ಮಹಾರಾಷ್ಟ್ರದಲ್ಲಿ 9000 ಪಕ್ಷಿಗಳ ಕೊಲೆಗೆ ಕಾರಣವಾದ ಹಕ್ಕಿಜ್ವರ!
ಮುಂಬೈ, ಜನವರಿ.11: ದೇಶದಲ್ಲಿ ಕೊರೊನಾವೈರಸ್ ಸೋಂಕಿ ಹಾವಳಿ ಕೊಂಚ ತಗ್ಗುತ್ತಿರುವ ಬೆನ್ನಲ್ಲೇ ಹಲವು ರಾಜ್ಯಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಹಕ್ಕಿಜ್ವರ ಆತಂಕ ಹುಟ್ಟಿಸುತ್ತಿದೆ. ನವದೆಹಲಿಯಲ್ಲಿ 8 ಹಕ್ಕಿಗಳ ಮಾದರಿ ಪರೀಕ್ಷಾ ವರದಿ ಬಳಿಕೆ ರಾಜ್ಯದಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿರುವುದನ್ನು ರಾಜ್ಯ ಪಶು ಸಂಗೋಪನಾ ಇಲಾಖೆಯು ದೃಢಪಡಿಸಿದೆ.
ಮಹಾರಾಷ್ಟ್ರ ಮುಂಬೈನ ಪರ್ಭಾನಿಯಲ್ಲಿ 9000 ಬಗೆಯ ಹಕ್ಕಿಗಳನ್ನು ಕೊಲ್ಲಲಾಗಿದೆ. ಈ ಪೈಕಿ ಕೆಲವು ಪಕ್ಷಿಗಳ ಮಾದರಿಯಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿರುವುದು ದೃಢಪಟ್ಟಿದೆ. ಲಾತೂರ್ ಮತ್ತು ಅಮರಾವತಿಯಲ್ಲಿ ಹಕ್ಕಿಗಳ ಸಾವಿನ ಬಗ್ಗೆ ವರದಿಯಾಗಿದೆ.
ಕೊರೊನಾವೈರಸ್ ಬಿಕ್ಕಟ್ಟಿನ ನಡುವೆ ಪಕ್ಷಿ ಜ್ವರ: ದೆಹಲಿ ಬಳಿ 50 ಕಾಗೆಗಳ ಸಾವು
ಮುಂಬೈ ಛೇಂಬರ್ ನಲ್ಲಿ 11 ಕಾಗೆಗಳು ಪ್ರಾಣ ಬಿಟ್ಟಿದ್ದು, ಹಕ್ಕಿಜ್ವರದ ಆತಂಕವನ್ನು ಮತ್ತಷ್ಟು ಹೆಚ್ಚುವಂತೆ ಮಾಡಿದೆ. ಮುಂಬೈನ ಹಲವು ಪ್ರದೇಶಗಳಲ್ಲಿ ಸಂಚರಿಸಿದ ನಂತರದಲ್ಲಿ ಹಕ್ಕಿಗಳು ಛೇಂಬರ್ ಬಳಿ ಸಾವನ್ನಪ್ಪಿದ್ದು, ಈ ಪೈಕಿ ಎರಡು ಪಕ್ಷಿಗಳ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿ ಕೊಡಲಾಗಿದೆ.
ಮುಂಬೈನಲ್ಲಿ ಪಕ್ಷಿಗಳ ಮಾರಾಟ ನಿಷೇಧ
ಮಹಾರಾಷ್ಟ್ರ ಮುಂಬೈನ ಪರ್ಭಾನಿಯಲ್ಲಿ ಹಕ್ಕಿಜ್ವರದಿಂದಲೇ 800 ಕೋಳಿಗಳು ಸಾವನ್ನಪ್ಪಿರುವುದು ದೃಢಪಟ್ಟಿದೆ. ಈ ಹಿನ್ನೆಲೆ ಜಿಲ್ಲಾಡಳಿತವು 9000 ಹಕ್ಕಿಗಳನ್ನು ಕೊಂದು ಹಾಕಲಾಗಿದೆ. ಪರ್ಭಾನಿಯ ಸುತ್ತಮುತ್ತ 10 ಕಿ.ಮೀ ವ್ಯಾಪ್ತಿಯಲ್ಲಿ ಪಕ್ಷಿಗಳ ಮಾರಾಟವನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಡಳಿತವು ಆದೇಶ ಹೊರಡಿಸಿದೆ.
ಜಿಲ್ಲಾಡಳಿತದಿಂದ ನಿಷೇಧಿತ ಪ್ರದೇಶ ಘೋಷಣೆ
ಮಹಾರಾಷ್ಟ್ರದ ಹಲವು ಗ್ರಾಮೀಣ ಭಾಗಗಳಲ್ಲಿ ಹಕ್ಕಿಜ್ವರದಿಂದ ಪಕ್ಷಿಗಳು ಸಾವನ್ನಪ್ಪುತ್ತಿವೆ. ಈ ಹಿನ್ನೆಲೆ ಅಂಥ ಪ್ರದೇಶಗಳನ್ನು ಗುರುತಿಸಲಾಗಿದ್ದು, ನಿಷೇಧಿತ ಪ್ರದೇಶ ಎಂದು ಜಿಲ್ಲಾಡಳಿತವು ಘೋಷಿಸಿದೆ. ಲಾತೂರಿನಲ್ಲಿ 400 ಕೋಳಿಗಳು, ಅಮರಾವತಿಯಲ್ಲಿ 40 ಕೋಳಿಗಳು ಸತ್ತಿದ್ದು, ಮಾದರಿಗಳನ್ನು ಪರೀಕ್ಷಿಸಲು ಪ್ರಯೋಗಾಲಯಕ್ಕೆ ರವಾನಿಸಲಾಗಿದೆ.
"ಮನುಷ್ಯರಿಗೆ ಹರಡುವುದಿಲ್ಲ ಹಕ್ಕಿಜ್ವರ"
ನೂರಾರು ಹಕ್ಕಿಗಳನ್ನು ಬಲಿ ತೆಗೆದುಕೊಳ್ಳುತ್ತಿರುವ ಹಕ್ಕಿಜ್ವರವು ಮನುಷ್ಯರಲ್ಲೂ ಕಾಣಿಸಿಕೊಳ್ಳುತ್ತದೆಯೇ ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರವಿನ್ನೂ ಸಿಕ್ಕಿಲ್ಲ. ಸದ್ಯದ ಮಟ್ಟಿಗೆ ಹಕ್ಕಿಜ್ವರವು ಮನುಷ್ಯರಲ್ಲಿ ಕಾಣಿಸಿಕೊಂಡಿಲ್ಲ. ಜನರಿಗೆ ಈ ಸೋಂಕು ಹರಡುವುದಿಲ್ಲ ಎಂದು ಹೇಳಲಾಗುತ್ತಿದೆ. ಮನುಷ್ಯರಿಗೆ ಹಕ್ಕಿಜ್ವರದಿಂದ ಯಾವುದೇ ಆಪತ್ತು ಇಲ್ಲ ಎಂದು ಪರ್ಭಾನಿ ಜಿಲ್ಲಾಧಿಕಾರಿ ದೀಪಕ್ ಮುಲ್ಗಿಕರ್ ತಿಳಿಸಿದ್ದಾರೆ.
ಹಕ್ಕಿಜ್ವರದ ಭೀತಿ ಎದುರಿಸುತ್ತಿರುವ ರಾಜ್ಯಗಳು
ನವದೆಹಲಿ, ಕೇರಳ, ಹರಿಯಾಣ, ಪಂಜಾಬ್, ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ಗುಜರಾತ್ ರಾಜ್ಯಗಳಲ್ಲಿ ಈಗಾಗಲೇ ಹಕ್ಕಿಜ್ವರದ ಭೀತಿ ಎದುರಾಗಿದೆ. ಈ ರಾಜ್ಯಗಳಲ್ಲಿ ಸಾವನ್ನಪ್ಪಿರುವ ಹಕ್ಕಿಗಳಲ್ಲಿ ಸೋಂಕು ಕಾಣಿಸಿಕೊಂಡಿರುವುದು ವೈದ್ಯಕೀಯ ತಪಾಸಣೆಯಲ್ಲೂ ದೃಢಪಟ್ಟಿದೆ. ಈ ಹಿನ್ನೆಲೆ ಉತ್ತರ ಪ್ರದೇಶದ ಕಾನ್ಫುರ್ ನಲ್ಲಿರುವ ಮೃಗಾಲಯ ಮತ್ತು ದಕ್ಷಿಣ ದೆಹಲಿಯಲ್ಲಿರುವ ಪ್ರಸಿದ್ಧ ಹೌಜ್ ಖಾಸ್ ಮೃಗಾಲಯವನ್ನು ಬಂದ್ ಮಾಡಲಾಗಿದೆ.