ಬಾಳಾ ಠಾಕ್ರೆ ಮೊಮ್ಮಗ, 29 ವರ್ಷದ ಆದಿತ್ಯ ಮಹಾರಾಷ್ಟ್ರ ಸಿಎಂ ಸ್ಥಾನಕ್ಕೆ
ಮಹಾರಾಷ್ಟ್ರ ವಿಧಾನಸಭೆಯಲ್ಲಿ ಶಿವಸೇನೆಯನ್ನು ಮುನ್ನಡೆಸಲು ಆದಿತ್ಯ ಠಾಕ್ರೆ ಹೆಸರನ್ನು ಮುನ್ನೆಲೆಗೆ ತರಲಾಗಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಹೊಸ ಸರಕಾರ ರಚಿಸುವ ಅವಕಾಶ ಸಿಕ್ಕರೆ ಆದಿತ್ಯ ಠಾಕ್ರೆ ಪಕ್ಷದ ನೇತೃತ್ವ ವಹಿಸಲಿದ್ದಾರೆ. ಗುರುವಾರದಂದು ಆದಿತ್ಯ ಠಾಕ್ರೆಗೆ ಇಪ್ಪತ್ತೊಂಬತ್ತು ವರ್ಷ ತುಂಬಿತು.
ಚುನಾವಣೆ ರಾಜಕಾರಣಕ್ಕೆ ಪದಾರ್ಪಣೆ ಮಾಡಲು ಆದಿತ್ಯ ಅವರಿಗೆ ಅಧಿಕೃತವಾಗಿ ಹಸಿರು ನಿಶಾನೆ ಸಿಕ್ಕಿದೆ. ಪಕ್ಷದ ಪ್ರಮುಖ ನಾಯಕರಾದ ಮನೋಹರ್ ಜೋಶಿ, ಏಕ್ ನಾಥ್ ಶಿಂಧೆ, ನೀಲಂ ಗೋರ್ಹೆ ಹಾಗೂ ಶಿವಸೇನಾದ ಇತರ ನಾಯಕರು 'ಮಾತೋಶ್ರೀ' ನಿವಾಸಕ್ಕೆ ಭೇಟಿ ನೀಡಿ, ಆದಿತ್ಯ ಠಾಕ್ರೆ ಚುನಾವಣೆ ರಾಜಕೀಯಕ್ಕೆ ಇಳಿಯಬೇಕು ಎಂದು ಒತ್ತಾಯಿಸಿದ್ದಾರೆ.
ಈ ಒಂದು ಕಾರಣಕ್ಕೆ ಮಾತ್ರ ನಾವು ಬಿಜೆಪಿ ಜೊತೆಗಿದ್ದೇವೆ: ಉದ್ಧವ್ ಠಾಕ್ರೆ
ಉದ್ಧವ್ ಠಾಕ್ರೆ ನಂತರ ಪಕ್ಷದ ನಾಯಕರಾಗಿ ಆದಿತ್ಯ ಠಾಕ್ರೆಯನ್ನು ಬಿಂಬಿಸಬೇಕು ಎಂದು ಕಳೆದ ವರ್ಷದಿಂದ ಪ್ರಯತ್ನ ನಡೆಯುತ್ತಿದೆ. ಕಳೆದ ತಿಂಗಳಿಂದ ಈಚೆಗೆ ಚುನಾವಣೆಗೆ ಸ್ಪರ್ಧಿಸಬೇಕು ಎಂಬ ಒತ್ತಡ ಮತ್ತೂ ಹೆಚ್ಚಾಯಿತು. ಈ ಬಗ್ಗೆ ನಿರ್ಧಾರವನ್ನು ತಂದೆ ಉದ್ಧವ್ ಹಾಗೂ ಪಕ್ಷದ ಹಿರಿಯ ನಾಯಕರು ತೆಗೆದುಕೊಳ್ಳುತ್ತಾರೆ ಎಂದು ಆದಿತ್ಯ ಹೇಳಿದ್ದರು.
ಮಾಹಿಮ್ ಅಥವಾ ಶಿವಾದಿಯಿಂದ ಆದಿತ್ಯ ಸ್ಪರ್ಧೆ
ಒಂದು ವೇಳೆ ಆದಿತ್ಯ ಚುನಾವಣೆಗೆ ಸ್ಪರ್ಧಿಸಿದರೆ ಠಾಕ್ರೆ ಕುಟುಂಬದಿಂದ ಸ್ಪರ್ಧಿಸಿದ ಮೊದಲ ವ್ಯಕ್ತಿ ಅವರಾಗುತ್ತಾರೆ. ಕುಟುಂಬದಿಂದ ಯಾರೂ ಚುನಾವಣೆಗೆ ಸ್ಪರ್ಧೆ ಮಾಡಬಾರದು ಎಂಬ ಪದ್ಧತಿಯನ್ನು ಹಾಕಿಕೊಟ್ಟಿದ್ದು ಆದಿತ್ಯ ಅಜ್ಜ ಬಾಳಾ ಠಾಕ್ರೆ. ಅದನ್ನೇ ತಂದೆ ಉದ್ಧವ್ ಹಾಗೂ ಚಿಕ್ಕಪ್ಪ ರಾಜ್ ಠಾಕ್ರೆ ಈ ವರೆಗೆ ಪಾಲಿಸಿಕೊಂಡು ಬಂದಿದ್ದಾರೆ. ಶಿವಸೇನೆಯ ಹಿರಿಯ ನಾಯಕರೊಬ್ಬರು ನೀಡಿರುವ ಮಾಹಿತಿ ಪ್ರಕಾರ: ವಾಸ್ತವ ಸ್ಥಿತಿ ಬಗ್ಗೆ ಅಧ್ಯಯನ ಮಾಡಲಾಗಿದೆ. ಮಾಹಿಮ್ ಅಥವಾ ಶಿವಾದಿಯಿಂದ ಆದಿತ್ಯ ಸ್ಪರ್ಧೆ ಮಾಡುವ ಸಾಧ್ಯತೆ ಇದೆ. ಎರಡೂ ಕ್ಷೇತ್ರಗಳು ಶಿವಸೇನೆ ಪಾಲಿಗೆ ಭದ್ರಕೋಟೆ. ಮರಾಠಿ ಮಾತನಾಡುವವರ ವೋಟ್ ಬ್ಯಾಂಕ್ ಬಲವಾಗಿದೆ. ಈಚಿನ ಚುನಾವಣೆಗಳಲ್ಲಿ ಕೂಡ ಶಿವಸೇನೆಗೆ ಈ ಕ್ಷೇತ್ರಗಳಲ್ಲಿ ಭರ್ಜರಿ ಮುನ್ನಡೆ ಸಿಕ್ಕಿತ್ತು.
ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಅವರೇ ಅಭ್ಯರ್ಥಿ
ಒಂದು ವೇಳೆ ಸಂಪುಟ ಪುನಾರಚನೆಯಾದರೆ ಆದಿತ್ಯ ಠಾಕ್ರೆ ಅವರನ್ನು ಉಪ ಮುಖ್ಯಮಂತ್ರಿ ಸ್ಥಾನಕ್ಕೆ ತೆಗೆದುಕೊಳ್ಳಬೇಕು ಹಾಗೂ ವಿಧಾನಸಭಾ ಚುನಾವಣೆ ನಂತರ ಮುಖ್ಯಮಂತ್ರಿ ಆಗಬೇಕು ಎಂದು ಪರಿಸರ ಸಚಿವ ರಾಮ್ ದಾಸ್ ಕದಂ ಹೇಳಿದ್ದಾರೆ. ರಾಮ್ ದಾಸ್ ಅವರಂತೆ ಹಲವು ನಾಯಕರು ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಮಹಾರಾಷ್ಟ್ರದ ಜನರು ಆದಿತ್ಯ ಠಾಕ್ರೆ ಅವರನ್ನು ಯುವ ನಾಯಕನಾಗಿ ನೋಡುತ್ತಾರೆ. ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ಆಗಲೆಂದು ಬಯಸುವುದಾಗಿ ಯುವ ಸೇನೆಯ ಸದಸ್ಯ ವರುಣ್ ಸರ್ದೇಸಾಯಿ ಹೇಳಿದ್ದಾರೆ.
ಮಹಾ ಚುನಾವಣೆ : ಬಿಜೆಪಿ-ಶಿವಸೇನಾ ನಡುವೆ ಸೀಟು ಹಂಚಿಕೆ ಅಂತಿಮ
ಸಮಾನವಾಗಿ ಅಧಿಕಾರ ಹಂಚಿಕೆ ಸೂತ್ರ
ಬಿಜೆಪಿ ಹಾಗೂ ಶಿವಸೇನೆ ಸಮಾನವಾಗಿ ಅಧಿಕಾರ ಹಂಚಿಕೆ ಹಾಗೂ ಸ್ಥಾನ ಹಂಚಿಕೆಯ ಸೂತ್ರಕ್ಕೆ ಲೋಕಸಭೆಗೆ ಮುನ್ನ ಒಪ್ಪಿಕೊಂಡಿದ್ದವು. ಆದರೆ ಬಿಜೆಪಿಯ ಆಂತರಿಕ ಮೂಲಗಳ ಪ್ರಕಾರ, ಸಚಿವ ಸಂಪುಟದ ಸ್ಥಾನಗಳ ಸಮಾನ ಹಂಚಿಕೆ ಹಾಗೂ ಉಪಮುಖ್ಯಮಂತ್ರಿ ಸ್ಥಾನ ಶಿವಸೇನೆಗೆ ಎಂದಾಗಿ, ಆ ನಂತರ ಸಂಪುಟದಲ್ಲಿ ಸಮಾನವಾಗಿ ಸಚಿವ ಸ್ಥಾನ ಹಂಚಿಕೆ ಹಾಗೂ ಮುಖ್ಯಮಂತ್ರಿ ಸ್ಥಾನವನ್ನು ಇಂತಿಷ್ಟು ಅವಧಿಗೆ ಎಂದು ಹಂಚಿಕೊಳ್ಳುವುದು ಎನ್ನುತ್ತಾರೆ. ಒಂದು ವೇಳೆ ಶಿವಸೇನೆಗೆ ಉಪ ಮುಖ್ಯಮಂತ್ರಿ ಅಥವಾ ಮುಖ್ಯಮಂತ್ರಿ ಸ್ಥಾನ ಎರಡೂವರೆ ವರ್ಷ ಸಿಕ್ಕರೆ ಅದು ಆದಿತ್ಯ ಠಾಕ್ರೆ ಅವರಿಗೇ ಹೋಗುತ್ತದೆ ಎನ್ನುತ್ತಾರೆ ಶಿವಸೇನೆ ನಾಯಕರು. ''ಒಟ್ಟಾರೆ ಆದಿತ್ಯ ಠಾಕ್ರೆಯನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸಲು ಶಿವಸೇನೆಯಲ್ಲಿ ಒಕ್ಕೊರಲಿನ ಧ್ವನಿ ಕೇಳುತ್ತಿದೆ. ಮೊದಲ ಬಾರಿಗೆ ಇಂಥದ್ದೊಂದು ಸನ್ನಿವೇಶ ಕಾಣಿಸುತ್ತಿದೆ" ಎಂದು ರಾಜಕೀಯ ತಜ್ಞರು ಅಭಿಪ್ರಾಯ ಪಡುತ್ತಾರೆ.
ಲೋಕಸಭೆ ಫಲಿತಾಂಶದಿಂದ ಹೆಚ್ಚಾಗಿರುವ ಉತ್ಸಾಹ
ಈಚಿನ ಲೋಕಸಭೆ ಚುನಾವಣೆ ಫಲಿತಾಂಶ ಗಮನಿಸಿದರೆ ಮಹಾರಾಷ್ಟ್ರದಲ್ಲಿ ಬಿಜೆಪಿ- ಶಿವಸೇನೆ ಮೈತ್ರಿ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂಬ ವಿಶ್ವಾಸ ಇರುವುದರಿಂದ ಇಂಥ ಸನ್ನಿವೇಶದಲ್ಲಿ ಆದಿತ್ಯ ಠಾಕ್ರೆ ಪಟ್ಟಾಭಿಷೇಕದ ನಿರ್ಣಯ ತೆಗೆದುಕೊಳ್ಳಲಾಗಿದೆ. ತಮ್ಮ ಜನ್ಮ ದಿನದಂದು ಮಾಧ್ಯಮಗಳ ಜತೆ ಮಾತನಾಡುವುದರೊಂದಿಗೆ ದಿನ ಆರಂಭಿಸಿದ ಆದಿತ್ಯ, ಎಸ್ ಎಸ್ ಸಿ ವಿದ್ಯಾರ್ಥಿಗಳು ಹಾಗೂ ರೈತರ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿ ಫಡ್ನವೀಸ್ ಜತೆ ಮಾತನಾಡಿದ ವಿವರಗಳನ್ನು ನೀಡಿದರು. ಆದರೆ ರಾಜಕೀಯ ಪ್ರವೇಶದ ಬಗ್ಗೆ ಪ್ರಶ್ನೆ ಮಾಡಿದರೆ, ಜನರು ನನ್ನ ಮೇಲೆ ಇಟ್ಟಿರುವ ನಂಬಿಕೆಗೆ ಧನ್ಯವಾದಗಳು. ಸದ್ಯಕ್ಕೆ ಎಸ್ ಎಸ್ ಸಿ ವಿದ್ಯಾರ್ಥಿಗಳಿಗೆ ಪರಿಹಾರ ದೊರೆತು, ಸಲೀಸಾಗಿ ಕಾಲೇಜುಗಳಲ್ಲಿ ಪ್ರವೇಶ ದೊರೆಯುವಂತೆ ಹಾಗೂ ಬರದಿಂದ ತೊಂದರೆಗೆ ಒಳಗಾದ ರೈತರಿಗೆ ಪರಿಹಾರ ದೊರೆಯಲು ನನ್ನ ಗಮನ ಕೇಂದ್ರೀಕರಿಸಿದ್ದೇನೆ ಎಂದು ಆದಿತ್ಯ ಠಾಕ್ರೆ ಹೇಳಿದ್ದಾರೆ.