26/11 ಮುಂಬೈ ದಾಳಿ: ಪಾಕ್ ನ ಇಬ್ಬರು ಸೇನಾಧಿಕಾರಿ ವಿರುದ್ಧ ಜಾಮೀನುರಹಿತ ವಾರಂಟ್
ಮುಂಬೈ, ಫೆಬ್ರವರಿ 3: ಇಲ್ಲಿನ ಸೆಷನ್ಸ್ ಕೋರ್ಟ್ ಪಾಕಿಸ್ತಾನದ ಇಬ್ಬರು ಸೇನಾ ಅಧಿಕಾರಿಗಳ ವಿರುದ್ಧ ಜಾಮೀನುರಹಿತ ವಾರಂಟ್ ಹೊರಡಿಸಿದೆ. ಮೇಜರ್ ಅಬ್ದುಲ್ ರೆಹಮಾನ್ ಪಾಷಾ, ಮೇಜರ್ ಇಕ್ಬಾಲ್ ವಿರುದ್ಧ 26/11 ಮುಂಬೈ ಭಯೋತ್ಪಾದನಾ ದಾಳಿಗೆ ಸಂಬಂಧಿಸಿದಂತೆ ವಾರಂಟ್ ಹೊರಡಿಸಲಾಗಿದೆ. ಮೇಜರ್ ಪಾಷಾ ನಿವೃತ್ತರಾಗಿದ್ದು, ಮೇಜರ್ ಇಕ್ಬಾಲ್ ಈಗಲೂ ಐಎಸ್ ಐ ಗೆ ಕೆಲಸ ಮಾಡುತ್ತಿದ್ದಾರೆ.
ಈ ಮಾಹಿತಿಯನ್ನು ಅಮೆರಿಕದಲ್ಲಿ ಜನಿಸಿದ ಲಷ್ಕರ್ ಇ ತೈಬಾದ ಉಗ್ರಗಾಮಿ ಡೇವಿಡ್ ಕೋಲ್ಮನ್ ಹೆಡ್ಲಿ ಬಹಿರಂಗ ಪಡಿಸಿದ್ದಾನೆ. ಮುಂಬೈ ದಾಳಿ ಪ್ರಕರಣದಲ್ಲಿ ಆತ ಅಪ್ರೂವರ್ ಆಗಿದ್ದಾನೆ. ಮುಂಬೈ ಸಿಟಿ ಪೊಲೀಸ್ ಕ್ರೈಂ ಬ್ರ್ಯಾಂಚ್ ದಾಖಲಿಸಿದ ಆರೋಪ ಪಟ್ಟಿಯಲ್ಲಿ ಮೇಜರ್ ಇಕ್ಬಾಲ್ ಹಾಗೂ ಮೇಜರ್ ಪಾಷಾರನ್ನು ಬೇಕಾಗಿರುವ ಆರೋಪಿಗಳು ಎಂದು ತೋರಿಸಲಾಗಿದೆ.
ಈ ಇಬ್ಬಗೆ ನೀತಿ ಬಿಟ್ಟು, ಆರೋಪಿಗಳಿಗೆ ಶಿಕ್ಷೆ ನೀಡಿ: ಪಾಕ್ ಗೆ ಛೀಮಾರಿ ಹಾಕಿದ ಭಾರತ
ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಎಸ್.ವಿ.ಯಾರ್ಲಗಡ್ಡ ಜನವರಿ ಇಪ್ಪತ್ತೊಂದರಂದು ಅರ್ಜಿ ಸಲ್ಲಿಸಲು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಉಜ್ವಲ್ ನಿಕಂಗೆ ಅವಕಾಶ ನೀಡಿದ್ದಾರೆ. 26/11 ಮುಂಬೈ ದಾಳಿ ಪ್ರಕರಣದಲ್ಲಿ ಎಲ್ ಇಟಿಯ ಅಬು ಜುಂದಾಲ್ ನ ವಿಚಾರಣೆ ನಡೆಯುತ್ತಿದ್ದು, ಇದೀಗ ಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿದೆ.
ದಾಳಿಯ ಗುರಿ ಯಾವುದು ಎಂದು ನಿರ್ಧರಿಸುವ ಸಭೆಯಲ್ಲಿದ್ದರು
ಮುಂಬೈ ದಾಳಿಯಲ್ಲಿ ಪಾಕ್ ನ ಇಬ್ಬರು ಸೇನಾಧಿಕಾರಿಗಳ ಪಾತ್ರವನ್ನು ಹೆಡ್ಲಿ ಬಾಯಿ ಬಿಟ್ಟಿದ್ದಾನೆ ಎಂದು ಉಜ್ವಲ್ ನಿಕಂ ಅರ್ಜಿಯಲ್ಲಿ ಹೇಳಿದ್ದಾರೆ. ಮುಂದಿನ ವಿಚಾರಣೆ ಫೆಬ್ರವರಿ ಆರರಂದು ನಡೆಯಲಿದೆ. ಮುಂಬೈನಲ್ಲಿ ಎಲ್ಲೆಲ್ಲಿ ದಾಳಿ ನಡೆಸಬೇಕು ಎಂದು ಗುರಿಯನ್ನು ನಿರ್ಧರಿಸುವ ಸಭೆಯಲ್ಲಿ ಮೇಜರ್ ಇಕ್ಬಾಲ್ ಹಾಗೂ ಪಾಷಾ ಇದ್ದರು ಎಂದು ಹೆಡ್ಲಿ ಹೇಳಿದ್ದಾನೆ. ಆ ಸಭೆಯಲ್ಲಿ ಎಲ್ ಇಟಿಯ ಸಾಜಿದ್ ಮೀರ್, ಅಬು ಖಾಫಾ, ಝಕಿ ಉರ್ ರೆಹ್ಮಾನ್ ಲಖ್ವಿ ಕೂಡ ಹಾಜರಿದ್ದರು ಎಂಬ ಮಾಹಿತಿ ನೀಡಿದ್ದಾನೆ.
ಗುಪ್ತಚರ ಕೆಲಸಕ್ಕೆ 25 ಸಾವಿರ ಡಾಲರ್ ನೀಡಲಾಗಿತ್ತು
2006ರ ಸೆಪ್ಟೆಂಬರ್ ನಲ್ಲಿ ಮುಂಬೈಗೆ ಭೇಟಿ ನೀಡಿದ್ದ ಹೆಡ್ಲಿ, ತಾಜ್ ಹೋಟೆಲ್ ನ ಬಗ್ಗೆ ಮಾಹಿತಿ ಒದಗಿಸಿದ್ದ. ಸಂಬಂಧಪಟ್ಟ ಫೋಟೋ- ವಿಡಿಯೋಗಳನ್ನು ಮೇಜರ್ ಇಕ್ಬಾಲ್ ಗೆ ನೀಡಿದ್ದ. ಇನ್ನು ಭಾಭಾ ಅಟಾಮಿಕ್ ರೀಸರ್ಚ್ ಸೆಂಟರ್ ಹಾಗೂ ಶಿವಸೇನಾ ಪಕ್ಷದ ಕಚೇರಿಯ ಮಾಹಿತಿಯನ್ನು ನೀಡುವಂತೆ ಕೇಳಲಾಗಿತ್ತು. ಭಾರತದಲ್ಲಿ ಈ ರೀತಿ ಗುಪ್ತಚರ ಕೆಲಸಗಳನ್ನು ಮಾಡುವುದಕ್ಕೆ 25 ಸಾವಿರ ಡಾಲರ್ ಅನ್ನು ಇಕ್ಬಾಲ್ ತನಗೆ ನೀಡಿದ್ದಾಗಿ ಹೆಡ್ಲಿ ಹೇಳಿದ್ದಾನೆ.
26/11 ಮುಂಬೈ ದಾಳಿಯಲ್ಲಿ ಆ ಮಹಿಳೆ ರಹಸ್ಯ ಹೊರಗೆ ಬರಲಿಲ್ಲ!
166 ಮಂದಿ ಸಾವಿಗೆ ಕಾರಣ
ಮುಂಬೈ ದಾಳಿಗೆ ಮುಂಚೆ ಆ ದಾಳಿಯನ್ನು ಯೋಜಿಸಲು, ಸಂಚು ರೂಪಿಸಲು ಹಾಗೂ ಆ ಯೋಜನೆ ಅನುಷ್ಠಾನಕ್ಕೆ ತರಲು ಹೆಡ್ಲಿಯು ನಿರಂತರವಾಗಿ ಮೇಜರ್ ಪಾಷಾ ಸಂಪರ್ಕದಲ್ಲಿ ಇದ್ದ ಎಂದು ನಿಕಮ್ ಹೇಳಿದ್ದಾರೆ. ನವೆಂಬರ್ 26, 2008ರಲ್ಲಿ ಸಮುದ್ರ ಮಾರ್ಗದ ಮೂಲಕ ಮುಂಬೈಗೆ ಬಂದ ಪಾಕ್ ನ 10 ಭಯೋತ್ಪಾದಕರು, ಮನ ಬಂದಂತೆ ಗುಂಡು ಹಾರಿಸಿ 166 ಮಂದಿ ಸಾವಿಗೆ ಕಾರಣರಾಗಿದ್ದರು. ಅದರಲ್ಲಿ 18 ಮಂದಿ ಭದ್ರತಾ ಸಿಬ್ಬಂದಿ ಕೂಡ ಇದ್ದರು. ಹಲವಾರು ಮಂದಿ ಗಾಯಗೊಂಡಿದ್ದರು. ಆಸ್ತಿ ನಷ್ಟವಾಗಿತ್ತು.
ಒಂಬತ್ತು ಉಗ್ರಗಾಮಿಗಳ ಹತ್ಯೆ ಮಾಡಲಾಗಿತ್ತು
ಆ ದಾಳಿ 3 ದಿನ ನಡೆದಿತ್ತು. ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ರೈಲು ನಿಲ್ದಾಣ, ತಾಜ್ ಹೋಟೆಲ್, ಟ್ರೈಡೆಂಟ್ ಹೋಟೆಲ್, ಕೆಫೆ ಲಿಯೋಪೋಲ್ಡ್ ಮತ್ತು ಚಬಾದ್ ಹೌಸ್ ಮೇಲೆ ದಾಳಿ ನಡೆದಿತ್ತು. ಆ ದಾಳಿ ನಡೆಸಿದ ಒಂಬತ್ತು ಉಗ್ರಗಾಮಿಗಳನ್ನು ಕೊಲ್ಲಲಾಯಿತು. ಅಜ್ಮಲ್ ಕಸಬ್ ಎಂಬ ಉಗ್ರನನ್ನು ಮುಂಬೈ ಪೊಲೀಸರು ಜೀವಂತ ಸೆರೆ ಹಿಡಿದರು. ಆ ನಂತರ ಅವನಿಗೆ ಮರಣದಂಡನೆ ವಿಧಿಸಲಾಯಿತು.