ಮುಂಬೈ ಸರಣಿ ಸ್ಫೋಟದ, ಜುಲೈ 13ರ ಆ ಕರಾಳ ದಿನಕ್ಕೀಗ 7 ವರ್ಷ!
2011ರ ಜುಲೈ 13... ಬಹುಶಃ ಭಾರತದ ಯಾರೊಬ್ಬರಿಗೂ ಮರೆಯಲಾಗದ ದಿನ! ವಾಣಿಜ್ಯ ನಗರಿ ಮುಂಬೈ ಮೇಲೆ ಸರಣಿ ಬಾಂಬ್ ಸ್ಫೋಟವಾಗಿ 26 ಜನ ಜೀವ ಕಳೆದುಕೊಂಡ ದಿನ ಇದು. ಈ ದುರಂತ ಸಂಭವಿಸಿ ಇದೀಗ ಏಳು ವರ್ಷಗಳು ಕಳೆದಿವೆ.
ಮುಂಬೈಯ ಒಪೆರಾ ಹೌಸ್, ಜವೇರಿ ಬಜಾರ್, ದಾದರ್ ಗಳಲ್ಲಿ ಸಂಜೆ 6:54 ರಿಂದ 7:06 ಕೇವಲ 12 ನಿಮಿಷ ಸಂಭವಿಸಿದ ಸ್ಫೋಟ ಬಲಿತೆಗೆದುಕೊಂಡಿದ್ದು 26 ಅಮಾಯಕರ ಪ್ರಾಣಗಳನ್ನು. 130 ಜನ ಗಂಭೀರವಾಗಿ ಗಾಯಗೊಂಡು ಜೀವನ ಪರ್ಯಂತ ನೋವನುಭವಿಸುವ ಪರಿಸ್ಥಿತಿ ನಿರ್ಮಾಣವಾಯಿತು.
ಉಗ್ರರ ಸತತ ದಾಳಿ: ಮುಂಬೈ ಮೇಲೆಯೇ ಏಕೆ!?
ಸ್ಫೋಟವಾಗುತ್ತಿದ್ದಂತೆಯೇ ಪೂರ್ತಿ ಮುಂಬೈ ಸ್ತಬ್ಧವಾಗಿತ್ತು. ಸದಾ ಚಟುವಟಿಕೆಯ ಕೇಂದ್ರವಾಗರುತ್ತಿದ್ದ ಬಾಂಬೆ ಸ್ಟಾಕ್ ಎಕ್ಸ್ ಚೆಂಚ್ ಮುಂದೆ 'ಗೂಳಿ' ನಲುಗಿ ಕೂತಿತ್ತು. ದೇಶದ ರಕ್ಷಣಾ ವ್ಯವಸ್ಥೆಯ ಬಗ್ಗೆ ಸಂಶಯ ಮೂಡುವಂಥ ಸನ್ನಿವೇಶ ಏರ್ಪಾಡಾಯ್ತು.
ಆ ಘಟನೆಯಾಗಿ 3 ವರ್ಷದ 2 ದಿನವಾಗಿತ್ತಷ್ಟೆ!
2008 ರ ಜುಲೈ 11 ರಂದು ಇದೇ ಮುಂಬೈಯಲ್ಲಿ ಬಾಂಬ್ ಸ್ಫೋಟ ಸಂಭವಿಸಿ 209 ಕ್ಕೂ ಹೆಚ್ಚು ಜನ ಮೃತರಾಗಿದ್ದರು. ಆ ಕರಾಳ ಘಟನೆ ಸಂಭವಿಸಿ ಕೇವಲ ಮೂರು ವರ್ಷದ ಎರಡು ದಿನವಾಗಿತ್ತಷ್ಟೇ! ಮತ್ತೆ ನಲುಗಿತು ಮುಂಬೈ!
ಪಟಾಕಿ ಸದ್ದಿಗೂ ಭಯಪಡುವ ಸ್ಥಿತಿ!
ಗಿಜಿಗುಡುವ ಮುಂಬೈಯಲ್ಲಿ ಒಂದು ಸಣ್ಣ ಪಟಾಕಿ ಸದ್ದಾದರೂ ಜನರಲ್ಲಿ ಭೀತಿ ಹುಟ್ಟುವ ಮಟ್ಟಿಗೆ 1993, 2008, 2011 ಹೀಗೆ ಹಲವು ಬಾರಿ ಸ್ಫೋಟಗಳು ಸಂಭವಿಸಿವೆ. ಕಡಲ ದಂಡೆಯಲ್ಲಿರುವ ಸುಂದರ ನಗರಕ್ಕೆ ಈ ಕಡಲೇ ಮಾರಕವಾಗಿದೆ. ಉಗ್ರರು ಸುಲಭವಾಗಿ ನುಗ್ಗಬಹುದಾದ ಈ ಕಡಲ ದಾರಿಯೇ 20111 ರಲ್ಲೂ ಮುಂಬೈಗೆ ಸವಾಲಾಗಿದ್ದು!
ಹೊಣೆ ಹೊತ್ತ ಇಂಡಿಯನ್ ಮುಜಾಹಿದ್ದಿನ್
ಈ ಸ್ಫೋಟದ ಹೊಣೆಯನ್ನು ಇಂಡಿಯನ್ ಮುಜಾಹಿದ್ದಿನ್ ಭಯೋತ್ಪಾದಕ ಸಂಘಟನೆ ಹೊತ್ತಿತ್ತು. ಘಟನೆಗೆ ಸಂಬಂಧಿಸಿದಂತೆ ಕುಖ್ಯಾತ ಉಗ್ರ ಯಾಸಿನ್ ಭಟ್ಕಳ್ ಮತ್ತು ಆತನ ಸಹೋದರ ರಿಯಾಜ್ ಭಟ್ಕಳ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲಾಗಿತ್ತು. ನಖಿ ಅಹ್ಮೆಸ್ ವಾಸಿ ಅಹ್ಮೆದ್ ಶೇಖ್ ಮತ್ತು ನದೀಮ್ ಅಕ್ತರ್ ಅಶ್ಫಾಖ್ ಶೇಖ್ ಎಂಬ ಇಬ್ಬರು ಉಗ್ರರನ್ನು ಬಂಧಿಸಲಾಗಿತ್ತು.
ಮುಂದೈತೆ ಮಾರಿಹಬ್ಬ ಎಂದಿದ್ದ ಮೋದಿ!
ಮುಂಬೈ ಸ್ಫೋಟದ ಸಂದರ್ಭದಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಹಾಲಿ ಪ್ರಧಾನಿ ನರೇಂದ್ರ ಮೋದಿ, 'ಇದು ಮಹಾಪಾತಕದ ಡ್ರೆಸ್ ರಿಹರ್ಸಲ್ ಅಷ್ಟೆ. ಮುಂದೈತೆ ಮಾರಿ ಹಬ್ಬ' ಎಂಬ ಎಚ್ಚರಿಕೆ ನೀಡಿದ್ದರು. 'ಉಗ್ರ ದಾಳಿಯ ಬಗ್ಗೆ ಸುಳಿವು ಸಿಕ್ಕಿರಲಿಲ್ಲ ಎಂದಿದ್ದ ಆಗಿನ ಯುಪಿಎ ಸರ್ಕಾರದ ಗೃಹ ಇಲಾಖೆಯ ವಿರುದ್ಧವೂ ಮೋದಿ ಕಿಡಿ ಕಾರಿದ್ದರು.
ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ವಜ್ರಗಳು!
ಈ ಸ್ಫೋಟದ ಸಂದರ್ಭದಲ್ಲಿ ಎಲ್ಲೆಲ್ಲೂ ರಕ್ತಸಿಕ್ತ ಶವಗಳು, ಗಾಯಾಳುಗಳು, ಬೆಂಕಿ ಕಾಣಿಸುತ್ತಿದ್ದರೆ ಈ ದೃಶ್ಯದೊಂದಿಗೆ ಎಲ್ಲೆಲ್ಲೂ ಹೊಳೆವ ವಜ್ರಗಳು ಕಂಡುಬಂದು ಅಚ್ಚರಿ ಮೂಡಿಸಿತ್ತು. ವಜ್ರದ ವ್ಯಾಪಾರಿಯೊಬ್ಬರು ತಮ್ಮ ಸೀಕ್ರೆಟ್ ಪಾಕೆಟ್ ನಲ್ಲಿಟ್ಟುಕೊಂಡಿದ್ದ ವಜ್ರವಿದು! ಚಹ ಹೀರುತ್ತ ನಿಂತಿದ್ದ ಅವರು ಬಾಂಬ್ ಸ್ಫೋಟಕ್ಕೆ ಬಲಿಯಾಗಿದ್ದರು. ಅವರ ಸೀಕ್ರೆಟ್ ಪಾಕೆಟ್ ನಲ್ಲಿದ್ದ ವಜ್ರಗಳು ಮಾತ್ರ ಈ ಘಟನೆಯ ಅಣಕ ಎಂಬಂತೆ ಮಿನುಗುತ್ತಿದ್ದವು!