ಡ್ರಗ್ಸ್ ಪ್ರಕರಣ ಕಳಪೆ ತನಿಖೆ: ಸಮೀರ್ ವಾಂಖೆಡೆ ವಿರುದ್ಧ ಕ್ರಮ ಸಾಧ್ಯತೆ
ಮುಂಬೈ ಮೇ 27: ಡ್ರಗ್ಸ್ ಆನ್ ಕ್ರೂಸ್ ಪ್ರಕರಣದ ಆರಂಭದಲ್ಲಿ ತನಿಖೆ ನಡೆಸಿದ್ದ ಮಾದಕ ದ್ರವ್ಯ ನಿಗ್ರಹ ಅಧಿಕಾರಿ ಸಮೀರ್ ವಾಂಖೆಡೆ ಅವರು ನಕಲಿ ಜಾತಿ ಪ್ರಮಾಣ ಪತ್ರ ಸಲ್ಲಿಸಿದ ಆರೋಪದಲ್ಲಿ ಕ್ರಮ ಎದುರಿಸುತ್ತಿದ್ದಾರೆ. ಜೊತೆಗೆ ಡ್ರಗ್ಸ್ ಪ್ರಕರಣದ "ಕಳಪೆ ತನಿಖೆ" ಎದುರಿಸುತ್ತಿದ್ದಾರೆ ಎಂದು ವಿಷಯದ ನೇರ ಜ್ಞಾನ ಹೊಂದಿರುವವರು ಹೇಳಿದ್ದಾರೆ. ಇದರಿಂದ ಮುಂಬೈ ಕ್ರೂಸ್ ಪ್ರಕರಣ ನಾನಾ ಆರೋಪಗಳಿಂದ ದಿಕ್ಕು ತಪ್ಪುತ್ತಿರುವಂತೆ ಕಾಣಿಸುತ್ತಿದೆ. ನಿಜವಾದ ಆರೋಪಿಗೆ ಶಿಕ್ಷೆ ಕೈತಪ್ಪಿತಾ? ಪ್ರಕರಣ ಕೈಗೆತ್ತಿಕೊಂಡವರಿಗೆ ಸಂಕಷ್ಟ ಎದುರಾಯ್ತಾ? ಎನ್ನುವ ಅನುಮಾನಗಳು ಎದುರಾಗಿವೆ.
"ಸಮೀರ್ ವಾಂಖೆಡೆ ಅವರ ವಿರುದ್ಧ ಕಳಪೆ ತನಿಖೆಗಾಗಿ ಕ್ರಮ ಕೈಗೊಳ್ಳುವಂತೆ ಸರ್ಕಾರದಿಂದ ಸಕ್ಷಮ ಪ್ರಾಧಿಕಾರವನ್ನು ಕೇಳಲಾಗಿದೆ. ಅವರ ನಕಲಿ ಜಾತಿ ಪ್ರಮಾಣಪತ್ರಕ್ಕಾಗಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು," ಎಂದು ಹೆಸರು ಹೇಳಲು ಬಯಸದ ಅಧಿಕಾರಿಯೊಬ್ಬರು ಹೇಳಿದ್ದಾರೆ.
ನಕಲಿ ದಾಖಲೆ ಸೃಷ್ಟಿ ಆರೋಪ
ಮುಂಬೈ ಕ್ರೂಸ್ನಲ್ಲಿ ಡ್ರಗ್ಸ್ ವಿರುದ್ಧ ದಾಳಿ ಮಾಡಿದ ಬಳಿಕ ಸಮೀರ್ ವಾಖೆಂಡೆ ವಿರುದ್ಧ ಹಲವಾರು ಆರೋಪಗಳು ಕೇಳಿ ಬಂದಿವೆ. ಅವರು ಸರ್ಕಾರಿ ಉದ್ಯೋಗ ಗಿಟ್ಟಿಸಲು ಸಮೀರ್ ವಾಂಖೆಡೆ ನಕಲಿ ದಾಖಲೆಗಳನ್ನು ಬಳಸಿದ್ದಾರೆ ಎಂದು ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಆರೋಪಿಸಿದ್ದರು. ನಂತರ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಅಥವಾ ಎನ್ಸಿಬಿ ಅಧಿಕಾರಿ ಕಳೆದ ನವೆಂಬರ್ನಲ್ಲಿ ಅವರು ತಮ್ಮ ಜಾತಿಯನ್ನು ಸಾಬೀತುಪಡಿಸಲು ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗದ ಮೂಲ ಜಾತಿಯ ದಾಖಲೆಗಳನ್ನು ನೀಡಿದ್ದರು.
ಸಮೀರ್ ವಾಂಖೆಡೆ ಅವರು ಎನ್ಸಿಬಿಯ ಮುಂಬೈ ವಲಯದ ಮುಖ್ಯಸ್ಥರಾಗಿದ್ದರು ಮತ್ತು ಮುಂಬೈ ಕರಾವಳಿಯ ಕ್ರೂಸ್ನಲ್ಲಿ ಡ್ರಗ್ಸ್ ವಿರೋಧಿ ದಾಳಿಯ ನಂತರ ಆರಂಭಿಕ ತನಿಖೆಯನ್ನು ನಿರ್ವಹಿಸಿದರು, ಈ ಪ್ರಕರಣದಲ್ಲಿ ನಟ ಶಾರುಖ್ ಖಾನ್ ಅವರ ಮಗ ಆರ್ಯನ್ ಖಾನ್ ಅವರನ್ನು ಬಂಧಿಸಲಾಯಿತು.
ನವಾಬ್ ಮಲಿಕ್ ಕಚೇರಿ ಟ್ವೀಟ್
ಬಳಿಕ ಸೂಪರ್ ಸ್ಟಾರ್ ಪುತ್ರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಇಂದು ಅವರ ಹೆಸರನ್ನು ಡ್ರಗ್ಸ್-ಆನ್-ಕ್ರೂಸ್ ಪ್ರಕರಣದಲ್ಲಿ ತೆರವುಗೊಳಿಸಲಾಗಿದೆ. ಏಕೆಂದರೆ ಎನ್ಸಿಬಿಯ 6,000 ಪುಟಗಳ ಚಾರ್ಜ್ಶೀಟ್, 14 ಆರೋಪಿಗಳನ್ನು ಹೆಸರಿಸಿದೆ, ಇದರಲ್ಲಿ ಆರ್ಯನ್ ಖಾನ್ ಹೆಸರನ್ನು ಉಲ್ಲೇಖಿಸಿಲ್ಲ.
"ಈಗ ಆರ್ಯನ್ ಖಾನ್ ಮತ್ತು ಇತರ 5 ಜನರಿಗೆ ಕ್ಲೀನ್ ಚಿಟ್ ಸಿಕ್ಕಿದೆ. ಎನ್ಸಿಬಿ ಸಮೀರ್ ವಾಂಖೆಡೆ ಅವರ ತಂಡ ಮತ್ತು ಖಾಸಗಿ ಸೇನೆಯ ವಿರುದ್ಧ ಕ್ರಮ ಕೈಗೊಳ್ಳುತ್ತದೆಯೇ? ಅಥವಾ ಅಪರಾಧಿಗಳನ್ನು ರಕ್ಷಿಸುತ್ತದೆಯೇ?" ಎಂದು ನವಾಬ್ ಮಲಿಕ್ ಕಚೇರಿ ಟ್ವೀಟ್ ಮಾಡಿದೆ.
ಒಂದೇ ರೀತಿಯ ಪ್ರಕರಣ ದಾಖಲು
ಡ್ರಗ್ಸ್ ದಾಳಿಯ ನಂತರ ವಾಂಖೆಡೆ ನಡೆಸಿದ ತನಿಖೆಯಲ್ಲಿ ಐದು ಅಕ್ರಮಗಳನ್ನು ಮೂಲಗಳು ಇಂದು ವಿವರಿಸಿವೆ. ಶೋಧ ಕಾರ್ಯಾಚರಣೆಯಲ್ಲಿ ಯಾವುದೇ ವಿಡಿಯೋಗ್ರಫಿ ಮಾಡಲಾಗಿಲ್ಲ ಮತ್ತು ಆರ್ಯನ್ ಖಾನ್ ಅವರ ಫೋನ್ನ ವಿಷಯಗಳನ್ನು ವಿಶ್ಲೇಷಿಸುವಲ್ಲಿ ಲೋಪವಾಗಿದೆ. ಏಕೆಂದರೆ ಚಾಟ್ಗಳು ಪ್ರಕರಣದೊಂದಿಗೆ ಸಂಪರ್ಕಿಸುವುದಿಲ್ಲ ಎಂದು ಮೂಲಗಳು ತಿಳಿಸಿವೆ.
ಡ್ರಗ್ಸ್ ಸೇವನೆಯನ್ನು ಸಾಬೀತುಪಡಿಸಲು ಯಾವುದೇ ವೈದ್ಯಕೀಯ ಪರೀಕ್ಷೆಯನ್ನು ಮಾಡಲಾಗಿಲ್ಲ ಮತ್ತು ಒಬ್ಬ ಸಾಕ್ಷಿಯು ಖಾಲಿ ಪೇಪರ್ಗಳ ಮೇಲೆ ತಮ್ಮ ಸಹಿ ಹಾಕಿಸಿಕೊಳ್ಳಲಾಗಿದೆ ಎಂದು ವಿಶೇಷ ತನಿಖಾ ತಂಡಕ್ಕೆ ತಿಳಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ, ಇನ್ನೂ ಇಬ್ಬರು ಸಾಕ್ಷಿಗಳು NCB ದಾಳಿಯ ಸಮಯದ ಸ್ಥಳದಲ್ಲಿ ತಾವು ಇರಲಿಲ್ಲ ಎಂದು ಹೇಳಿದ್ದಾರೆ.
ಮತ್ತೊಂದು ಗಂಭೀರವಾದ ಲೋಪವೆಂದರೆ ಎಲ್ಲಾ ಆರೋಪಿಗಳನ್ನು ಬಂಧಿಸುವುದು ಮತ್ತು ಆರ್ಯನ್ ಖಾನ್ ಡ್ರಗ್ಸ್ ಇಲ್ಲದೆ ಪತ್ತೆಯಾದಾಗಲೂ ಪ್ರತಿಯೊಬ್ಬರ ವಿರುದ್ಧ ಒಂದೇ ರೀತಿಯ ಆರೋಪಗಳನ್ನು ಮಾಡುವುದು ಎಂದು ಮೂಲಗಳು ತಿಳಿಸಿವೆ.
ದಾಳಿ ಮಾಡಿದ್ದಕ್ಕೆ ವಾಂಖೆಡೆಗೆ ಸಂಕಷ್ಟ?
ಮುಂಬೈ ಡ್ರಗ್ ಕೇಸ್ ಕೈಗೆತ್ತಿಕೊಂಡಾಗಿನಿಂದಾಗಲೂ ಸಮೀರ್ ವಾಂಖೆಡೆ ವಿರುದ್ಧ ಹಲವು ಆರೋಪಗಳು ಕೇಳಿ ಬರುತ್ತಲೇ ಇವೆ. ಪ್ರಕರಣದ ಅರೋಪಿ ಪ್ರಭಾಕರ್ ಡ್ರಗ್ ಪ್ರಕರಣದಲ್ಲಿ 25 ಕೋಟಿ ಡೀಲ್ ನಡೆದಿದೆ ಎಂದು ದೂರಿದ್ದರು. ಇದರಲ್ಲಿ ಸಮೀರ್ ವಾಂಖೆಡೆ ಅವರು ಸೇರಿದ್ದಾರೆಂದು ಗಂಭೀರ ಆರೋಪ ಮಾಡಿದ್ದರು. ಇದರೊಂದಿಗೆ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಅವರು ಸಮೀರ್ ಅವರ ಮೇಲೆ ಫೋರ್ಜರಿ ಆರೋಪಗಳನ್ನು ಮಾಡಿದ್ದಾರೆ. ಡ್ರಗ್ ಕೇಸ್ಗೆ ಸಂಬಂಧಿಸಿದಂತೆ ಮಾಲ್ಡೀವ್ಸ್ನಲ್ಲಿ ಹಣದ ವ್ಯವಹಾರ ಮಾಡಿಕೊಳ್ಳಲಾಗಿದೆ. ಈ ವೇಳೆ ಸಮೀರ್ ಕೂಡ ಮಾಲ್ಡೀವ್ಸ್ನಲ್ಲಿದ್ದರು ಎಂದು ನೇರವಾಗಿ ಆರೋಪ ಮಾಡಿದ್ದರು. ಸಮೀರ್ ವಿವಾಹದ ಬಗ್ಗೆ ಜೊತೆಗೆ ಸಮೀರ್ ಅವರ 'ತಾಯಿಯ ಧರ್ಮ'ದ ಮೇಲೆ ಟಾರ್ಗೆಟ್ ಮಾಡಲಾಗಿತ್ತು. ಜೊತೆಗೆ ನವಾಬ್ ಸಮೀರ್ ಅವರ ಅತ್ತಿಗೆ ವಿರುದ್ಧ ಧ್ವನಿ ಎತ್ತಿದ್ದರು. ಈಗ ಕಳಪೆ ತನಿಖೆ ಹಾಗೂ ನಕಲಿ ಜಾತಿ ಪ್ರಮಾಣ ಪತ್ರ ಸಲ್ಲಿಸಿದ ಆರೋಪದಲ್ಲಿ ಕ್ರಮ ಎದುರಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
(ಒನ್ಇಂಡಿಯಾ ಸುದ್ದಿ)