ವೋಟರ್ ಐಡಿ ಜೊತೆ ಆಧಾರ್ ಲಿಂಕ್: ಮಹಾರಾಷ್ಟ್ರದಲ್ಲಿ ಆಗಸ್ಟ್ 1ರಿಂದಲೇ ಚಾಲನೆ
ಮುಂಬೈ, ಜುಲೈ 26: ಚುನಾವಣಾ ಕಾನೂನು ತಿದ್ದುಪಡಿ ಕಾಯ್ದೆ ಕುರಿತು ಇನ್ನೂ ಪರ-ವಿರೋಧ ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲೇ, ಆಗಸ್ಟ್ 1 ರಿಂದ ಮತದಾರರ ಗುರುತಿನ ಚೀಟಿಯನ್ನು ಆಧಾರ್ ಕಾರ್ಡ್ಗೆ ಲಿಂಕ್ ಮಾಡುವ ಅಭಿಯಾನವನ್ನು ಮಹಾರಾಷ್ಟ್ರದಲ್ಲಿ ಅಧಿಕಾರಿಗಳು ಘೋಷಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಹಾರಾಷ್ಟ್ರ ಮುಖ್ಯ ಚುನಾವಣಾ ಅಧಿಕಾರಿ ಶ್ರೀಕಾಂತ್ ದೇಶಪಾಂಡೆ ಈ ಮಹತ್ವದ ಘೋಷಣೆ ಮಾಡಿದರು. ಮತದಾರರ ಗುರುತನ್ನು ಸ್ಥಾಪಿಸುವ ಮತ್ತು ಮತದಾರರ ಪಟ್ಟಿಯಲ್ಲಿ ನಮೂದಾಗುವ ದೃಢೀಕರಣದ ಗುರಿಯನ್ನು ಈ ಕ್ರಮವು ಹೊಂದಿದೆ.
Breaking:ಚುನಾವಣಾ ಆಯೋಗದ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ ಉದ್ಧವ್ ಬಣ
"ಮತದಾರರ ಗುರುತನ್ನು ಸ್ಥಾಪಿಸಲು ಮತ್ತು ಮತದಾರರ ಪಟ್ಟಿಯಲ್ಲಿನ ನಮೂದುಗಳ ದೃಢೀಕರಣ ಮಾಡಲು ಮತ್ತು ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಅಥವಾ ಒಂದೇ ಕ್ಷೇತ್ರದಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಒಂದೇ ವ್ಯಕ್ತಿಯ ಹೆಸರನ್ನು ನೋಂದಾಯಿಸಿದ್ದವರನ್ನು ಕಂಡು ಹಿಡಿಯಲು ಮತದಾರರ ಗುರುತಿನ ಚೀಟಿಗಳನ್ನು ಆಧಾರ್ ಕಾರ್ಡ್ಗೆ ಲಿಂಕ್ ಮಾಡಬೇಕು." ಅವರು ಹೇಳಿದರು. ಅಭಿಯಾನವು ಆಗಸ್ಟ್ 1 ರಿಂದ ಮಹಾರಾಷ್ಟ್ರದಾದ್ಯಂತ ಪ್ರಾರಂಭವಾಗಲಿದೆ.
ಲೋಕಸಭೆಯಲ್ಲಿ ಮಸೂದೆ ಅಂಗೀಕಾರ
ಮತದಾರರ ಗುರುತಿನ ಚೀಟಿಗಳೊಂದಿಗೆ ಆಧಾರ್ ಲಿಂಕ್ ಮಾಡಲು ಅಧಿಕಾರ ನೀಡುವ ಚುನಾವಣಾ ಕಾನೂನುಗಳ ತಿದ್ದುಪಡಿ ಮಸೂದೆಯನ್ನು ಲೋಕಸಭೆಯು ಡಿಸೆಂಬರ್ 2021 ರಲ್ಲಿ ಧ್ವನಿ ಮತದ ಮೂಲಕ ಅಂಗೀಕರಿಸಿತು.
ಆದರೆ ಇದಕ್ಕೆ ವಿಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದವು. ನಿರ್ಣಯದೊಂದಿಗೆ ಅದನ್ನು ಸೆಲೆಕ್ಟ್ ಕಮಿಟಿಗೆ ಕಳುಸಿಬೇಕೆಂದು ಒತ್ತಾಯಿಸಿದರು. ಆದರೆ ಅದಕ್ಕೆ ಧ್ವನಿಮತದಲ್ಲಿ ಸೋಲಾಗಿತ್ತು. ಕಾಂಗ್ರೆಸ್, ಟಿಎಂಸಿ, ಡಿಎಂಕೆ ಮತ್ತು ಎನ್ ಸಿಪಿ ಮತ್ತಿತರ ಪ್ರತಿಪಕ್ಷಗಳ ಸದಸ್ಯರು ಸದನದಿಂದ ನಿರ್ಗಮಿಸಿದ್ದರು.ಆದರೆ, ಬಿಜೆಪಿ, ಜೆಡಿಯು, ವೈಎಸ್ ಆರ್ ಸಿಪಿ, ಎಐಎಡಿಎಂಕೆ, ಬಿಜೆಡಿ ಮತ್ತು ಟಿಎಂಸಿ-ಎಂ, ಮಸೂದೆಯನ್ನು ಬೆಂಬಲಿಸಿತ್ತು.
ಕೇಂದ್ರದ ಕ್ರಮಕ್ಕೆ ಕಾಂಗ್ರೆಸ್ ವಿರೋಧ
ಈ ಎರಡು ಕಾರ್ಡ್ಗಳನ್ನು ಲಿಂಕ್ ಮಾಡುವುದು ತರ್ಕಬದ್ಧವಲ್ಲ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ ಹೇಳಿದ್ದಾರೆ. ಈ ಕ್ರಮದಿಂದ ನಾಗರಿಕರ ಖಾಸಗಿತನದ ಮೂಲಭೂತ ಹಕ್ಕನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ಅವರು ಆರೋಪಿಸಿದ್ದಾರೆ. ಇದು ಸಂವಿಧಾನ ಬಾಹಿರ ಎಂದು ಅವರು ಹೇಳಿದ್ದಾರೆ.
ದೋಷಪೂರಿತ ತಿದ್ದುಪಡಿಯು ಎರಡು ವಿಭಿನ್ನ ದಾಖಲೆಗಳನ್ನು ಲಿಂಕ್ ಮಾಡಲು ಉದ್ದೇಶಿಸಿದೆ, ಆಧಾರ್ ಕಾರ್ಡ್ ನಿವಾಸದ ಪುರಾವೆಯಾಗಿದೆ ಮತ್ತು ಎಪಿಕ್ (EPIC) ವೋಟರ್ ಐಡಿ ಪೌರತ್ವದ ಪುರಾವೆಯಾಗಿದೆ ಎಂದು ಅವರು ಹೇಳಿದರು.
ಚುನಾವಣಾ ಕಾನೂನು ತಿದ್ದುಪಡಿ ಕಾಯಿದೆ, 2021 ರ ಸೆಕ್ಷನ್ 4 ಮತ್ತು ಸೆಕ್ಷನ್ 5 ನಾಗರಿಕರ ಖಾಸಗಿತನದ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತದೆ ಮತ್ತು ಆದ್ದರಿಂದ ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ಹೇಳಿದ್ದರು. ಸುಪ್ರೀಂಕೋರ್ಟ್ಗೆ ಈ ಕುರಿತು ಮನವಿ ಸಲ್ಲಿಸಿದ್ದರು.
ಹೈಕೋರ್ಟ್ಗೆ ಮನವಿ ಸಲ್ಲಿಸಿ ಎಂದ ಸುಪ್ರೀಂಕೋರ್ಟ್
ಇದನ್ನು ಪ್ರಶ್ನೆ ಮಾಡಿ ಸುಪ್ರೀಂಕೋರ್ಟ್ ಮೇಟ್ಟಿಲೇರಿದ್ದ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ ಅವರಿಗೆ ದೆಹಲಿ ಹೈಕೋರ್ಟ್ ಮನವಿ ಸಲ್ಲಿಸುವಂತೆ ಸರ್ವೋಚ್ಛ ನ್ಯಾಯಾಲಯ ಸೂಚನೆ ನೀಡಿದೆ.
ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಹಾಗೂ ಎ.ಎಸ್ ಬೋಪಣ್ಣ ಅವರಿದ್ದ ಪೀಠ ಈ ಮಹತ್ವದ ನಿರ್ದೇಶನ ನೀಡಿದೆ. ಮಾತ್ರವಲ್ಲದೆ ಈ ಮೊದಲು ಯಾಕೆ ಹೈಕೋರ್ಟ್ಗೆ ಮನವಿ ಸಲ್ಲಿಸಿಲ್ಲ ಎಂದು ಪ್ರಶ್ನಿಸಿದೆ. ಕಾನೂನಿನಲ್ಲಿ ಲಭ್ಯವಿರುವ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಹೈಕೋರ್ಟ್ಗೆ ಅರ್ಜಿ ಸಲ್ಲಿಸಲು ನಾವು ಅರ್ಜಿದಾರರಿಗೆ ಸ್ವಾತಂತ್ಯ್ರ ನೀಡುತ್ತೇವೆ ಎಂದು ಪೀಠ ಹೇಳಿದೆ.ಅಕ್ರಮ ತಡೆಗೆ ಪ್ರಯೋಜನಕಾರಿ ಎಂದು ವಾದ
ಭಾರತದ ನಾಗರಿಕರ ಎಲ್ಲಾ ವಿವರಗಳು ಒಂದೇ ಕಡೆ ಒಟ್ಟಾಗುವುದರಿಂದ ಇದರಿಂದ ಸರ್ಕಾರದ ಸೌಲಭ್ಯಪಡೆಯಲು ಅನುಕೂಲವಾಗಲಿದೆ ಎಂದು ಹೇಳಲಾಗುತ್ತಿದೆ. ಮಾತ್ರವಲ್ಲದೆ ಚುನಾವಣಾ ಅಕ್ರಮಗಳನ್ನು ತಡೆಯಲು ಇದು ಪರಿಣಾಮಕಾರಿ ಎಂದು ಚುನಾವಣಾ ಆಯೋಗ ತಿಳಿಸಿದೆ.
ನಕಲಿ ಮತಪತ್ರಗಳು, ಒಂದೇ ಕ್ಷೇತ್ರದಲ್ಲಿ ಒಂದಕ್ಕಿಂತ ಎರಡು ವೋಟರ್ ಐಡಿ, ಅಥವಾ ಬೇರೆ ಬೇರೆ ಕ್ಷೇತ್ರಗಳಲ್ಲಿ ಒಬ್ಬನೇ ವ್ಯಕ್ತಿ ವೋಟರ್ ಐಡಿ ಹೊಂದಿರುವುದನ್ನು ತಪ್ಪಿಸಲು ಆಧಾರ್ ಜೊತೆ ಮತದಾರರ ಗುರುತಿನ ಚೀಟಿ ಲಿಂಕ್ ಮಾಡಲಾಗುತ್ತಿದೆ ಎಂದು ಅದು ತಿಳಿಸಿದೆ.