ಬಿಜೆಪಿಗೆ ಬಂದ ಪುಟ್ಟ, ಹೋದ ಪುಟ್ಟ: ಪವಾರ್ ಪರ ಇದೆಂಥಾ ಹೋರಾಟ?
ಮುಂಬೈ, ನವೆಂಬರ್.26: ಮಹಾರಾಷ್ಟ್ರದಲ್ಲಿ ಬಿಜೆಪಿ ಪಾಲಿಗೆ ಈ ನಾಯಕ ಬಂದ ಪುಟ್ಟ ಹೋದ ಪುಟ್ಟ. ಮೂರು ದಿನಗಳ ಹಿಂದೆಯಷ್ಟೇ ಎಲ್ಲ ಮಿತ್ರಪಕ್ಷಗಳಿಗೆ ಕೈ ಕೊಟ್ಟು ಕೇಸರಿ ಪಾಳಯಕ್ಕೆ ಜೈ ಎಂದಿದ್ದ ನಾಯಕ ಇಂದು ಉಲ್ಟಾ ಹೊಡೆದಿದ್ದಾರೆ.
ಈ ನಾಯಕ ಮತ್ಯಾರೂ ಅಲ್ಲ. ಒನ್ ಆಂಡ್ ಒನ್ಲಿ ಎನ್ ಸಿಪಿ ಮುಖಂಡ ಅಜಿತ್ ಪವಾರ್. ಎನ್ ಸಿಪಿ ಶಾಸಕರೆಲ್ಲ ಬಿಜೆಪಿಗೆ ಬೆಂಬಲಿಸಲು ಸಿದ್ಧ. ನಾವು ಸರ್ಕಾರ ರಚಿಸೋಣ. ನಮ್ಮ ಬೆಂಬಲ ನಿಮಗಿದೆ. ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಕೂಡಾ ತಮ್ಮ ಪರವಾಗಿದ್ದಾರೆ. ಹೀಗೆಲ್ಲ ಹೇಳಿಕೆಗಳನ್ನು ನೀಡುತ್ತಿದ್ದ ಅಜಿತ್ ಪವಾರ್ ಯೂ-ಟರ್ನ್ ಹೊಡೆದಿದ್ದಾರೆ.
ಅಜಿತ್ ಪವಾರ್ ರಾಜೀನಾಮೆ: ಬ್ರೇಕಿಂಗ್ ನ್ಯೂಸ್ ಅಲ್ಲ ಪೇಪರ್ ನ್ಯೂಸ್!
ದೇವೇಂದ್ರ ಫಡ್ನವೀಸ್ ಸರ್ಕಾರಕ್ಕೆ ವಿಶ್ವಾಸಮತಯಾಚನೆಗೆ ಸುಪ್ರೀಂಕೋರ್ಟ್ 24 ಗಂಟೆಗಳ ಡೆಡ್ ಲೈನ್ ನೀಡಿತು. ಬೆಳಗ್ಗೆ ಈ ಆದೇಶ ಹೊರ ಬೀಳುತ್ತಿದ್ದಂತೆ ತಬ್ಬಿಬ್ಬಾದ ಎನ್ ಸಿಪಿ ಮುಖಂಡ ಅಜಿತ್ ಪವಾರ್, ತಮ್ಮ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಬಿಟ್ಟರು.
ಎನ್ ಸಿಪಿಗೆ ವಾಪಸ್ ಸೇರಿಸಿಕೊಳ್ಳಿ ಎಂದ ಕಾರ್ಯಕರ್ತರು!
ಏನೋ ಬಿಜೆಪಿ ಜೊತೆ ಹೋಗಿದ್ದಾರೆ. ಆಗಿದ್ದು ಆಯ್ತು ಅಜಿತ್ ಪವಾರ್ ಅವರನ್ನು ಮತ್ತೆ ಎನ್ ಸಿಪಿಗೆ ಸೇರಿಸಿಕೊಳ್ಳಬೇಕು ಎಂದು ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಮುಂಬೈನಲ್ಲಿ 'Ajit Dada , We Love You' ಎಂಬ ಪೋಸ್ಟರ್ ಹಿಡಿದು ಎನ್ ಸಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಅಜಿತ್ ಪವಾರ್ ಈಗಾಗಲೇ ತಮ್ಮ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಹೀಗಾಗಿ ಅವರನ್ನು ಮತ್ತೆ ಎನ್ ಸಿಪಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಕಾರ್ಯಕರ್ತರು ಘೋಷಣೆ ಕೂಗಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಮಧ್ಯೆ ಮುಂಬೈನ ಟ್ರಿಡೆಂಟ್ ಹೋಟೆಲ್ ನಲ್ಲಿ ಶಿವಸೇನೆ, ಕಾಂಗ್ರೆಸ್ ಹಾಗೂ ಎನ್ ಸಿಪಿ ಮುಖಂಡರು ಜಂಟಿ ಸಭೆ ನಡೆಸುತ್ತಿದ್ದಾರೆ. ಈ ಸಭೆಯಲ್ಲಿ ಅಜಿತ್ ಪವಾರ್ ಕೂಡಾ ಭಾಗಿಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.