ಬಾಬ್ರಿ ಮಸೀದಿ ಧ್ವಂಸಗೊಳಿಸಿದ್ದು ತಪ್ಪು ಎಂದ ಗಾಯಕ ಸೋನು ನಿಗಮ್
ಮುಂಬೈ, ಫೆಬ್ರವರಿ 25: ಜನಪ್ರಿಯ ಗಾಯಕ ಸೋನು ನಿಗಮ್ ಅವರು ಮತ್ತೆ ತಮ್ಮ ಹೇಳಿಕೆ ಮೂಲಕ ಸುದ್ದಿಯಾಗಿದ್ದಾರೆ. ಆಝಾನ್ ಗೆ ಆಕ್ಷೇಪ ವ್ಯಕ್ತಪಡಿಸಿ, ವಿವಾದಕ್ಕೀಡಾಗಿದ್ದ ಸೋನು ನಿಗಮ್, ಈಗ ಬಾಬರಿ ಮಸೀದಿ ಕೆಡವಿರುವುದು ತಪ್ಪು ಎಂದಿದ್ದಾರೆ.
25 ವರ್ಷಗಳ ಬಾಬ್ರಿ ಮಸೀದಿ ವಿವಾದ, ಟೈಮ್ ಲೈನ್
"ನಾನು ಎಂದೂ ಯಾವುದೇ ದೇವಾಲಯ ಅಥವಾ ಮಸೀದಿ ಕೆಡವುದರ ಪರವಾಗಿಲ್ಲ. ಮೊದಲನೆಯದಾಗಿ ಬಾಬರಿ ಮಸೀದಿ ಕೆಡವಿರುವುದು ತಪ್ಪು. ಆ ಒಂದು ತಪ್ಪು ಕೃತ್ಯ, ಇಂದು ಪ್ರತಿಯೊಂದು ತಪ್ಪುಗಳಿಗೆ ಕಾರಣವಾಗುತ್ತಿದೆ. ಅದು ನಡೆಯಬಾರದಿತ್ತು" ಎಂದು ಟೈಮ್ಸ್ ನೌ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದ ವೇಳೆ ಹೇಳಿದರು.
ಸುಪ್ರೀಂಕೋರ್ಟಿನಲ್ಲಿ ಫೆ.26ರಿಂದ ಅಯೋಧ್ಯಾ ಪ್ರಕರಣ ವಿಚಾರಣೆಗೆ
"ರಾಮನ ಜನ್ಮಸ್ಥಾನದಲ್ಲಿ ಅಯೋಧ್ಯೆಯಲ್ಲಿದ್ದ ದೇವಸ್ಥಾನವನ್ನು ಮೊಘಲ್ ದೊರೆ ಬಾಬರ್ ಕೆಡವಿದ್ದು ತಪ್ಪು ಎಂದು ನಾನು ಒಪ್ಪಿಕೊಳ್ಳುತ್ತೇನೆ. ಇದಕ್ಕಿಂತ ದೊಡ್ಡ ಪ್ರಮಾದ ಅಥವಾ ಮೂರ್ಖತನ ಬೇರೆ ಇಲ್ಲ. ಆತ ತಪ್ಪು ಮಾಡಿದ ನಿಜ; ಆದರೆ ಬಾಬರನ ಆಳ್ವಿಕೆ ಇದ್ದ ಅವಧಿಯ ತಲೆಮಾರುಗಳ ಬಳಿಕ ಅದಕ್ಕೆ ಪ್ರತೀಕಾರ ತೆಗೆದುಕೊಳ್ಳುವುದು ಸರಿಯೇ? ಇದು ಸರಿಯಲ್ಲ...ಇದು ಖಂಡಿತವಾಗಿಯೂ ದೂರದೃಷ್ಟಿಯ ಚಿಂತನೆಯಲ್ಲ" ಎಂದು ಹೇಳಿದ್ದಾರೆ.