ತೌಕ್ತೆ ಚಂಡಮಾರುತ - ಮುಂಬೈನಲ್ಲಿ ಬಾರ್ಜ್ ಮುಳುಗಿ 65 ಮಂದಿ ನಾಪತ್ತೆ, 22 ಶವ ಪತ್ತೆ
ಮುಂಬೈ, ಮೇ 19: ತೌಕ್ತೆ ಚಂಡಮಾರುತದ ಹೊಡೆತಕ್ಕೆ ಸಿಲುಕಿ ಮುಂಬೈನಿಂದ 35 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಬಾರ್ಜ್ ಪಿ -305 ಮುಳುಗಿದ ಎರಡು ದಿನಗಳ ನಂತರ ಇಪ್ಪತ್ತೆರಡು ಮಂದಿಯ ಮೃತದೇಹ ಪತ್ತೆಯಾಗಿದ್ದು ಶವವನ್ನು ಮುಂಬೈ ಡಾಕ್ ಯಾರ್ಡ್ಗೆ ತರಲಾಗಿದೆ. ಇನ್ನು 65 ಮಂದಿ ನಾಪತ್ತೆಯಾಗಿದ್ದಾರೆ. ಒಟ್ಟು 186 ಜನರನ್ನು ರಕ್ಷಿಸಲಾಗಿದೆ ಎಂದು ವರದಿಯಾಗಿದೆ.
ಸೇನೆಯ ಕಮಾಂಡರ್ ಆಪರೇಷನ್ಸ್ ನ ನೇವಲ್ ಕಮಾಂಡ್ ಎಂ.ಕೆ. ಝಾ ಅವರು ಸಾವಿನ ಸಂಖ್ಯೆಯನ್ನು ದೃಢಪಡಿಸಿದ್ದಾರೆ. ಆದರೆ ಮೃತರ ಗುರುತು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಹಾಗೆಯೇ ಈ ಎಲ್ಲಾ ಸಾವುಗಳು ಬಾರ್ಜ್ ಪಿ -305 ಮುಳುಗಡೆಯಿಂದಲೇ ಸಂಭವಿಸಿದೆಯೇ ಎಂದು ದೃಢಪಡಿಸಲಾಗುವುದು ಎಂದೂ ತಿಳಿಸಿದ್ದಾರೆ.
ತೌಕ್ತೆ ದುರ್ಬಲ: ಮೇ 23ರವರೆಗೆ ರಾಜ್ಯದ ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಮಳೆ
ತೌಕ್ತೆ ಚಂಡಮಾರುತಕ್ಕೆ ಸಿಲುಕಿ ಮುಳುಗಿದ್ದ ಬಾರ್ಜ್ ಪಿ -305 ನಲ್ಲಿ ಇದ್ದ 273 ಜನರ ಪೈಕಿ ಈವರೆಗೆ 186 ಮಂದಿಯನ್ನು ರಕ್ಷಿಸಲಾಗಿದೆ. ಶೋಧ ಕಾರ್ಯಾಚರಣೆಯು ಇನ್ನೂ ಮುಂದುವರೆದಿದೆ. ನಾಪತ್ತೆಯಾಗಿರುವವರನ್ನು ಜೀವಂತವಾಗಿ ತೀರಕ್ಕೆ ಕರೆತರುವ ಭರವಸೆಯನ್ನು ನಾವು ಕಳೆದುಕೊಂಡಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ ಕಾಲಕಳೆದಂತೆ ಬದುಕುಳಿದವರನ್ನು ಹುಡುಕುವ ಅವಕಾಶವೂ ಇರುವುದಿಲ್ಲ ಎಂದು ಹೇಳಿದ್ದಾರೆ.
22 ಶವಗಳೊಂದಿಗೆ ಬದುಕುಳಿದ 125 ಮಂದಿಯನ್ನು ಕೂಡಾ ಮುಂಬೈ ಡಾಕ್ ಯಾರ್ಡ್ಗೆ ವಾಪಾಸ್ ಕರೆತರಲಾಗುವುದು. ನೌಕಾಪಡೆಯ ಯುದ್ಧನೌಕೆ ಐಎನ್ಎಸ್ ಕೊಚ್ಚಿಯು ಬುಧವಾರ ಅವರನ್ನು ಕರೆ ತಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
"ಬುಧವಾರ ಬೆಳಿಗ್ಗೆಯವರೆಗೆ, ಬಾರ್ಜ್ ಪಿ 305 ನಲ್ಲಿದ್ದ 186 ಮಂದಿಯನ್ನು ರಕ್ಷಿಸಲಾಗಿದೆ. ಪ್ರಸ್ತುತ ಐಎನ್ಎಸ್ ಟೆಗ್, ಐಎನ್ಎಸ್ ಬೆಟ್ವಾ, ಐಎನ್ಎಸ್ ಬಿಯಾಸ್, ಪಿ 8 ಐ ವಿಮಾನ ಮತ್ತು ಹೆಲಿಕಾಪ್ಟರ್ಗಳು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರಿಸಿದೆ ಎಂದು ನೌಕಾಪಡೆಯ ವಕ್ತಾರರು ತಿಳಿಸಿದ್ದಾರೆ.