ಮಹಾರಾಷ್ಟ್ರ ಬಳಿಕ ಗೋವಾ ಬಿಜೆಪಿ ಸರ್ಕಾರಕ್ಕೂ ಸಂಕಷ್ಟ?
ಮುಂಬೈ, ನವೆಂಬರ್ 29: ಮಹಾರಾಷ್ಟ್ರದಲ್ಲಿ ಬಿಜೆಪಿ ಬಾಯಿಗೆ ಬಂದಿದ್ದ ಅಧಿಕಾರದ ತುತ್ತನ್ನು ಕಸಿದು ಶೀವಸೇನಾ-ಎನ್ಸಿಪಿ-ಕಾಂಗ್ರೆಸ್ ಸರ್ಕಾರ ರಚಿಸಿದ್ದಾಗಿದೆ. ಈಗ ಗೋವಾದಲ್ಲಿಯೂ ಆಡಿತಾರೂಢ ಬಿಜೆಪಿ ಮುಂದಾಳತ್ವದ ಮೈತ್ರಿ ಸರ್ಕಾರವನ್ನು ಉರುಳಿಸುವ ಸೂಚನೆ ಹೊರಬಿದ್ದಿದೆ.
ಇಂದು ಮಾಧ್ಯಮಗಳೊಟ್ಟಿಗೆ ಮಾತನಾಡಿರುವ ಶಿವಸೇನಾ ಮುಖಂಡ ಸಂಜಯ್ ರಾವತ್, 'ಮಹಾರಾಷ್ಟ್ರದ ನಂತರ ಗೋವಾದಲ್ಲೂ ಪವಾಡ ನಡೆಯುವ ಸಂಭವ ಇದೆ' ಎನ್ನುವ ಮೂಲಕ ಬಿಜೆಪಿಗೆ ಎಚ್ಚರಿಕೆ ರವಾನಿಸಿದ್ದಾರೆ.
ಮಹಾರಾಷ್ಟ್ರ ಮುಗಿತು ಇನ್ನು ಗೋವಾದಲ್ಲಿ ಪವಾಡ: ಸಂಜಯ್ ರಾವುತ್
'ಗೋವಾದ ಮಾಜಿ ಡಿಸಿಎಂ, ಗೋವಾ ಫ್ರಂಟ್ ಪಕ್ಷದ ಮುಖಂಡ ವಿಜಯ್ ಸರ್ದೇಸಾಯಿ ಶಿವಸೇನಾ ಜೊತೆಗೆ ಸಂಪರ್ಕದಲ್ಲಿದ್ದು, ಹೊಸ ರಾಜಕೀಯ ಬೆಳವಣಿಗೆಗಳು ಮುನ್ನೆಲೆಗೆ ಬರುವ ಸಾಧ್ಯತೆ ಇದೆ' ಎಂದು ಹೇಳಿದ್ದಾರೆ.
'ಇಡೀಯ ದೇಶದಲ್ಲಿ ಹೊಸ ರೀತಿಯ ಬೆಳವಣಿಗೆ ಆಗಲಿವೆ. ಮಹಾರಾಷ್ಟ್ರದ ನಂತರ ಈಗ ಗೋವಾದಲ್ಲಿ ರಾಜಕೀಯ ಬೆಳವಣಿಗೆ ನಡೆಯಲಿದೆ. ಬಿಜೆಪಿಯೇತರ ರಾಜಕೀಯ ಪರಿಸ್ಥಿತಿಯನ್ನು ನಾವು ನಿರ್ಮಿಸಲಿದ್ದೇವೆ' ಎಂದು ರಾವತ್ ಹೇಳಿದ್ದಾರೆ.
ಗೋವಾ ಫ್ರಂಟ್ ಪಕ್ಷದ ಮುಖಂಡ ವಿಜಯ್ ಸರ್ದೇಸಾಯಿ ಸಹ ಸಂಜಯ್ ರಾವತ್ ಅವರನ್ನು ಭೇಟಿ ಮಾಡಿರುವುದನ್ನು ಖಚಿತಪಡಿಸಿದ್ದು, 'ಘೊಷಣೆ ಮಾಡಿ ಸರ್ಕಾರಗಳು ಬದಲಾಗುವುದಿಲ್ಲ, ಎಲ್ಲವೂ ಅಚಾನಕ್ಕಾಗಿ ಆಗುತ್ತದೆ. ಮಹಾರಾಷ್ಟ್ರದಲ್ಲಿ ಆಗಿದ್ದು ಗೋವಾದಲ್ಲಿ ಆಗಬೇಕೆಂದೇನೂ ಇಲ್ಲ' ಎಂದಿದ್ದಾರೆ.
2019ರಲ್ಲಿ ಬಿಜೆಪಿಗೆ ಮಿಶ್ರಫಲ, ಶೇ 40 ರಷ್ಟು ಮಾತ್ರ ಕೇಸರಿ ಪತಾಕೆ
2017 ರಲ್ಲಿ ನಡೆದಿದ್ದ ಗೋವಾ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 17 ಸ್ಥಾನ ಗೆಲ್ಲುವ ಮೂಲಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ 13 ಸ್ಥಾನ ಗೆದ್ದಿದ್ದ ಬಿಜೆಪಿ ಗೋವಾ ಫಾರ್ವರ್ಡ್ ಮತ್ತು ಇನ್ನಿತರೆ ಪಕ್ಷಗಳ ಮೈತ್ರಿ ಮಾಡಿಕೊಂಡು ಅಧಿಕಾರ ಚುಕ್ಕಾಣಿ ಹಿಡಿಯಿತು.
ಆದರೆ ಗೋವಾ ಸಿಎಂ ಆಗಿದ್ದ ಮನೋಹರ ಪರಿಕ್ಕರ್ ನಿಧನಾನಂತರ ಕಾಂಗ್ರೆಸ್ನ 10 ಶಾಸಕರನ್ನು ತನ್ನತ್ತ ಸೆಳೆದುಕೊಂಡ ಬಿಜೆಪಿಯು ಗೋವಾ ಫಾರ್ವರ್ಡ್ ಪಕ್ಷದೊಂದಿಗೆ ಇದ್ದ ಮೈತ್ರಿಯನ್ನು ಕಡಿದುಕೊಂಡಿತು. ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಕಾಂಗ್ರೆಸ್ ಶಾಸಕರಿಗೆ ಮಂತ್ರಿ ಸ್ಥಾನಗಳನ್ನು ನೀಡಲಾಯಿತು.
ಪ್ರಸ್ತುತ 27 ಶಾಸಕರ ಬಲವನ್ನು ಹೊಂದಿರುವ ಗೋವಾ ಬಿಜೆಪಿ ಸ್ವತಂತ್ರ್ಯವಾಗಿ ಸರ್ಕಾರ ನಡೆಸುತ್ತಿದೆ. ಇದೀಗ ಗೋವಾ ಫಾರ್ವರ್ಡ್ ಪಕ್ಷದೊಂದಿಗೆ ಶೀವಸೇನಾ ಕೈಜೋಡಿಸಿದ್ದು, ಮೂರು ಸ್ಥಾನ ಗಳಿಸಿರುವ ಮಹಾರಾಷ್ಟ್ರವಾದಿ ಗೋಮಂತಕ್ ಪಕ್ಷ, ಮೂರು ಸ್ಥಾನ ಹೊಂದಿರುವ ಗೋವಾ ಫಾರ್ವರ್ಡ್ ಪಕ್ಷ, ಏಳು ಶಾಸಕರನ್ನು ಹೊಂದಿರುವ ಕಾಂಗ್ರೆಸ್ ಸೇರಿಕೊಂಡು ಇನ್ನಷ್ಟು ಶಾಸಕರನ್ನು ತಮ್ಮತ್ತ ಸೆಳೆದು ಗೋವಾ ಸರ್ಕಾರ ಉರಿಳಿಸುತ್ತಾರೆಯೇ ಕಾದು ನೋಡಬೇಕಿದೆ.