ಮರಾಠರ ನಂತರ ಬ್ರಾಹ್ಮಣರಿಂದ ಮೀಸಲಾತಿಗಾಗಿ ಪಟ್ಟು
ಮುಂಬೈ, ಜನವರಿ 16: ಮೇಲ್ವರ್ಗದವರಿಗೂ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಮೀಸಲಾತಿಯನ್ನು ಕೇಂದ್ರ ಸರ್ಕಾರ ಕಲ್ಪಿಸಿದ ಬಳಿಕ ವಿವಿಧ ರಾಜ್ಯಗಳಲ್ಲಿ ಶೇಕಡಾವಾರು ಮೀಸಲಾತಿ ಪ್ರಮಾಣದಲ್ಲಿ ಬದಲಾವಣೆ ಕಂಡು ಬಂದಿದೆ. ಈಗ ಮಹಾರಾಷ್ಟ್ರದಲ್ಲಿ ಬ್ರಾಹ್ಮಣರು ಮೀಸಲಾತಿಗಾಗಿ ಆಗ್ರಹಿಸಿ, ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.
ಮೀಸಲಾತಿ ಆಗ್ರಹಿಸಿ ಮರಾಠಿಗರು ಬೃಹತ್ ಪ್ರತಿಭಟನೆ ನಡೆಸಿ, ದೇವೇಂದ್ರ ಫಡ್ನವಿಸ್ ಸರ್ಕಾರಕ್ಕೆ ಚುರುಕು ಮುಟ್ಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಇದೇ ಮಾದರಿಯಲ್ಲಿ ಜನವರಿ 22ರಂದು ಅಜಾದ್ ಮೈದಾನದಲ್ಲಿ ಬೃಹತ್ ಸಭೆ ನಡೆಸಲಾಗುವುದು, ವಿವಿಧ ಬೇಡಿಕೆಗಳನ್ನು ಆಗ್ರಹಿಸಲಾಗುವುದು ಎಂದು ಸಮಸ್ತ್ ಬ್ರಾಹ್ಮಣ ಸಮಾಜ್ ಹೇಳಿದೆ.
ಮರಾಠರ ಆಕ್ರೋಶಕ್ಕೆ ಬಗ್ಗಿದ ಸರ್ಕಾರ: ಶೇ.16 ಮೀಸಲಾತಿ
ಕೇಂದ್ರ ಸರ್ಕಾರದ ಮೀಸಲಾತಿ ನೀತಿಯನ್ನು ರಾಜ್ಯಗಳಲ್ಲಿ ಅಳವಡಿಸಲು ಕಾನೂನು ಅಡ್ಡಿಯಾಗುವ ಸಾಧ್ಯತೆಯಿದೆ. ಮಹಾರಾಷ್ಟ್ರದಲ್ಲಿ ಈಗಾಗಲೇ ಮೇಲ್ವರ್ಗದ ಕೆಲವರಿಗೆ ಮೀಸಲಾತಿ ಸಿಕ್ಕಿದೆ. ಆದರೆ,ಬ್ರಾಹ್ಮಣ ಸಮುದಾಯಕ್ಕೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಮಸ್ತ್ ಬ್ರಾಹ್ಮಣ ಸಮಾಜದ ಸಂಚಾಲಕ ವಿಶ್ವಜೀತ್ ದೇಶಪಾಂಡೆ ಹೇಳಿದರು.
ಬ್ರಾಹ್ಮಣ ಸಮುದಾಯದ ಬಹುತೇಕರು ಅರ್ಚಕ ಹುದ್ದೆಯಲ್ಲಿದ್ದಾರೆ. ಕೆಲವು ಸಣ್ಣ ಪುಟ್ಟ ವ್ಯಾಪಾರ ನಡೆಸುತ್ತಿದ್ದಾರೆ. ಆದರೆ, ಆರ್ಥಿಕ ಪರಿಸ್ಥಿತಿ ಎಲ್ಲರದ್ದು ಶೋಚನೀಯವಾಗಿದೆ.
ಆಚರಣೆ ಮಾಡುವವರಿಗೆ ಮಾಸಿಕ 5000ರು ಪಿಂಚಣಿ ಸೇರಿದಂತೆ 15ಕ್ಕೂ ಅಧಿಕ ಬೇಡಿಕೆಗಳಿಗೆ ಆಗ್ರಹಿಸಿ, ಶಾಂತಿಯುವ ಮೆರವಣಿಗೆ ನಡೆಸಲಾಗುವುದು. ವಿದ್ಯಾರ್ಥಿಗಳಿಗೆ ಶಿಕ್ಷಣದಲ್ಲಿ ಆರ್ಥಿಕ ನೆರವು, ಹಾಸ್ಟೆಲ್, ಆರ್ಥಿಕ ಅಭಿವೃದ್ಧಿ ಮಂಡಳಿ ಸ್ಥಾಪನೆಗೆ ಕ್ರಮ ಬೇಡಿಕೆ ಪಟ್ಟಿಯಲ್ಲಿವೆ.