ಮುಂಬೈಯಲ್ಲಿ ಅಗ್ನಿ ಆಕಸ್ಮಿಕ: ಐವರ ದುರ್ಮರಣ
ಮುಂಬೈ, ಡಿಸೆಂಬರ್ 28: ವಾಣಿಜ್ಯನಗರಿ ಮುಂಬೈಯ ಬಹುಮಹಡಿ ಕಟ್ಟಡವೊಂದರಲ್ಲಿ ಸಂಭವಿಸಿದ ಅಗ್ನಿ ಆಕಸ್ಮಿಕದಲ್ಲಿ ಐವರು ಮೃತರಾದ ದುರ್ಘಟನೆ ಸಂಭವಿಸಿದೆ.
ಮುಂಬೈಯ ತಿಲಕ್ ನಗರದ ಬಳಿಯ ಗಣೇಶ್ ಗಾರ್ಡನ್ ಸಮೀಪದ ಬಹುಮಹಡಿ ಕಟ್ಟಡದ ಹನ್ನೊಂದನೇ ಅಂತಸ್ತಿನಲ್ಲಿ ಗುರುವಾರ ಸಂಜೆ ಬೆಂಕಿ ಕಾಣಿಸಿಕೊಂಡಿತ್ತು.
ತಕ್ಷಣವೇ ಅಗ್ನಿ ಶಾಮಕ ದಳದ ಸಿಬ್ಬಂದಿ ಬಂದು ಬೆಂಕಿ ಆರಿಸುವ ಕಾರ್ಯದಲ್ಲಿ ತೊಡಗಿದರಾದರೂ ಗಂಭಿರವಾಗಿ ಗಾಯಗೊಂಡಿದ್ದ ಐವರು ವೃದ್ಧರನ್ನು ಆಸ್ಪತ್ರೆಗೆ ಸಾಗಿಸುವ ವೇಳೆಗೆ ಮೃತರಾದರು.
ಮೃತರನ್ನು ಸುನಿತಾ ಜೋಷಿ, ಬಾಲಚಂದ್ರ ಜೋಷಿ, ಸುಮನ್ ಶ್ರೀನಿವಾಸ ಜೋಷಿ, ಸರಳ ಸುರೇಶ್ ಗಂಗರ್ ಮತ್ತು ಲಕ್ಷ್ಮಿಬೆನ್ ಪ್ರೇಮ್ ಜಿ ಗಂಗರ್ ಎಂದು ಗುರುತಿಸಲಾಗಿದೆ.
ಇತ್ತೀಚೆಗಷ್ಟೇ ಮುಂಬೈಯ ಆಸ್ಪತ್ರೆಯಲ್ಲಿ ಸಂಭವಿಸಿದ ಅಗ್ನಿ ಆಕಸ್ಮಿಕದಲ್ಲಿ ಹತ್ತಕ್ಕೂ ಹೆಚ್ಚು ಜನ ಮೃತರಾಗಿದ್ದರು. ಅಂಧೇರಿ ಉಪನಗರದ ಮರೋಲ್ ನಲ್ಲಿರುವ ಸರಕಾರ ನಡೆಸುವ ಇಎಸ್ ಐಸಿ ಕಾಮ್ ಗರ್ ಆಸ್ಪತ್ರೆಯಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿತ್ತು.
7 ಅಂತಸ್ತಿನ ಕಟ್ಟಡದ ಗ್ರೌಂಡ್ ಫ್ಲೋರ್ ನಲ್ಲಿ ರಬ್ಬರ್ ನಂಥ ಕೆಲವು ಸಾಮಗ್ರಿಗಳನ್ನು ಸಂಗ್ರಹಿಸಲಾಗಿತ್ತು. ಬೆಂಕಿ ಇಲ್ಲಿಂದಲೇ ಆರಂಭವಾಗಿದೆ ಎನ್ನಲಾಗಿತ್ತು.