ಮುಂಬೈ: ಶೇ.86ರಷ್ಟು ಮಂದಿಯಲ್ಲಿ ಕೋವಿಡ್ 19 ಪ್ರತಿಕಾಯ ಪತ್ತೆ
ಮುಂಬೈ, ಸೆಪ್ಟೆಂಬರ್ 18: ಮುಂಬೈನಲ್ಲಿ ಶೇ.86.64ರಷ್ಟು ಮಂದಿಯಲ್ಲಿ ಕೋವಿಡ್ ವಿರುದ್ಧ ಹೋರಾಡುವ ಪ್ರತಿಕಾಯಗಳು ಪತ್ತೆಯಾಗಿವೆ ಎಂಬ ಮಾಹಿತಿಯನ್ನು ಸೆರೋ ಸಮೀಕ್ಷೆ ನೀಡಿದೆ.
ಸ್ಲಮ್ ಗಳಲ್ಲಿ ಸೆರೋ ಪ್ರಿವೇಲೆನ್ಸ್ (ಪ್ರತಿಕಾಯಗಳ ಇರುವಿಕೆ) ಶೇ.87.02 ರಷ್ಟಿದ್ದು, ಬೇರೆ ಪ್ರದೇಶಗಳಲ್ಲಿ ಶೇ.86.22 ರಷ್ಟಿದೆ ಎಂದು ಅಂಕಿ-ಅಂಶಗಳಿಂದ ತಿಳಿದುಬಂದಿದೆ.
ರಾಜ್ಯದ 60% ಜನರು ಕೊರೊನಾ ವಿರುದ್ಧ ಪ್ರತಿಕಾಯ ಹೊಂದಿದ್ದಾರೆ ಎಂದ ಸೆರೊ ಸರ್ವೇ
ಕಳೆದ ಸಮೀಕ್ಷೆಗೆ ಹೋಲಿಕೆ ಮಾಡಿದರೆ ಈ ಬಾರಿ ಗ್ರೇಟರ್ ಮುಂಬೈ ನಗರದ ಸ್ಲಮ್ ಹಾಗೂ ಇತರ ಪ್ರದೇಶಗಳಲ್ಲಿ ಪ್ರತಿಕಾಯಗಳು ಹೆಚ್ಚಾಗಿದ್ದರೆ ಮುಂಬೈ ಐಲ್ಯಾಂಡ್ ಸಿಟಿ ಹಾಗೂ ಉಪನಗರಗಳಲ್ಲಿ ಮಹತ್ವದ ಬೆಳವಣಿಗೆಗಳು ಇಲ್ಲ ಎಂದು ಬಿಎಂಸಿ ಮಾಹಿತಿ ನೀಡಿದೆ.
ಭಾಗಶಃ ಅಥವಾ ಪೂರ್ಣ ಪ್ರಮಾಣದಲ್ಲಿ ಲಸಿಕೆ ಪಡೆದವರ ಪೈಕಿ ಶೇ.90.26 ರಷ್ಟು ಪ್ರತಿಕಾಯಗಳಿದ್ದರೆ, ಲಸಿಕೆ ಪಡೆಯದೇ ಇರುವ ಪ್ರದೇಶಗಳಲ್ಲಿ ಪ್ರತಿಕಾಯಗಳಿವೆ. ಮಹಿಳೆಯರಲ್ಲಿ ಶೇ.88.29 ರಷ್ಟು ಪ್ರತಿಕಾಯಗಳಿದ್ದರೆ, ಪುರುಷರಲ್ಲಿ ಶೇ.85.07 ರಷ್ಟು ಪ್ರತಿಕಾಯಗಳು ಪತ್ತೆಯಾಗಿವೆ. ಸಮೀಕ್ಷೆಗೊಳಪಟ್ಟ 8,674 ಮಾದರಿಗಳಲ್ಲಿ ಶೇ.20 ರಷ್ಟು ಮಂದಿ ಆರೋಗ್ಯ ಕಾರ್ಯಕರ್ತರಿದ್ದಾರೆ.
ಈ ಬಗ್ಗೆ ಬೃಹತ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಈ ಅಂಕಿ-ಅಂಶಗಳನ್ನು ನೀಡಿದ್ದು, ಸಾಂಕ್ರಾಮಿಕ ಪ್ರಾರಂಭವಾದಾಗಿನಿಂದ 5 ನೇ ಬಾರಿಗೆ ನಡೆದಿರುವ ಸೆರೋ ಸಮೀಕ್ಷೆ ಇದಾಗಿದ್ದು, ಆ.12 ಹಾಗೂ ಸೆ.09 ರ ನಡುವೆ ನಡೆಸಲಾಗಿದೆ.
ದೇಶ ಇದೀಗ ಕೊರೊನಾ ಮೂರನೇ ಅಲೆಯ ಪ್ರಾರಂಭದಲ್ಲಿದೆ. ಹಾಗಂತ ಈ ಅಲೆ ಮಕ್ಕಳ ಮೇಲೆ ಯಾವುದೇ ದೊಡ್ಡ ಪರಿಣಾಮ ಬೀರುವುದಿಲ್ಲ ಎಂದು ಚಂಡಿಗಢ್ನ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನೆಯ ಸ್ನಾತಕೋತ್ತರ ಸಂಸ್ಥೆಯ ನಿರ್ದೇಶಕ ಡಾ. ಜಗತ್ ರಾಮ್ ಹೇಳಿದ್ದಾರೆ. ಅನೇಕ ಮಕ್ಕಳಲ್ಲಿ ಈಗಾಗಲೇ ಪ್ರತಿಕಾಯಗಳು ಉತ್ಪತ್ತಿಯಾಗಿವೆ. ಹಾಗಾಗಿ ಮೂರನೇ ಅಲೆ ಮಕ್ಕಳಿಗೆ ಮಾರಣಾಂತಿಕವಾಗಿ ಪರಿಣಮಿಸುವುದಿಲ್ಲ ಎಂದಿದ್ದಾರೆ.
ಪಿಜಿಐಎಂಇಆರ್ನಿಂದ ಸರ್ವೇ ನಡೆಸಲಾಗಿತ್ತು. ಚಂಡಿಗಢದಲ್ಲಿ ಸುಮಾರು 2700 ಮಕ್ಕಳನ್ನು ಸರ್ವೇಯಲ್ಲಿ ಒಳಗೊಳ್ಳಲಾಗಿತ್ತು. ಈ ವೇಳೆ ಶೇ.71ರಷ್ಟು ಮಕ್ಕಳಲ್ಲಿ ಆ್ಯಂಟಿಬಾಡಿ ಅಭಿವೃದ್ಧಿಯಾಗಿದ್ದು ಕಂಡುಬಂದಿದೆ.
ಹಾಗಾಗಿ ಮಕ್ಕಳು ಮೂರನೇ ಅಲೆಯಿಂದ ತೀವ್ರವಾಗಿ ಬಾಧಿತರಾಗುವುದಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಜಗತ್ ರಾಮ್ ತಿಳಿಸಿದ್ದಾರೆ. ಬರೀ ಚಂಡಿಗಢದಲ್ಲಿ ಮಾತ್ರವಲ್ಲ, ಮಹಾರಾಷ್ಟ್ರ ಮತ್ತು ದೆಹಲಿಯಲ್ಲೂ ಸರ್ವೇ ಮಾಡಲಾಗಿತ್ತು. ಅಲ್ಲೂ ಸಹ ಶೇ.50-75ರಷ್ಟು ಮಕ್ಕಳಲ್ಲಿ ಪ್ರತಿಕಾಯ ಉತ್ಪತ್ತಿಯಾಗಿದ್ದು ಕಂಡುಬಂದಿದೆ ಎಂದೂ ತಿಳಿಸಿದ್ದಾರೆ.
ಇನ್ನು ಕೊರೊನಾ ಮೂರನೇ ಅಲೆ ಬಗ್ಗೆ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಪ್ರಾಣಿಶಾಸ್ತ್ರ ವಿಭಾಗದ ಏಜೆನೆಟಿಸ್ಟ್, ಪ್ರೊಫೆಸರ್ ಜ್ಞಾನೇಶ್ವರ್ ಚೌಬೆ ಕೂಡ ಬಹುತೇಕ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೊರೊನಾ ವೈರಸ್ ಮೂರನೇ ಅಲೆ ಮಾರಣಾಂತಿಕವಲ್ಲ ಎಂದಿದ್ದಾರೆ.
ಕೊರೊನಾ ಲಸಿಕೆ ಪಡೆದವರು ಮತ್ತು ಈಗಾಗಲೇ ಒಮ್ಮೆ ಕೊವಿಡ್ 19ಸೋಂಕಿಗೆ ಒಳಗಾಗಿ ಗುಣಮುಖರಾದವರು ಮೂರನೇ ಅಲೆಯಿಂದ ಅಷ್ಟೊಂದು ಬಾಧಿತರಾಗುವುದಿಲ್ಲ ಎಂದು ಹೇಳಿದ್ದಾರೆ.
ಸದ್ಯಕ್ಕಂತೂ ಮಕ್ಕಳಿಗೆ ಒಂದೂ ಕೊರೊನಾ ಲಸಿಕೆ ಇಲ್ಲ. ಹಾಗಿದ್ದಾಗ್ಯೂ ಕೊವಿಡ್ 19 ವಿರೋಧಿ ಪ್ರತಿಕಾಯ ಉತ್ಪತ್ತಿಯಾಗಿದೆ. ಈ ಹಿಂದೆ ಕೊರೊನಾ ವೈರಸ್ ಮೂರನೇ ಅಲೆ ಬಂದರೆ ಅದು ಮಕ್ಕಳಿಗೇ ಹೆಚ್ಚು ಬಾಧಿಸುತ್ತದೆ ಎಂದು ಹೇಳಲಾಗಿತ್ತು.
ಆದರೆ ಈ ಬೆಳವಣಿಗೆ ನೋಡಿದರೆ ನನಗಂತೂ ಹಾಗೆ ಅನ್ನಿಸುವುದಿಲ್ಲ ಎಂದಿದ್ದಾರೆ. ಇನ್ನು ಕೊರೊನಾ ಮೂರನೇ ಅಲೆ ಅಷ್ಟು ಬೇಗ ಉತ್ತುಂಗಕ್ಕೆ ಏರುವುದಿಲ್ಲ. ಹಾಗಂತ ನಾವು ನಿರ್ಲಕ್ಷ್ಯ ಮಾಡುವಂತಿಲ್ಲ. ಮಾಸ್ಕ್ಗಳನ್ನು ಕಡ್ಡಾಯವಾಗಿ ಧರಿಸಬೇಕು. ಎಲ್ಲ ಶಿಷ್ಟಾಚಾರಗಳನ್ನೂ ಸರಿಯಾಗಿ ಪಾಲಿಸಬೇಕು ಎಂದು ನಿರ್ದೇಶಕ ಡಾ. ರಾಮ್ ತಿಳಿಸಿದ್ದಾರೆ.