ನಾಗ್ಪುರ್ ಆಸ್ಪತ್ರೆಯಲ್ಲೇ ನೇಣಿಗೆ ಶರಣಾದ ಕೊವಿಡ್-19 ಸೋಂಕಿತ!
ಮುಂಬೈ, ಮಾರ್ಚ್ 30: ಮಹಾರಾಷ್ಟ್ರದ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹಾವಳಿ ದಿನೇದಿನೆ ಹೆಚ್ಚುತ್ತಿದೆ. ಇದರ ಮಧ್ಯೆ ನಾಗ್ಪುರ್ ಜಿಲ್ಲೆಯಲ್ಲಿ 81 ವರ್ಷದ ಕೊರೊನಾವೈರಸ್ ಸೋಂಕಿತ ರೋಗಿಯೊಬ್ಬರು ಸರ್ಕಾರಿ ಆಸ್ಪತ್ರೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಪುರುಷೋತ್ತಮ್ ಗಾಜ್ಭಿಯೆ ಎಂಬುವವರು ಕೊರೊನಾವೈರಸ್ ಸೋಂಕಿನಿಂದಾಗಿ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಕೊವಿಡ್-19 ವಾರ್ಡಿನಲ್ಲಿ ದಾಖಲಾಗಿದ್ದರು. ಸೋಮವಾರ ಆಸ್ಪತ್ರೆಯ ಶೌಚಾಲಯದಲ್ಲಿ ರೋಗಿಯು ಶವವಾಗಿ ಪತ್ತೆಯಾಗಿದ್ದಾರೆ ಎಂದು ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದಾರೆ.
ಕೊರೊನಾ ಏರಿಕೆ; ಕರ್ನಾಟಕದಲ್ಲಿ 15 ದಿನಗಳವರೆಗೆ ಪಾರ್ಟಿ, ಜಾಥಾಗೆಲ್ಲಾ ಬ್ರೇಕ್
ಸರ್ಕಾರಿ ಆಸ್ಪತ್ರೆಯಲ್ಲೇ ಆಕ್ಸಿಜನ್ ಪೈಪ್ ಬಳಸಿಕೊಂಡು ರೋಗಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಾವಿಗೆ ನಿಜವಾದ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಪೊಲೀಸ್ ಇನ್ಸ್ ಪೆಕ್ಟರ್ ವಿನೋದ್ ಚೌಧರಿ ತಿಳಿಸಿದ್ದಾರೆ.
ನಾಗ್ಪುರ್ ಜಿಲ್ಲೆಯಲ್ಲೇ 3177 ಮಂದಿಗೆ ಸೋಂಕು:
ಮಹಾರಾಷ್ಟ್ರದ ನಾಗ್ಪುರ್ ಜಿಲ್ಲೆಯೊಂದರಲ್ಲೇ ಕಳೆದ 24 ಗಂಟೆಗಳಲ್ಲಿ 3177 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದ್ದು, ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 2,21,997ಕ್ಕೆ ಏರಿಕೆಯಾಗಿದೆ. ಒಂದು ದಿನದಲ್ಲಿ 55 ಮಂದಿ ಪ್ರಾಣ ಬಿಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 4986ಕ್ಕೆ ಏರಿಕೆಯಾಗಿದೆ. ಈ ಹಿನ್ನೆಲೆ ಮುನ್ನೆಚ್ಚರಿಕೆ ವಹಿಸಲಾಗಿದ್ದು, ಮಾರ್ಚ್ 28ರಿಂದ ಮುಂಬೈನಲ್ಲಿ ರಾತ್ರಿ ಕರ್ಫ್ಯೂ ಜಾರಿಗೊಳಿಸಲಾಗುವುದು.