ಜಗನ್ ಹಾದಿಯಲ್ಲಿ ಆದಿತ್ಯ ಠಾಕ್ರೆ; ಸಿಎಂ ಅಭ್ಯರ್ಥಿ ಆಗಿ ಬಿಂಬಿಸಿಕೊಳ್ಳಲು ಪ್ರವಾಸ
ಮುಂಬೈ, ಜುಲೈ 18: ಶಿವಸೇನಾ ಪಕ್ಷದಿಂದ ಮುಖ್ಯಮಂತ್ರಿ ಆಭ್ಯರ್ಥಿಯಾಗಿ ಬಿಂಬಿಸಿಕೊಳ್ಳುವ ಸಲುವಾಗಿ ಪಕ್ಷದ ಯುವ ನಾಯಕ ಹಾಗೂ ಮುಖ್ಯಸ್ಥ ಉದ್ಧವ್ ಠಾಕ್ರೆ ಮಗ ಆದಿತ್ಯ ಠಾಕ್ರೆ ಗುರುವಾರದಿಂದ ಪ್ರವಾಸ ಆರಂಭಿಸಿದ್ದಾರೆ. ತನ್ನ ತಂದೆಯ ಜತೆಗೂಡಿ ಮುಂಬೈನಲ್ಲಿ ರೈತರ ಸಮಾವೇಶದಲ್ಲಿ ಭಾಗವಹಿಸಿದ ಒಂದು ದಿನದ ನಂತರ ಆದಿತ್ಯ, ತಮ್ಮ ಮಹಾರಾಷ್ಟ್ರ ರಾಜ್ಯ ಪ್ರವಾಸ ಶುರು ಮಾಡಿದರು. ಈ ವರ್ಷವೇ ಮಹಾರಾಷ್ಟ್ರ ವಿಧಾನಸಭೆಗೆ ಚುನಾವಣೆ ನಡೆಯಲಿದೆ.
29 ವರ್ಷದ ಆದಿತ್ಯ ಜಲ್ ಗಾಂವ್ ನಿಂದ ಪ್ರವಾಸ ಶುರು ಮಾಡಲಿದ್ದಾರೆ. ಏಕ್ ನಾಥ್ ಶಿಂಧೆ, ರಾಮ್ ದಾಸ್ ಕದಂರಂಥ ನಾಯಕರು ಜತೆಯಾಗಲಿದ್ದಾರೆ. ಇನ್ನು ಸುರೇಶ್ ದಾದ ಜೈನ್ ಕೂಡ ಇರಲಿದ್ದಾರೆ. ಹಿರಿಯ ರಾಜಕಾರಣಿಯಾದ ಅವರು, ಹಲವು ಬಾರಿ ಪಕ್ಷ ಬದಲಿಸಿದ್ದಾರೆ.
ಬಾಳಾ ಠಾಕ್ರೆ ಮೊಮ್ಮಗ, 29 ವರ್ಷದ ಆದಿತ್ಯ ಮಹಾರಾಷ್ಟ್ರ ಸಿಎಂ ಸ್ಥಾನಕ್ಕೆ
ಸಮಾವೇಶದ ಆರಂಭದಲ್ಲಿ ಮಾತನಾಡಿದ ಆದಿತ್ಯ, "ಶಿವಸೇನಾವನ್ನು ಮಹಾರಾಷ್ಟ್ರದ ಪ್ರತಿ ಮನೆಗೆ ತೆಗೆದುಕೊಂಡು ಹೋಗುವ ಪ್ರಯತ್ನ ಇಂದಿನಿಂದ ಶುರುವಾಗಿದೆ. ಆ ನಂತರವಷ್ಟೇ ನವ ಮಹಾರಾಷ್ಟ್ರ ನಿರ್ಮಾಣ ಸಾಧ್ಯ. ಯುವಕರು, ರೈತರು ಹಾಗೂ ಮಹಿಳೆಯರ ಪರವಾಗಿ ಶಿವಸೇನಾ ನಿಲ್ಲುತ್ತದೆ. ನಾವು ಪರಿಹಾರ ತರುವ ಪಕ್ಷ. ನನಗೆ ಇದು ಮತ ಕೇಳುವ ಪ್ರವಾಸ ಅಲ್ಲ. ಇದು ಪುಣ್ಯಕ್ಷೇತ್ರ ದರ್ಶನ. ನನ್ನ ತಂದೆ- ತಾತನಿಂದ ಹಲವಾರು ವರ್ಷಗಳಿಂದ ಪರಿಹಾರ ಕಂಡುಕೊಳ್ಳುವುದನ್ನು ಕಲಿತಿದ್ದೇನೆ" ಎಂದಿದ್ದಾರೆ.
ಈ ಪ್ರವಾಸದ ಉದ್ದೇಶವನ್ನು ಬಿಂಬಿಸುವಂತೆ ಸ್ಥಳೀಯ ಜನಪ್ರತಿನಿಧಿ ಕಿಶೋರ್ ಪಾಟೀಲ್ ಭಾಷಣ ಇತ್ತು. "ನಾವು ಆದಿತ್ಯ ಠಾಕ್ರೆಯನ್ನು ರಾಜ್ಯದ ಮುಖ್ಯಮಂತ್ರಿ ಆಗಿ ನೋಡಲು ಬಯಸುತ್ತೇವೆ" ಎಂದು ಘೋಷಿಸಿದರು.
ಮಹಾರಾಷ್ಟ್ರದಾದ್ಯಂತ 4000 ಕಿಲೋಮೀಟರ್ ಪ್ರವಾಸ ಮಾಡಲಿರುವ ಆದಿತ್ಯ ಠಾಕ್ರೆ ಶಿವಸೇನಾ ಕಾರ್ಯಕರ್ತರು ಹಾಗೂ ಮತದಾರರನ್ನು ತಲುಪಲು ಪ್ರಯತ್ನಿಸುತ್ತಿದ್ದಾರೆ. ಪ್ರವಾಸ ಸಾಗುವ ದಾರಿಯ ಮಧ್ಯೆ ಸಮಾವೇಶಗಳನ್ನು ನಡೆಸುವ ಆದಿತ್ಯ ಠಾಕ್ರೆ, ರೈತರು, ಕಾರ್ಮಿಕರು ಹಾಗೂ ಉದ್ಯಮಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಪ್ರವಾಸಕ್ಕೆ "ಜನ್ ಆಶೀರ್ವಾದ್ ಪ್ರವಾಸ್" ಎಂದು ಹೆಸರಿಡಲಾಗಿದೆ.
ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿ ಶಿವಸೇನೆಯವರು: ಸಾಮ್ನಾ ಘೋಷಣೆ
ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಕೂಡ ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಗೂ ಮುನ್ನ ಪ್ರವಾಸ ಕೈಗೊಂಡಿದ್ದರು. ಆ ಪ್ರವಾಸದಿಂದ ಮತ್ತೆ ಅಧಿಕಾರಕ್ಕೆ ಏರಲು ಸಹಾಯ ಆಗಿತ್ತು.