ಕೃಷಿ ಕಾನೂನು ರದ್ದು: ದು:ಖದ ವಿಷಯವೆಂದ ಕಂಗನಾ ರಣಾವತ್
ನವದೆಹಲಿ, ನವೆಂಬರ್ 19: ಪ್ರತೀ ಬಾರಿ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಚರ್ಚೆಯಲ್ಲಿರುವ ನಟಿ ಕಂಗನಾ ರಣಾವತ್ ಇಂದು ಕೇಂದ್ರ ಸರ್ಕಾರ ವಿವಾದಿತ ಕೃಷಿ ಕಾನೂನುಗಳ ರದ್ದು ಮಾಡಿದ್ದಕ್ಕೆ ನಿರಾಶೆ ವ್ಯಕ್ತಪಡಿಸಿದ್ದಾರೆ. ಇದರಿಂದ ಕಂಗನಾ ಮತ್ತಷ್ಟು ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೂತನವಾಗಿ ಜಾರಿಗೆ ತರಲಾಗಿರುವ ಮೂರು ಕೃಷಿ ಕಾನೂನುಗಳನ್ನು ವಾಪಸ್ ಪಡೆಯುವುದಾಗಿ ಇಂದು ಘೋಷಿಸಿದ್ದಾರೆ. ಆದರೆ ಇದಕ್ಕೆ ವಿವಾದಾತ್ಮಕ ಬಾಲಿವುಡ್ ನಟಿ ಕಂಗನಾ ರಣಾವತ್ ನಿರಾಸೆ ವ್ಯಕ್ತಪಡಿಸಿದ್ದಾರೆ.
ಗುರುನಾನಕ್ ಜಯಂತಿಯಾದ ಇಂದು ಪ್ರಧಾನಿ ಮೋದಿ ವಿವಾದಿತ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯುವ ಮಹತ್ವದ ನಿರ್ಧಾರ ಕೈಗೊಂಡಿರುವುದಾಗಿ ಘೋಷಿಸಿದರು. ನವೆಂಬರ್ 29 ರಿಂದ ಪ್ರಾರಂಭವಾಗುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವ ಸಾಂವಿಧಾನಿಕ ಔಪಚಾರಿಕತೆಗಳನ್ನು ಮಾಡಲಾಗುತ್ತದೆ ಎಂದು ಪ್ರಧಾನಿ ಶುಕ್ರವಾರ ಹೇಳಿದರು. ಈ ನಿರ್ಧಾರದ ಬಗ್ಗೆ ಹಲವಾರು ಪಕ್ಷದ ನಾಯಕರು ಶ್ಲಾಘನೆ ವ್ಯಕ್ತಪಡಿಸಿದ್ದು ವಿಪಕ್ಷ ನಾಯಕರು ಇದನ್ನು ಸ್ವಾಗತಿಸಿದ್ದಾರೆ. ಜೊತೆಗೆ ಅನೇಕ ಬಾಲಿವುಡ್ ಸ್ಟಾರ್ ನಟ ನಟಿಯರು ಮೋದಿ ಕ್ರಮಕ್ಕೆ ಧನ್ಯವಾದ ತಿಳಿಸಿದ್ದಾರೆ. ಆದರೆ ಕಂಗನಾ ರಣಾವತ್ ಈ ಬಗ್ಗೆ ನಿರಾಶೆ ವ್ಯಕ್ತಪಡಿಸಿದ್ದಾರೆಂದು ಅವರು ಪೋಸ್ಟ್ ಮಾಡಿದ್ದಾರೆಂದು ತೋರುವ ಸ್ಕ್ರೀನ್ ಶಾಟ್ ಹಂಚಿಕೊಳ್ಳಲಾಗಿದೆ.
ಮೋದಿಯವರ ನಿರ್ಧಾರಕ್ಕೆ ತಾಪ್ಸಿ ಪನ್ನು, ರಿಚಾ ಚಡ್ಡಾ, ಹಿಮಾಂಶಿ ಖುರಾನಾ, ಸೋನು ಸೂದ್ ಸೇರಿದಂತೆ ಬಾಲಿವುಡ್ ಸೆಲೆಬ್ರಿಟಿಗಳು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಜೊತೆಗೆ ಮೂರು ವಿವಾದಾಸ್ಪದ ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಪ್ರಧಾನಿ ಮೋದಿಯವರ ನಿರ್ಧಾರದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಆದರೆ ನಟಿ ಕಂಗನಾ ರಣಾವತ್ ತಮ್ಮ ನಿರಾಶೆಯನ್ನು ವ್ಯಕ್ತಪಡಿಸಿದ್ದಾರೆ. ಅವರು ಶುಕ್ರವಾರ ತಮ್ಮ ಸಾಮಾಜಿಕ ಹ್ಯಾಂಡಲ್ನಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡು ಮತ್ತೆ ಟೀಕೆಗೆ ಗುರಿಯಾಗಿದ್ದಾರೆ.
"ದುಃಖಕರ, ನಾಚಿಕೆಗೇಡಿನ, ಸಂಪೂರ್ಣ ಅನ್ಯಾಯ. ಬೀದಿಗಿಳಿದ ಜನರು ಕಾನೂನುಗಳನ್ನು ಮಾಡಲು ಪ್ರಾರಂಭಿಸಿದರೆ ಸಂಸತ್ತಿನಲ್ಲಿ ಆಯ್ಕೆಯಾದ ಸರ್ಕಾರ ಯಾಕೆ. ಆಗ ಇದು ಕೂಡ ಜಿಹಾದಿ ರಾಷ್ಟ್ರವಾಗಿದೆ. ಇದನ್ನು ಬಯಸಿದ ಎಲ್ಲರಿಗೂ ಅಭಿನಂದನೆಗಳು" ಕಂಗನಾ ಬರೆದಿದ್ದಾರೆನ್ನುವ ಸ್ಕ್ರೀನ್ ಶಾಟ್ ವೈರಲ್ ಆಗಿದೆ.
ವಿವಾದಿತ ಕೃಷಿ ಕಾನೂನುಗಳ ವಿರುದ್ಧ ಹಲವು ರಾಜ್ಯಗಳಿಂದ ಬಂದು ದೆಹಲಿ ಗಡಿ ಭಾಗದಲ್ಲಿ ಒಂದು ವರ್ಷದಿಂದ ಪ್ರತಿಭಟನೆ ನಡೆಸುತ್ತಿರುವ ರೈತರ ಪಟ್ಟುಬಿಡದ ಬೇಡಿಕೆಯನ್ನು ಇಂದು ಕೇಂದ್ರ ಸರ್ಕಾರ ಈಡೇರಿಸಿದೆ. ತಮ್ಮ ಸರಕಾರವು ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಘೋಷಿಸಿದರು. ಸಿಖ್ ಧರ್ಮದ ಸಂಸ್ಥಾಪಕ ಗುರುನಾನಕ್ ಅವರ ಜನ್ಮದಿನದ ಸಂದರ್ಭದಲ್ಲಿ ದೇಶವನ್ನುದ್ದೇಶಿಸಿ ದೂರದರ್ಶನದ ಭಾಷಣದಲ್ಲಿ ಘೋಷಣೆ ಮಾಡಿದ ಮೋದಿ, ಈ ಸುಧಾರಣಾ ಕ್ರಮಗಳ ವಿರುದ್ಧದ ತಮ್ಮ ಆಂದೋಲನವನ್ನು ಕೈಬಿಡಿ ಎಂದು ಹೊಸ ಆರಂಭಕ್ಕೆ ಕರೆ ನೀಡಿ ಪ್ರತಿಭಟನಾ ನಿರತ ರೈತರಲ್ಲಿ ಮನವಿ ಮಾಡಿದರು. ಇಡೀ ದೇಶವೇ ಇದು ರೈತರಿಗೆ ಸಂದ ಜಯ ಎಂದು ಹೇಳುತ್ತಿರುವಾಗ ವಿವಾದಿತ ನಟಿ ಕಂಗನಾ ದು:ಖಕರ ಎಂದು ಬರೆದಿದ್ದಾರೆ.
ಈ ಹಿಂದೆ "1947 ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿರುವುದು ಭಿಕ್ಷೆ [ಭಿಕ್]' ಎಂದು ಹೇಳುವ ಮೂಲಕ ವಿವಾದವನ್ನು ಹುಟ್ಟುಹಾಕಿದ ನಟಿ ಕಂಗನಾ ರನೌತ್ ಇನ್ಸ್ಟಾಗ್ರಾಂನಲ್ಲಿನ ಪೋಸ್ಟ್ನಲ್ಲಿ ಸರಣಿಯಲ್ಲಿ ಮಹಾತ್ಮ ಗಾಂಧಿಯನ್ನು ಗುರಿಯಾಗಿಟ್ಟುಕೊಂಡು ಒಂದು ಕೆನ್ನೆಗೆ ಹೊಡೆದರೆ ಮತ್ತೊಂದು ಕೆನ್ನೆ ತೋರಿಸಿದವರಿಂದ ಸ್ವಾತಂತ್ರ್ಯ ಬಂದಿರಲು ಸಾಧ್ಯವಿಲ್ಲ. ಅಂಥವರಿಂದ ಭಿಕ್ಷೆ ಮಾತ್ರ ಸಿಗುತ್ತದೆ. ಹೀಗಾಗಿ ನಿಮ್ಮ ನಾಯಕರನ್ನು ಬುದ್ಧಿವಂತಿಕೆಯಿಂದ ಆರಿಸಿಕೊಳ್ಳಿ" ಎಂದು ಕಂಗನಾ ತಮ್ಮ ಸರಣಿ ಇನ್ಸ್ಟಾಗ್ರಾಂ ಪೋಸ್ಟ್ನಲ್ಲಿ ಹೇಳಿದ್ದರು. ಈ ಹೇಳಿಕೆ ಭಾರೀ ವಿವಾದವನ್ನು ಸೃಷ್ಟಿ ಮಾಡಿತ್ತು.
ಇದಕ್ಕೂ ಮುಂಚೆ ಕಂಗನಾ 1947 ರಲ್ಲಿ ಭಾರತಕ್ಕೆ ನಿಜವಾದ ಸ್ವಾತಂತ್ರ್ಯ ಸಿಕ್ಕಿಲ್ಲ. ಬದಲಿಗೆ 2014 ರಲ್ಲಿ ನಿಜವಾದ ಸ್ವಾತಂತ್ರ್ಯ ಸಿಕ್ಕಿದೆ ಎಂದಿದ್ದರು. ಇದು ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರ ಧೈರ್ಯ ಮತ್ತು ತ್ಯಾಗವನ್ನು ಅವಮಾನಿಸಿದ್ದು, ಹಲವರು ವಿರೋಧ ಕೂಡ ವ್ಯಕ್ತಿಪಡಿಸಿದರು. ಕಂಗನಾ ಅವರಿಗೆ ನೀಡಿದ ಪದ್ಮಶ್ರೀ ಪ್ರಶಸ್ತಿಯನ್ನು ಹಿಂಪಡೆಯುವಂತೆ ಒತ್ತಾಯಿಸಲಾಯಿತು. ಜೊತೆಗೆ ವಿವಾದಾತ್ಮಕ ಹೇಳಿಕೆ ವಿರುದ್ಧ ತುಷಾರ್ ಗಾಂಧಿ ಕಂಗನಾಗೆ ತಿರುಗೇಟು ನೀಡಿದ್ದರು.