ವಿಮಾನಯಾನ ಮಾರ್ಗ ಮಧ್ಯೆ ಬಾಲಕಿಗೆ ಹೃದಯಾಘಾತ; ತುರ್ತು ಭೂಸ್ಪರ್ಶದ ನಂತರ ಸಾವು
ನಾಗ್ಪುರ, ಜನವರಿ 20: ವೈದ್ಯಕೀಯ ಚಿಕಿತ್ಸೆಗೆಂದು ಲಖ್ನೋದಿಂದ ಮುಂಬೈಗೆ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದ ಎಂಟು ವರ್ಷದ ಬಾಲಕಿಗೆ ಹೃದಯಾಘಾತವಾಗಿದ್ದು, ತಕ್ಷಣವೇ ವಿಮಾನವನ್ನು ತುರ್ತು ಭೂ ಸ್ಪರ್ಶ ಮಾಡಿದ ಸಂಗತಿ ನಾಗ್ಪುರದಲ್ಲಿ ನಡೆದಿದೆ. ಆದರೆ ವಿಮಾನ ನಿಲ್ದಾಣದಿಂದ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಸಂದರ್ಭ ಬಾಲಕಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಉತ್ತರ ಪ್ರದೇಶದ ಸಾಹೆರಿಕಾ ಗ್ರಾಮ ನಿವಾಸಿಯಾಗಿರುವ ಬಾಲಕಿಯನ್ನು ಆಕೆಯ ಪೋಷಕರೊಂದಿಗೆ ಖಾಸಗಿ ವಿಮಾನದಲ್ಲಿ ಲಖ್ನೋದಿಂದ ಮುಂಬೈಗೆ ಚಿಕಿತ್ಸೆಗೆ ಕರೆದುಕೊಂಡು ಹೋಗಲಾಗುತ್ತಿತ್ತು. ಮಾರ್ಗ ಮಧ್ಯೆ ಬಾಲಕಿಯ ಆರೋಗ್ಯದಲ್ಲಿ ತೀವ್ರ ಏರುಪೇರಾಗಿದ್ದು, ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಲು ಸೂಚಿಸಲಾಗಿದೆ. ನಾಗ್ಪುರದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಇಳಿಸಲಾಗಿದ್ದು, ತಕ್ಷಣವೇ ಕಿಂಗ್ಸ್ ವೇ ಆಸ್ಪತ್ರೆಯ ವೈದ್ಯಕೀಯ ತಂಡ ಬಾಲಕಿಯ ನಿಗಾ ವಹಿಸಿದೆ.
ಮದುವೆ ಮನೆಯಲ್ಲಿ ನೃತ್ಯ ಮಾಡುತ್ತಿದ್ದಾಗ ಹೃದಯಾಘಾತ; ಮಹಿಳೆ ಸಾವು
ನಂತರ ಆಂಬುಲೆನ್ಸ್ ನಲ್ಲಿ ಸರ್ಕಾರಿ ವೈದ್ಯಕೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಅಷ್ಟರಲ್ಲೇ ಬಾಲಕಿ ಮೃತಪಟ್ಟಿದ್ದಾಳೆ.
ಬಾಲಕಿಗೆ ರಕ್ತಹೀನತೆ ಸಮಸ್ಯೆಯಿದ್ದು, ಈ ಬಗ್ಗೆ ಬಾಲಕಿ ಪೋಷಕರು ಯಾವುದೇ ಮಾಹಿತಿ ನೀಡಿರಲಿಲ್ಲ. ರಕ್ತದಲ್ಲಿ ಹೀಮೋಗ್ಲೋಬಿನ್ ಮಟ್ಟ 8 ಅಥವಾ 10 ಗ್ರಾಂ ಕೆಳಗಿದ್ದರೆ ಅಂಥವರಿಗೆ ವಿಮಾನದಲ್ಲಿ ಪ್ರಯಾಣಿಸಲು ಸೂಚಿಸುವುದಿಲ್ಲ. ಆದರೆ ಬಾಲಕಿಯಲ್ಲಿ 2.5 ಗ್ರಾಂ ಹೀಮೋಗ್ಲೋಬಿನ್ ಮಟ್ಟವಿತ್ತು. ಈ ವಿಷಯ ತಿಳಿದಿದ್ದರೆ ಬಾಲಕಿಗೆ ವಿಮಾನದಲ್ಲಿ ಪ್ರಯಾಣಿಸಲು ಅವಕಾಶ ನೀಡುತ್ತಿರಲಿಲ್ಲ. ಮೊದಲೇ ರೋಗಿಯಾಗಿದ್ದರಿಂದ ಬಾಲಕಿ ತೀವ್ರ ಅಸ್ವಸ್ಥಗೊಂಡಿದ್ದಳು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹೃದಯಾಘಾತ ಈ ಸಾವು ಸಂಭವಿಸಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಆದರೆ ಬಾಲಕಿಗೆ ಹೃದಯಾಘಾತ ಸಂಭವಿಸಿದ ಹಿಂದಿನ ವೈದ್ಯಕೀಯ ಕಾರಣಗಳ ಬಗ್ಗೆ ನಿಖರತೆ ದೊರೆತಿಲ್ಲ. ಸೋನೆಗಾವ್ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಎಂದು ಪ್ರಕರಣ ದಾಖಲಾಗಿದೆ.