ಫಡ್ನವಿಸ್ ಪಕ್ಕ ಕೂತು 'ಹವಾಮಾನ' ಚರ್ಚೆ ನಡೆಸಿದ ಅಜಿತ್ ಪವಾರ್
ಮುಂಬೈ, ಡಿಸೆಂಬರ್ 10: ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಜೊತೆ ಸೇರಿ ಸರ್ಕಾರ ರಚಿಸಿದ್ದ ಅಜಿತ್ ಪವಾರ್ ಮತ್ತೆ ಸುದ್ದಿಯಲ್ಲಿದ್ದಾರೆ.
ಮುಂಬೈನ ಮದುವೆ ಕಾರ್ಯಕ್ರಮವೊಂದರಲ್ಲಿ ಫಡ್ನವಿಸ್ ಪಕ್ಕದಲ್ಲೇ ಕುಳಿತಿದ್ದ ಅಜಿತ್ ಕೆಲ ನಿಮಿಷಗಳ ಕಾಲ ಚರ್ಚೆ ನಡೆಸಿದ್ದಾರೆ.
ಈ ಭೇಟಿ ಆಕಸ್ಮಿಕವಾಗಿದ್ದರೂ ಮಹಾರಾಷ್ಟ್ರದ ಸರ್ಕಾರ ರಚನೆಯ ಮಹಾ ನಾಟಕದ ಬಳಿಕ ಉಭಯ ನಾಯಕರ ಮೊದಲ ಭೇಟಿಯಾಗಿದೆ. ಹೀಗಾಗಿ ಈ ಭೇಟಿ ಬಗ್ಗೆ ಸಾಕಷ್ಟು ಕುತೂಹಲಗಳು ಆರಂಭವಾಗಿವೆ.
ಆದರೆ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಅಜಿತ್ ಪವಾರ್ ಮಾತ್ರ ಈ ಭೇಟಿಯ ಬಗ್ಗೆ ವಿಶೇಷವಾದ ಪ್ರತಿಕ್ರಿಯೆ ನೀಡಿದ್ದಾರೆ.
'ಈ ಮದುವೆಗೆ ಫಡ್ನವಿಸ್ ಅವರನ್ನು ಆಹ್ವಾನಿಸಲಾಗಿತ್ತು, ನಾನು ಹೋಗಿದ್ದೆ ಆಕಸ್ಮಿಕವಾಗಿ ಅಕ್ಕಪಕ್ಕದಲ್ಲೇ ಕುಳಿತು ಮಾತನಾಡಿದ್ದೇವೆ, ಇದರಲ್ಲಿ ಯಾವುದೇ ರಾಜಕೀಯವಿಲ್ಲ ನಾವಿಬ್ಬರೂ ಮಹಾರಾಷ್ಟ್ರದ ವಾತಾವರಣದ ಬಗ್ಗೆ ಚರ್ಚೆ ನಡೆಸಿದ್ದೇವೆ' ಎಂದು ವಿಡಂಬನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ.
ಫಡ್ನವಿಸ್ ರಾಜೀನಾಮೆಗೆ ಪತ್ನಿಯ ಕಾವ್ಯಾತ್ಮಕ ಪ್ರತಿಕ್ರಿಯೆ
ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಸಹೋದರ ಸಂಬಂಧಿಯಾಗಿರುವ ಅಜಿತ್ ಪವಾರ್ ಬಿಜೆಪಿ ಜೊತೆ ಕೈಜೋಡಿಸಿ ಸರ್ಕಾರ ರಚನೆ ಮಾಡಿದ್ದರು.
ಆದರೆ ಶರದ್ ಪವಾರ್ ಸೇರಿ ಎನ್ಸಿಪಿಯಿಂದ ಯಾವುದೇ ಬೆಂಬಲ ದೊರೆಯದ ಕಾರಣ ಈ ಸರ್ಕಾರ ಮುಂದುವರೆಯಲಿಲ್ಲ. ಆಗ ಅನಿವಾರ್ಯವಾಗಿ ಫಡ್ನವಿಸ್ ಹಾಗೂ ಪವಾರ್ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಬೇಕಾಯಿತು.
ಈ ನಾಟಕದ ಬಳಿಕ ಮತ್ತೆ ಎನ್ಸಿಪಿಗೆ ವಾಪಸ್ ಆಗಿದ್ದ ಅಜಿತ್ ಪವಾರ್ ಶಿವಸೇನೆಯ ನೇತೃತ್ವದ ನೂತನ ಸರ್ಕಾರದಲ್ಲೂ ಉಪ ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿದ್ದಾರೆ ಆದರೆ ಶರದ್ ಪವಾರ್ ಈ ಕುರಿತು ಇದುವರೆಗೆ ಯಾವುದೇ ತೀರ್ಮಾನ ಮಾಡಿಲ್ಲ.