ಧೋನಿ ಪಾತ್ರದಲ್ಲಿ ಮಿಂಚಿದ್ದ ಸುಶಾಂತ್ ಸಿಂಗ್ ಆತ್ಮಹತ್ಯೆ
ಮುಂಬೈ, ಜೂನ್ 14: ಕೊರನಾವೈರಸ್ ಲಾಕ್ಡೌನ್ ನಿಂದ ಆರ್ಥಿಕ ಹೊಡೆತಕ್ಕೆ ಸಿಲುಕಿರುವ ಬಾಲಿವುಡ್ಡಿಗೆ ದೊಡ್ಡ ಆಘಾತಕಾರಿ ಸುದ್ದಿಯೊಂದು ಭಾನುವಾರ ಮಧ್ಯಾಹ್ನ ಸಿಕ್ಕಿದೆ. ಸ್ಫುರದ್ರೂಪಿ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Recommended Video
ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಪಾತ್ರದಲ್ಲಿ ಮಿಂಚಿದ್ದ ಸುಶಾಂತ್ ಸಿಂಗ್ ಅವರು ತಮ್ಮ ಬಾಂದ್ರಾದ ನಿವಾಸದಲ್ಲಿ ಮೃತರಾಗಿದ್ದಾರೆ.
ನಟ ಸುಶಾಂತ್ ಸಾವಿಗೆ 'Asphyxia' ಕಾರಣ ಎಂದ ಮರಣೋತ್ತರ ಪರೀಕ್ಷೆ ವರದಿ
ಸುಶಾಂತ್ ಅವರ ದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಬಾಂದ್ರಾದ ನಿವಾಸದಲ್ಲಿ ಫ್ಯಾನಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ದಿಲ್ ಬೇಚಾರಾ, ರೈಫಲ್ ಮ್ಯಾನ್ ಎರಡು ಚಿತ್ರಗಳು 2020ರಲ್ಲಿ ಬಿಡುಗಡೆಗೆ ಕಾದಿದ್ದವು.
ಚಂದ್ರನಲ್ಲಿ ಫ್ಲಾಟ್ ಖರೀದಿಸಿದ್ದ ಸುಶಾಂತ್, ಸಾವಿಗೆ ಆರ್ಥಿಕ ಬಿಕ್ಕಟ್ಟು ಕಾರಣವೆ?
ಸುಶಾಂತ್ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಏನು ಎಂಬುದು ಇನ್ನೂ ತಿಳಿದು ಬಂದಿಲ್ಲ. ರೂಮಿನಲ್ಲಿ ಯಾವುದೇ ಸೂಸೈಡ್ ನೋಟ್ ಸಿಕ್ಕಿಲ್ಲ. ಲಾಕ್ಡೌನ್ ನಿಂದಾಗಿ ಯಾವುದೇ ಹೊಸ ಪ್ರಾಜೆಕ್ಟ್ ಸಿಗದೆ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿರಬಹುದು ಎಂದು ಅನುಮಾನ ವ್ಯಕ್ತವಾಗಿದೆ.
ನಟ ಸುಶಾಂತ್ ಶವದ ಫೋಟೋ ಹಂಚಿಕೊಳ್ಳುವವರ ವಿರುದ್ಧ ಕ್ರಮ
ಕಾಯ್ ಪೋ ಛೆ, ಡಿಟೆಕ್ಟಿವ್ ಬ್ಯೂಮ್ಕೇಶ್ ಬಕ್ಷಿ, ಎಂಎಸ್ ಧೋನಿ ದಿ ಅನ್ ಟೋಲ್ಡ್ ಸ್ಟೋರಿ, ಛಿಛೋರೆ ಜನಪ್ರಿಯ ಚಿತ್ರಗಳಾಗಿದ್ದು, ಕಿಸ್ ದೇಶ್ ಮೇ ಹೇ ಮೇರಾ ದಿಲ್, ಪವಿತ್ರಾ ರಿಸ್ತಾ ಸೀರಿಯಲ್ ಗಳು, ಝರಾ ನಚ್ಕೆ ದಿಖಾ, ಝಲಕ್ ದಿಖ್ ಲಾಜಾ 4ರಲ್ಲಿ ನರ್ತಿಸಿ ಮಿಂಚಿದ್ದರು.
ಕಿರುತೆರೆಯಿಂದ ಹಿರಿತೆರೆಗೆ
34 ವರ್ಷ ವಯಸ್ಸಿಗೆ ಆತ್ಮಹತ್ಯೆಗೆ ಶರಣಾಗಿರುವ ಸುಶಾಂತ್ ಅವರು ಕಿರುತೆರೆಯಲ್ಲಿ ಮಿಂಚಿ ನಂತರ ಬಾಲಿವುಡ್ ನಲ್ಲಿ ದೊಡ್ಡ ಹೆಸರು ಮಾಡಿದವರು. ಪವಿತ್ರಾ ರಿಸ್ತಾ ಸೀರಿಯಲ್ ನಲ್ಲಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡು ಮನೆ ಮಾತಾಗಿದ್ದರು. ಮೊದಲಿಗೆ ಅಭಿಶೇಕ್ ಕಪೂರ್ ಅವರ ಕಾಯ್ ಪೋ ಚೇ ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಚೇತನ್ ಭಗತ್ ಕಾದಂಬರಿ ದಿ ತ್ರೀ ಮಿಸ್ಟೇಕ್ಸ್ ಆಫ್ ಮೈ ಲೈಫ್ ಆಧಾರಿತ ಚಿತ್ರ ಇದಾಗಿದೆ. ಝಲಕ್ ದಿಕ್ಲಾ ಜಾ ಡ್ಯಾನ್ಸ್ ರಿಯಾಲಿಟಿ ಶೋದಲ್ಲೂ ಮಿಂಚಿದ್ದ ಸುಶಾಂತ್ ತಮ್ಮದೇ ಅಭಿಮಾನಿ ವರ್ಗ ಹೊಂದಿದ್ದರು.
ಆತ್ಮಹತ್ಯೆ ಬಗ್ಗೆ ಪೊಲೀಸರ ಹೇಳಿಕೆ ಏನು?
ಸುಶಾಂತ್ ಅವರು ತಮ್ಮ ರೂಮಿನಲ್ಲಿ ಭಾನುವಾರ ಬೆಳಗ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆ ನಡೆದಾಗ ಅವರ ಕೆಲವು ಸ್ನೇಹಿತರು ಮನೆಯ ಇನ್ನೊಂದು ಭಾಗದಲ್ಲಿದ್ದರು. ಕಳೆದ 6 ತಿಂಗಳಿನಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಹೀಗಾಗಿ, ಸ್ನೇಹಿತರು ಸದಾಕಾಲ ಜೊತೆಯಲ್ಲಿದ್ದು ಸಾಂತ್ವನ ಹೇಳುತ್ತಿದ್ದರು ಎಂದು ತಿಳಿದು ಬಂದಿದೆ. ಸದ್ಯಕ್ಕೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ, ಘಟನಾ ಸ್ಥಳದಲ್ಲಿ ಸೂಸೈಡ್ ನೋಟ್ ಇಲ್ಲ, ಸುಶಾಂತ್ ಮೊಬೈಲ್ ಫೋನ್ ಮೆಸೇಜ್ ಪರಿಶೀಲಿಸಲಾಗುತ್ತಿದೆ. ಮರಣೋತ್ತರ ಪರೀಕ್ಷೆ ನಂತರ ಹೆಚ್ಚಿನ ಮಾಹಿತಿ ತಿಳಿದು ಬರಲಿದೆ ಎಂದು ಬಾಂದ್ರಾ ಪೊಲೀಸರು ಹೇಳಿದ್ದಾರೆ.
ನೋವು ಮರೆಯಲು ಬಣ್ಣದ ಲೋಕಕ್ಕೆ ಜಿಗಿತ
ಬಿಹಾರದ ಪೂರ್ನಿಯಾ ಜಿಲ್ಲೆಯ ಮೂಲದ ಸುಶಾಂತ್ ಸಿಂಗ್ ಅವರು ಪಾಟ್ನಾದಲ್ಲಿ 1986ರಲ್ಲಿ ಜನಿಸಿದ್ದರು. ಸುಶಾಂತ್ ಸೋದರಿ ಮೀತು ಸಿಂಗ್ ಹಾಗೂ ಅವರ ತಾಯಿ 2002ರಲ್ಲಿ ಮೃತರಾಗುತ್ತಾರೆ. ಸುಶಾಂತ್ ಸೋದರಿ ರಾಜ್ಯಮಟ್ಟದ ಕ್ರಿಕೆಟರ್ ಆಗಿದ್ದರು. ಬಿಹಾರ ತೊರೆದು ದೆಹಲಿಗೆ ಬಂದ ಸುಶಾಂತ್ ಮೊದಲ ಚಿತ್ರದಲ್ಲಿ ಕೂಡಾ ಕ್ರಿಕೆಟ್ ಪ್ರಧಾನ ವಿಷಯವಾಗಿದೆ. ಅವರಿಗೆ ಹೆಸರು ತಂದುಕೊಟ್ಟ ಧೋನಿ ಪಾತ್ರ ಕೂಡಾ ಕ್ರಿಕೆಟರ್ ಕುರಿತಾಗಿದೆ. ನೋವು ಮರೆಯಲು ಬಣ್ಣದ ಲೋಕಕ್ಕೆ ಬಂದಿದ್ದ ಸುಶಾಂತ್, ನೋವು ನುಂಗಲಾರದೆ ಶಾಶ್ವತವಾಗಿ ಇಹಲೋಕ ಯಾತ್ರೆ ಮುಗಿಸಿದ್ದಾರೆ.
ಪಾಟ್ನಾದಲ್ಲಿ ಹೈಸ್ಕೂಲ್, ದೆಹಲಿಯಲ್ಲಿ ಇಂಜಿನಿಯರಿಂಗ್
ಪಾಟ್ನಾದಲ್ಲಿ ಹೈಸ್ಕೂಲ್, ದೆಹಲಿಯಲ್ಲಿ ಇಂಜಿನಿಯರಿಂಗ್ ಇನ್ ಮೆಕ್ಯಾನಿಕಲ್ ಓದಿರುವ ಸುಶಾಂತ್ ಓರ್ವ Rank ಸ್ಟುಡೆಂಟ್ ಆಗಿದ್ದರು. ಇಂಡಿಯನ್ ಸ್ಕೂಲ್ ಆಫ್ ಮೈನ್ಸ್ ನಲ್ಲಿ ಎಲ್ಲ ಪ್ರವೇಶ ಪರೀಕ್ಷೆಯನ್ನು ಒಮ್ಮೆಗೆ ಕ್ಲಿಯರ್ ಮಾಡಿದ್ದರು. ದೆಹಲಿ ತಾಂತ್ರಿಕ ವಿವಿಯಲ್ಲಿರುವಾಗ ಶೈಮಾಕ್ ದವಾರ್ ಡ್ಯಾನ್ಸ್ ಕ್ಲಾಸ್ ಸೇರಿದ್ದ ಸುಶಾಂತ್ ಗೆ ನಾಟಕ ರಂಗ, ಸಿನಿಮಾ ನಟನೆ ಬಗ್ಗೆ ಆಸಕ್ತಿ ಬೆಳೆದು ಚಿತ್ರರಂಗಕ್ಕೆ ಕರೆದುಕೊಂಡು ಬಂದಿತ್ತು.
ಮಾಧ್ಯಮಗಳಿದ ದೂರವಿದ್ದ ಸುಶಾಂತ್
ಶ್ರದ್ಧಾಕಪೂರ್ ಜೊತೆ ಛಿಛೋರೆ ಚಿತ್ರದಲ್ಲಿ ಕೊನೆಯ ಬಾರಿಗೆ ನಟಿಸಿದ್ದ ಸುಶಾಂತ್ ಅವರು ಕಳೆದ ಒಂದು ವರ್ಷದಿಂದ ಮಾಧ್ಯಮಗಳಿಂದ ದೂರವೇ ಉಳಿದಿದ್ದರು. ಸಹನಟಿ ಅಂಕಿತಾ ಲೋಕೊಂಡೆ ಜೊತೆ ಸಹಜೀವನ ನಡೆಸಿದ್ದ ಸುಶಾಂತ್ 2016ರಲ್ಲಿ ಈ ಬಂಧನ ಕಡೆದುಕೊಂಡಿದ್ದರು. ಇತ್ತೀಚೆಗೆ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯನ್ ಮೃತಪಟ್ಟಿದ್ದರು. ಈ ಬಗ್ಗೆ ತೀವ್ರವಾಗಿ ನೊಂದುಕೊಂಡಿದ್ದರು ಆಪ್ತರು ಹೇಳಿದ್ದಾರೆ.