ಆದರ್ಶ್ ಹಗರಣ: ಮಹಾರಾಷ್ಟ್ರದ ಮಾಜಿ ಸಿಎಂ ಅಶೋಕ್ ಗೆ ರಿಲೀಫ್!
ಬಹುಕೋಟಿ 2ಜಿ ಹಗರಣದಲ್ಲಿ ಎ. ರಾಜಾ ಹಾಗೂ ಕನ್ನಿಮೋಳಿ ಅವರು ಖುಲಾಸೆಗೊಂಡ ಬಳಿಕ ಆದರ್ಶ್ ಹೌಸಿಂಗ್ ಸೊಸೈಟಿ ಫ್ಲ್ಯಾಟ್ ಹಗರಣದಲ್ಲಿ ಮಾಜಿ ಸಿಎಂ ಅಶೋಕ್ ಚವಾಣ್ ಗೆ ನಿರಾಳತೆ ಮೂಡಿದೆ.
ಆದರ್ಶ್ ಹೌಸಿಂಗ್ ಸೊಸೈಟಿ ಕಟ್ಟಡ ನೆಲಸಮಕ್ಕೆ ಆದೇಶ
ಆದರ್ಶ್ ಹೌಸಿಂಗ್ ಸೊಸೈಟಿ ಹಗರಣದಲ್ಲಿ ಸಿಲುಕಿ ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಅಶೋಕ್ ಚವಾಣ್ ಅವರಿಗೆ ಬಾಂಬೆ ಹೈಕೋರ್ಟಿನಿಂದ ಶುಕ್ರವಾರದಂದು ಶುಭ ಸುದ್ದಿ ಸಿಕ್ಕಿದೆ.
ಈ ಪ್ರಕರಣದಲ್ಲಿ ಅಶೋಕ್ ಚವಾಣ್ ವಿರುದ್ಧ ತನಿಖೆ ಕೈಗೊಳ್ಳುವಂತೆ ಮಹಾರಾಷ್ಟ್ರ ರಾಜ್ಯಪಾಲ ವಿದ್ಯಾಸಾಗರ್ ರಾವ್ ನೀಡಿದ್ದ ಆದೇಶವನ್ನು ಬಾಂಬೆ ಹೈಕೋರ್ಟ್ ವಜಾಗೊಳಿಸಿದೆ. ಈ ಬೆಳವಣಿಗೆಯಿಂದಾಗಿ ಅಶೋಕ್ ಅವರು ಈ ಪ್ರಕರಣದಿಂದ ಆರೋಪ ಮುಕ್ತರಾಗುವ ಸಾಧ್ಯತೆ ಹೆಚ್ಚಿದೆ.
ಅಶೋಕ್ ಅವರು ತಮ್ಮ ಅತ್ತೆ ಹಾಗೂ ಇಬ್ಬರು ಸಂಬಂಧಿಕರಿಗೆ ಆದರ್ಶ್ ಸೊಸೈಟಿ ಫ್ಲ್ಯಾಟ್ ಗಳನ್ನು ಕೊಡಿಸಿರುವ ಹಗರಣ ಬೆಳಕಿಗೆ ಬಂದ ನಂತರ, ಮಹಾ ಸಿಎಂ ತಲೆದಂಡವಾಗಿತ್ತು. ಅಂದಿನ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಆದೇಶದ ಮೇರೆಗೆ ಸಿಎಂ ಸ್ಥಾನದಿಂದ ಅಶೋಕ್ ಕೆಳಗಿಳಿದಿದ್ದರು. ಅಶೋಕ್ ಪ್ರತಿಕ್ರಿಯೆ, ಪ್ರಕರಣದ ಬಗ್ಗೆ ಇನ್ನಷ್ಟು ವಿವರ ಮುಂದಿದೆ...
ಏನಿದು ಅದರ್ಶ್ ಸೊಸೈಟಿ ಹಗರಣ
ದಕ್ಷಿಣ ಮುಂಬೈನ ಕೊಲಾಬಾ ಪ್ರದೇಶದಲ್ಲಿರುವ 31 ಮಹಡಿಯ ಆದರ್ಶ್ ಸೊಸೈಟಿ ಫ್ಲ್ಯಾಟ್ ಗಳನ್ನು ಕಾರ್ಗಿಲ್ ಸಮರದ ಹೀರೋಗಳು ಹಾಗೂ ಮೃತ ಯೋಧರ ಪತ್ನಿಯರಿಗೆ ನೀಡುವ ಸಲುವಾಗಿ ನಿರ್ಮಿಸಲಾಗಿತ್ತು, ಆದರೆ, ಇದನ್ನು ರಾಜಕಾರಣಿಗಳು ಹಾಗೂ ಅವರ ಸಂಬಂಧಿಗಳು, ನಿವೃತ್ತ ಸೇನಾಧಿಕಾರಿಗಳು ಬಳಸುತ್ತಿದ್ದರು. ಇದರಿಂದ ವಿವಾದ ಹುಟ್ಟಿಕೊಂಡಿತ್ತು.
103ಕ್ಕೂ ಅಧಿಕ ಗಣ್ಯರ ಹೆಸರು
ಸೇನೆಯ ಹಿರಿಯ ಅಧಿಕಾರಿಗಳಾದ ಎನ್ ಸಿ ವಿಜ್, ದೀಪಕ್ ಕಪೂರ್, ಮಾಧವೇಂದ್ರ ಸಿಂಗ್, ರಾಜಕಾರಣಿ ಶರದ್ ಪವಾರ್ ಸೇರಿದಂತೆ ಸುಮಾರು 103ಕ್ಕೂ ಅಧಿಕ ಗಣ್ಯರ ಹೆಸರು ಈ ಹಗರಣದಲ್ಲಿ ಸಿಲುಕಿಕೊಂಡಿತ್ತು. ಮಾಜಿ ಮುಖ್ಯಮಂತ್ರಿ ಸುಶೀಲ್ ಕುಮಾರ್ ಶಿಂಧೆ, ವಿಲಾಸ್ ರಾವ್ ದೇಶ್ ಮುಖ್ ಅವರನ್ನು ಸಿಬಿಐ ವಿಚಾರಣೆಗೆ ಒಳಪಡಿಸಿತ್ತು.
ಜಾಮೀನು ಪಡೆದವರು
ಮಹಾರಾಷ್ಟ್ರದ ಆರ್ಥಿಕ ಕಾರ್ಯದರ್ಶಿ ಪ್ರದೀಪ್ ವ್ಯಾಸ್, ಪಿವಿ ದೇಶ್ ಮುಖ್, ನಿವೃತ್ತ ಬ್ರಿಗೇಡಿಯರ್ ಎಂ ಎಂ ವಾಂಚೂ, ಮಾಜಿ ಡಿಫೇನ್ಸ್ ಎಸ್ಟೇಸ್ಟ್ ಅಧಿಕಾರಿ ಆರ್ ಸಿ ಥಾಕೂರ್, ನಿವೃತ್ತ ಮೇಜರ್ ಜನರಲ್ ಎಆರ್ ಕುಮಾರ್, ನಿವೃತ್ತ ಮೇಜರ್ ಜನರಲ್ ಟಿಕೆ ಕೌಲ್, ಜೈರಾಜ್ ಪಾಠಕ್, ರಾಮಚಂದ್ ತಿವಾರಿ ಹಾಗೂ ಮಾಜಿ ಕಾಂಗ್ರೆಸ್ ಶಾಸಕ ಕೆಎಲ್ ಗಿಡ್ವಾಣಿ ಅವರು ಜಾಮೀನು ಪಡೆದಿದ್ದರು.
ಅಶೋಕ್ ಪ್ರತಿಕ್ರಿಯೆ
2014ರಲ್ಲಿ ಅಧಿಕಾರಕ್ಕೆ ಬರಲು ಬಿಜೆಪಿ ಮಾಡಿದ ಕುತಂತ್ರಗಳಲ್ಲಿ ಇದು ಒಂದಾಗಿದ್ದು, ಕಾಂಗ್ರೆಸ್ಸಿಗೆ ಅಪಮಾನ ಮಾಡಲು ಬಿಜೆಪಿಗೆ ನೈತಿಕ ಹಕ್ಕಿಲ್ಲ. ಸತ್ಯ ಈಗ ಜನರ ಮುಂದಿದೆ. ನ್ಯಾಯಾಂಗ ವ್ಯವಸ್ಥೆ ಮೇಲೆ ಕಾಂಗ್ರೆಸ್ಸಿಗೆ ಸಂಪೂರ್ಣ ಭರವಸೆ ಇದೆ ಎಂದರು.
ಇಲ್ಲಿ ಫ್ಲ್ಯಾಟ್ ಹೊಂದಿದ್ದ ಸೇನೆಯ ನಿವೃತ್ತ ಅಧಿಕಾರಿಗಳು, ಕಾರ್ಗಿಲ್ ಹುತಾತ್ಮರ ಕುಟುಂಬಗಳಿಗೆ ಮರಳಿಸಿದ್ದರು. ಈ ನಡುವೆ ಫ್ಲ್ಯಾಟ್ ಹಗರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಲಾಗಿತ್ತು. ಕಟ್ಟಡ ಕೂಡಾ ಈಗ ನೆಲಸಮಗೊಂಡಿದೆ.