ಆಸ್ಪತ್ರೆಯಲ್ಲಿ ತಪಾಸಣೆ ವೇಳೆ ರಹಸ್ಯ ಫೋಟೋ: ಸಂಸದೆ ನವನೀತ್ ಕೌರ್ ರಾಣಾ ದೂರು
ಮುಂಬಯಿ, ಮೇ 11: ಅನಾರೋಗ್ಯ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಸಂಪೂರ್ಣ ಬಾಡಿ ಸ್ಕ್ಯಾನ್ ಮಾಡಿಸಿಕೊಳ್ಳುವಾಗ ರಹಸ್ಯವಾಗಿ ತನ್ನ ಪೋಟೊ ತೆಗೆಯಲಾಗಿದೆ ಎಂದು ಆರೋಪಿಸಿ ನಟಿ, ಸಂಸದೆ ನವನೀತ್ ಕೌರ್ ರಾಣಾ ಮುಂಬಯಿ ಪೊಲೀಸರಿಗೆ ದೂರು ನೀಡಿದ್ದಾರೆ.
ಸದ್ಯ ಆಂಧ್ರ ಪ್ರದೇಶದ ಅಮರಾವತಿ ಕ್ಷೇತ್ರದ ಸಂಸದೆಯಾಗಿರುವ ನವನೀತ್ ಕೌರ್ ರಾಣಾ ಅವರು, ಈ ಹಿಂದೆ ತೆಲುಗು ಮತ್ತು ತಮಿಳು ಭಾಷೆಯ ಅನೇಕ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.
ತಮಿಳು ನಟ ವಿಜಯಕಾಂತ್ ಅಭಿನಯದ 'ಅರಸಂಗಂ' ಮತ್ತು ಕರುಣಾ ಅಭಿನಯದ 'ಅಂಬಸಮುದ್ರಂ ಅಂಬನಿ' ಚಲನಚಿತ್ರಗಳಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಇದೀಗ ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿರುವ ಅವರು ಸಂಪೂರ್ಣವಾಗಿ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಾರೆ.
ನವನೀತ್ ಕೌರ್ ರಾಣಾ ಅವರು ಅಮರಾವತಿ ನಗರದ ಬದ್ನೇರಾ ಕ್ಷೇತ್ರದ ಹಾಲಿ ಶಾಸಕ ರವಿ ರಾಣಾ ಅವರನ್ನು 2011ರಲ್ಲಿ ಮದುವೆಯಾದರು. ಇತ್ತೀಚೆಗೆ ವಿವಾದ ಒಂದಕ್ಕೆ ಸಂಬಂಧಿಸಿದಂತೆ ಮಾತನಾಡುವಾಗ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ನಿವಾಸದಲ್ಲಿ ಹನುಮಾನ್ ಚಾಲೀಸಾ ಪಠಿಸುವುದಾಗಿ ಹೇಳಿಕೆ ನೀಡಿದ್ದರು. ಮಹಾರಾಷ್ಟ್ರ ಪೊಲೀಸರು ನವನೀತ್ ಕೌರ್ ರಾಣಾ ದಂಪತಿಯನ್ನು ಬಂಧಿಸಿದ್ದರು. ಸದ್ಯ ಇಬ್ಬರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.
ಕೆಲವು ದಿನಗಳ ಹಿಂದೆ ನವನೀತ್ ಕೌರ್ ರಾಣಾ ಅವರಿಗೆ ಎದೆ ನೋವು ಕಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಅವರು ಮುಂಬಯಿನ ಲೀಲಾವತಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ತಪಾಸಣೆಯ ಭಾಗವಾಗಿ ಅವರನ್ನು ವೈದ್ಯರು ಸಂಪೂರ್ಣ ಬಾಡಿ ಸ್ಕ್ಯಾನ್ಗೆ ಒಳಪಡಿಸಿದ್ದಾರೆ. ಈ ವೇಳೆ ಸ್ಕ್ಯಾನ್ ಮಾಡುವ ಕೊಠಡಿಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ರಹಸ್ಯವಾಗಿ ಅವರ ಬಾಡಿ ಸ್ಕ್ಯಾನ್ ಪೋಟೊ ಸೆರೆಹಿಡಿದಿರುವ ವಿಚಾರ ತಿಳಿದುಬಂದಿದೆ.
ಇದರ ವಿರುದ್ಧಸಿಡಿಮಿಡಿಗೊಂಡಿರುವ ನವನೀತ್ ಕೌರ್ ರಾಣಾ, ಅಪರಿತ ವ್ಯಕ್ತಿಯ ವಿರುದ್ಧ ಮುಂಬಯಿ ಪೊಲೀಸರಿಗೆ ದೂರು ನೀಡಿದ್ದಾರೆ.