ಷ್ಮತೆ ಹಾಗೂ ಎರಡನೇ ಬಾರಿ ದೃಢಪಡಿಸಿಕೊಳ್ಳಲು ಮತ್ತೊಮ್ಮೆ ಪರೀಕ್ಷೆಗೊಳಪಡಿಸಲಾಗಿತ್ತು. ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವು ಆತ್ಮಹತ್ಯೆಯೇ ಅಥವಾ ಕೊಲೆಯೇ ಎಂಬ ಚರ್ಚೆ ಎಲ್ಲೆಡೆ ನಡೆಯುತ್ತಿದೆ.