ಮಹಾರಾಷ್ಟ್ರ: ಅಜಿತ್ ಪವಾರ್ಗೆ ಹಗರಣ ಆರೋಪದಿಂದ ಕ್ಲೀನ್ಚಿಟ್ ಗಿಫ್ಟ್?
ಮುಂಬೈ, ನವೆಂಬರ್ 25: ಮಹಾರಾಷ್ಟ್ರದಲ್ಲಿ ಕಾಂಗ್ರೆಸ್-ಎನ್ಸಿಪಿ ಸರ್ಕಾರವಿದ್ದಾಗ ನಡೆದಿದೆ ಎನ್ನಲಾದ ಒಂಬತ್ತು ನೀರಾವರಿ ಹಗರಣಗಳ ತನಿಖೆಯನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಕೈಬಿಟ್ಟಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಆದರೆ ಸೋಮವಾರ ಈ ಬಗ್ಗೆ ಹೇಳಿಕೆ ನೀಡಿರುವ ಎಸಿಬಿ, ಈ ಯಾವ ಪ್ರಕರಣಗಳೂ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರಿಗೆ ಸಂಬಂಧಿಸಿದ್ದಲ್ಲ ಎಂದು ಸ್ಪಷ್ಟೀಕರಣ ನೀಡಿದೆ.
ಮಹಾರಾಷ್ಟ್ರದಲ್ಲಿ ಮತ್ತೊಂದು ಬೆಳವಣಿಗೆ: ರಾಜ್ಯಪಾಲರಿಗೆ ಸಂಕಟ
ಎನ್ಸಿಪಿಯ ಮುಖ್ಯಸ್ಥ ಶರದ್ ಪವಾರ್ ಅವರ ಅಣ್ಣನ ಮಗನಾಗಿರುವ ಅಜಿತ್ ಪವಾರ್, ಶನಿವಾರ ನಡೆದ ದಿಢೀರ್ ಬೆಳವಣಿಗೆಯಲ್ಲಿ ಬಿಜೆಪಿಗೆ ಬೆಂಬಲ ನೀಡುವ ಮೂಲಕ ಬಿಜೆಪಿ-ಎನ್ಸಿಪಿ ಸರ್ಕಾರ ರಚನೆಗೆ ನೆರವಾಗಿದ್ದರು. ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಜತೆಗೆ ಅವರು ಉಪಮುಖ್ಯಮಂತ್ರಿಯಾಗಿ ಕೂಡ ಪ್ರಮಾಣವಚನ ಸ್ವೀಕರಿಸಿದ್ದರು. ಈ ಪ್ರಕರಣ ಈಗ ಸುಪ್ರೀಂಕೋರ್ಟ್ನಲ್ಲಿದ್ದು, ಮಂಗಳವಾರ ತೀರ್ಪು ಹೊರಬೀಳಲಿದೆ.
ಅಧಿಕಾರದ ಆಸೆಗೆ ಬಿದ್ದು ಏಕಾಂಗಿಯಾದರೇ ಅಜಿತ್ ಪವಾರ್?
ಅಜಿತ್ ಪವಾರ್ ಅವರನ್ನು ಎನ್ಸಿಪಿಗೆ ಮರಳಿ ಕರೆತರುವ ಪ್ರಯತ್ನ ನಡೆಸಿರುವ ಮುಖಂಡರು, ಈಗಾಗಲೇ ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಶಿವಸೇನಾ-ಎನ್ಸಿಪಿ-ಕಾಂಗ್ರೆಸ್ಗೆ ಅಗತ್ಯಬಲವಿದೆ ಎಂದು ಹಕ್ಕು ಮಂಡಿಸಿದ್ದಾರೆ. ಈ ನಡುವೆ ಅಜಿತ್ ಪವಾರ್ ಅವರು ಎಸಿಬಿ ತನಿಖೆಯಿಂದ ಕ್ಲೀನ್ ಚಿಟ್ ಪಡೆದಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ ಎಂದು ವಿರೋಧಪಕ್ಷಗಳು ಹೇಳಿವೆ.
ಬಿಜೆಪಿ ನೀಡಿದ ಉಡುಗೊರೆ- ಕಾಂಗ್ರೆಸ್
ಬಿಜೆಪಿಗೆ ಬೆಂಬಲ ನೀಡುವ ಮೂಲಕ ಸರ್ಕಾರ ರಚನೆಗೆ ಕಾರಣವಾಗಿದ್ದಕ್ಕೆ ಅಜಿತ್ ಪವಾರ್ ಅವರಿಗೆ ನಿರ್ದೋಷಿ ಎಂಬ ಉಡುಗೊರೆ ನೀಡಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಅದಕ್ಕೆ ಸ್ಪಷ್ಟೀಕರಣ ನೀಡಿರುವ ಎಸಿಬಿ, ಈ ಯಾವ ಪ್ರಕರಣಗಳೂ ಅಜಿತ್ ಪವಾರ್ ಅವರಿಗೆ ಸಂಬಂಧಿಸಿರಲಿಲ್ಲ. ಈ ಬಗ್ಗೆ ತಪ್ಪು ಮಾಹಿತಿಯನ್ನು ಹರಿಬಿಡಲಾಗುತ್ತಿದೆ ಎಂದು ಹೇಳಿದೆ.
2013ರಲ್ಲಿ ನಡೆದಿದೆ ಎನ್ನಲಾದ ನೀರಾವರಿ ಹಗರಣದಲ್ಲಿ ಅಜಿತ್ ಪವಾರ್ ಅವರ ವಿರುದ್ಧ ಆರೋಪವಿರುವ ಯಾವ ಪ್ರಕರಣಗಳನ್ನೂ ಅಂತ್ಯಗೊಳಿಸಿಲ್ಲ ಎಂದು ಎಸಿಬಿ ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ.
ಯೋಜನೆಗೆ ಅಧಿಕ ವೆಚ್ಚ
ಮಹಾರಾಷ್ಟ್ರದಲ್ಲಿ ಕಾಂಗ್ರೆಸ್-ಎನ್ಸಿಪಿ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಅಜಿತ್ ಪವಾರ್ ನೀರಾವರಿ ಸಚಿವರಾಗಿದ್ದರು. ತಮ್ಮ ಇಲಾಖೆಯ ಮೂಲಕ ನಡೆದ ಅನೇಕ ನೀರಾವರಿ ಯೋಜನೆಗಳಲ್ಲಿ ಅಜಿತ್ ಪವಾರ್ ಭಾರಿ ಅಕ್ರಮಗಳಿಗೆ ಕಾರಣರಾಗಿದ್ದರು. ಯೋಜನೆಯ ನೈಜ ವೆಚ್ಚಕ್ಕಿಂತಲೂ ಅಧಿಕ ವೆಚ್ಚದಲ್ಲಿ ಯೋಜನೆಗಳನ್ನು ನಡೆಸಿದ್ದರು ಎಂದು ಆರೋಪಿಸಲಾಗಿತ್ತು.
ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು: 1989ರ ಅಜಿತ್, ಮುಲಾಯಂ ನೆನಪಾದ್ರು
3,000ಕ್ಕೂ ಅಧಿಕ ಯೋಜನೆಗಳ ತನಿಖೆ
ನೀರಾವರಿ ಹಗರಣದ ತನಿಖೆ ನಡೆಸುತ್ತಿರುವ ಎಸಿಬಿ, ಅಜಿತ್ ಪವಾರ್ ಅವರಿಗೆ ಕ್ಲೀನ್ ಚಿಟ್ ನೀಡಿದೆ ಎಂದು ವರದಿಯಾಗಿತ್ತು. ಆದರೆ ಸತ್ಯಗಳನ್ನು ತಪ್ಪಾಗಿ ಬಿಂಬಿಸಿರುವುದರಿಂದ ಈ ಸುದ್ದಿ ಹರಡಿದೆ ಎಂದು ಎಸಿಬಿ ಸ್ಪಷ್ಟನೆ ನೀಡಿದೆ. ಅಜಿತ್ ಪವಾರ್ ಅವರು ನೀರಾವರಿ ಸಚಿವರಾಗಿದ್ದ ಸಂದರ್ಭದಲ್ಲಿನ 3,000ಕ್ಕೂ ಅಧಿಕ ವಿವಿಧ ನೀರಾವರಿ ಯೋಜನೆಗಳ ಕುರಿತು ತನಿಖೆ ನಡೆಯುತ್ತಿದೆ. ತನಿಖೆ ಕೈಬಿಡಲಾಗಿರುವ ಈ ಒಂಬತ್ತು ಪ್ರಕರಣಗಳಲ್ಲಿ ಅಜಿತ್ ಪವಾರ್ ಭಾಗಿಯಾಗಿರಲಿಲ್ಲ ಎಂದು ಎಸಿಬಿ ತಿಳಿಸಿದೆ.
ನ್ಯಾಯಾಲಯಕ್ಕೆ ಎಸಿಬಿ ಟಿಪ್ಪಣಿ
ಈ 9 ಪ್ರಕರಣಗಳಲ್ಲಿ ಅಜಿತ್ ಪವಾರ್ ವಿರುದ್ಧದ ಆರೋಪಗಳಿಗೆ ಯಾವುದೇ ಸೂಕ್ತ ಸಾಕ್ಷ್ಯಗಳಿಲ್ಲ. ಹೀಗಾಗಿ ಅವರಿಗೆ ಕ್ಲೀನ್ ಚಿಟ್ ನೀಡಲಾಗಿದೆ ಎಂದು ತಪ್ಪಾಗಿ ಚಿತ್ರಿಸಲಾಗುತ್ತಿದೆ ಎಂಬುದನ್ನು ಎಸಿಬಿಯು ಮಹಾರಾಷ್ಟ್ರ ನೀರಾವರಿ ಹಗರಣದ ಕುರಿತು ನ್ಯಾಯಾಲಯಕ್ಕೆ ನೀಡಲು ಸಿದ್ಧಪಡಿಸುತ್ತಿರುವ ವರದಿಯಲ್ಲಿ ಹೇಳಲು ಟಿಪ್ಪಣಿ ಸಿದ್ಧಪಡಿಸಿದೆ ಎಂದು ಮೂಲಗಳು ಹೇಳಿವೆ. ಉಳಿದ ಯೋಜನೆಗಳಲ್ಲಿನ ಆರೋಪಗಳಲ್ಲಿ ಪವಾರ್ ಪಾತ್ರದ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹೇಳಲಾಗಿದೆ.