ಹಾವಿನ ಜತೆ ಫೋಟೋ ಹಾಕಿದ ಟಿವಿ ನಟಿಯ ಬಂಧನ!
ಅಳಿವಿನಂಚಿನಲ್ಲಿರುವ ಹಾವಿನ ಜತೆ ಸಾಮಾಜಿಕ ಜಾಲತಾಣದಲ್ಲಿ ಫೊಟೋ ಹಾಕಿದ್ದಕ್ಕೆ ಟಿವಿ ನಟಿ ಹಾಗೂ ಇತರ ಮೂವರನ್ನು ಬಂಧಿಸಲಾಗಿದೆ. ಶ್ರುತಿ ಉಲ್ಫಾತ್ ನಾಲ್ಕು ತಿಂಗಳ ಹಿಂದೆ ಹಾವಿನ ಜತೆ ಫೋಟೋ ಹಾಕಿಕೊಂಡಿದ್ದರು.
ಮುಂಬೈ, ಫೆಬ್ರವರಿ 9: ಅಳಿವಿನಂಚಿನಲ್ಲಿರುವ ಹಾವಿನ ಜತೆ ಸಾಮಾಜಿಕ ಜಾಲತಾಣದಲ್ಲಿ ಫೊಟೋ ಹಾಕಿದ್ದಕ್ಕೆ ಟಿವಿ ನಟಿ ಹಾಗೂ ಇತರ ಮೂವರನ್ನು ಬಂಧಿಸಲಾಗಿದೆ. ಶ್ರುತಿ ಉಲ್ಫಾತ್ ನಾಲ್ಕು ತಿಂಗಳ ಹಿಂದೆ ಹಾವಿನ ಜತೆ ಫೋಟೋ ಹಾಕಿಕೊಂಡಿದ್ದರು.
ನಟಿಮಣಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಫೊಟೋದಲ್ಲಿರುವ ಹಾವು ಅಳಿವಿನಂಚಿನಲ್ಲಿರುವ ಹಾವಾಗಿದ್ದು, 1972ರ ಕಾಡುಪ್ರಾಣಿ ಸಂರಕ್ಷಣಾ ಕಾಯ್ದೆಯನ್ವಯ ಸಂರಕ್ಷಿತ ಪಟ್ಟಿಗೆ ಸೇರಿದೆ. ಈಕೆ ತಮ್ಮ ಧಾರಾವಾಹಿ 'ನಾಗಾರ್ಜುನ್ ಏಕ್ ಯೊಧ'ದ ಪ್ರಚಾರಕ್ಕಾಗಿ ಈ ಹಾವಿನ ಜತೆ ಚಿತ್ರ ಹಾಕಿಕೊಂಡಿದ್ದರು ಎನ್ನಲಾಗಿದೆ. ಕಳೆದ ವರ್ಷ ಅಕ್ಟೋಬರಿನಲ್ಲಿ ಈ ಚಿತ್ರವನ್ನು ಆಕೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಕಾಯ್ದೆ ಪ್ರಕಾರ ಅಳಿವಿನಂಚಿನಲ್ಲಿರುವ ಹಾವುಗಳ ಜತೆ ಫೊಟೋ ವಿಡಿಯೋ ತೆಗೆಯುವುದನ್ನು ನಿಷೇಧಿಸಲಾಗಿದೆ.[ಮಾಜಿ ನಟಿ ಮಮತಾ ಕುಲಕರ್ಣಿ ಪತಿ, ಡ್ರಗ್ಸ್ ಮಾಫಿಯಾ ಡಾನ್ ಸೆರೆ]
ಹಲವು ಪ್ರಾಣಿದಯಾ ಸಂಘಟನೆಗಳು ಈ ಚಿತ್ರ ನೋಟಿ ಉಲ್ಫಾಟ್ ವಿರುದ್ಧ ಥಾಣೆ ಅರಣ್ಯ ಠಾಣೆಯಲ್ಲಿ ಪ್ರಕರಣಗಳನ್ನು ದಾಖಲಿಸಿದ್ದರು. ಇದರನ್ವಯ ಈಗ ಶ್ರುತಿ ಉಲ್ಫಾತ್, ಆಕೆಯ ಸಹನಟ ಪರ್ಲ್ ಪುರಿ ಹಾಗೂ ನಿರ್ಮಾಪಕರಾದ ಉತ್ಕರ್ಷ್ ಬಾಲಿ ಮತ್ತು ನಿತಿನ್ ಸೋಲಂಕಿಯನ್ನು ಬಂಧಿಸಲಾಗಿದೆ.
ಈ ಹಿಂದೆ ನಟಿ ಮತ್ತು ಇತರರು ಇದು ಇದು ಕಂಪ್ಯೂಟರಿನಲ್ಲಿ ಸೃಷ್ಟಿ ಮಾಡಿದ ಗ್ರಾಫಿಕ್ ಚಿತ್ರ ಎಂದು ವಾದಿಸಿದ್ದರು. ನಂತರ ಸಿಡಿಯನ್ನು ಕಲೀನಾ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಪ್ರಯೋಗಾಲಯದವರು ಅದು ನಿಜ ಹಾವೆಂದು ಹೇಳಿದ ನಂತರ ಆಕೆಯನ್ನು ಬಂದಿಸಿದ್ದೇವೆ ಎಂದು ಥಾಣೆ ಅರಣ್ಯಾಧಿಕಾರಿ ಹೇಳಿದ್ದಾರೆ. ಇದೀಗ ಇವರನ್ನು ವಿಚಾರಣೆ ನಡೆಸಲಾಗುತ್ತಿದ್ದು ಒಂದು ದಿನದ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಅವರಿಗೆ ಹಾವು ತಂದುಕೊಟ್ಟವರು ಯಾರು ಎಂದೆಲ್ಲಾ ವಿಚಾರಣೆ ನಡೆಸುತ್ತಿದ್ದಾರೆ.[ಪಾಕಿಸ್ತಾನ ಪತ್ರಿಕೆಗಳಲ್ಲಿ ಸುದ್ದಿಯಾದ ನಟಿ, ಮಾಜಿ ಸಂಸದೆ ರಮ್ಯಾ]
ಆದರೆ ನಟಿ ಉಲ್ಫಾತ್ ಮಾತ್ರ ತನ್ನ ಬಂಧನ ಸುದ್ದಿ ಸುಳ್ಳು. ಈ ವೀಡಿಯೋ ಹಾಕಿದ ನಂತರ ನನ್ನನ್ನು ಬಂದು ಹೇಳಿಕೆ ನೀಡುವಂತೆ ಕೇಳಿಕೊಂಡಿದ್ದರು. ನಾನೇನು ತಪ್ಪು ಮಾಡಿಲ್ಲ ಹಾಗಾಗಿ ನನ್ನನ್ನು ಬಂಧಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.
ಧಾರಾವಾಹಿಯ 100ನೇ ಕಂತಿನ ಸಂಭ್ರಮಾಚರಣೆಯನ್ನು ಕಳೆದ ಅಕ್ಟೋಬರಿನಲ್ಲಿ ಗೊರೆಗಾನ್ ನಲ್ಲಿರುವ ಫಿಲ್ಮ್ ಸಿಟಿಯಲ್ಲಿ ಆಯೋಜಿಸಲಾಗಿತ್ತು. ಈ ವೇಳೆ ನಿರ್ಮಾಪಕರು ನೈಜ ಹಾವನ್ನು ತಂದಿದ್ದರು ಎನ್ನಲಾಗಿದೆ. ಆಗ ನಟಿ ಹಾವಿನ ಜತೆ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು.