ಕ್ರಿಮಿನಲ್ ಕೇಸ್ ಮುಚ್ಚಿಟ್ಟ ಆರೋಪ, ಮಾಜಿ ಸಿಎಂ ದೇವೇಂದ್ರಗೆ ಸಂಕಷ್ಟ
ಮುಂಬೈ, ಮಾರ್ಚ್ 2: ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ಗೆ ಸಂಕಷ್ಟ ಎದುರಾಗಿದೆ. 2014ರ ಚುನಾವಣೆ ಸಂದರ್ಭದಲ್ಲಿ ಆಯೋಗಕ್ಕೆ ಸಲ್ಲಿಸಿದ್ದ ಅಫಿಡವಿಟ್ ಈಗ ಕಾಡತೊಡಗಿದೆ. ಈ ಹಿಂದೆ 2019ರ ಮಹಾರಾಷ್ಟ್ರ ಚುನಾವಣೆ ವೇಳೆಯಲ್ಲೂ ಕ್ರಿಮಿನಲ್ ಕೇಸ್ ಮುಚ್ಚಿಟ್ಟ ಕಾರಣಕ್ಕಾಗಿ ನಾಗ್ಪುರ ನ್ಯಾಯಾಲಯದಿಂದ ಸಮನ್ಸ್ ಜಾರಿಯಾಗಿತ್ತು.
ತಮ್ಮ ವಿರುದ್ಧದ ಪ್ರಕರಣದ ವಿಚಾರಣೆ ಕೈಬಿಡುವಂತೆ ಕೋರಿ ಸುಪ್ರೀಂಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದ ದೇವೇಂದ್ರ ಫಡ್ನವೀಸ್ ಅವರಿಗೆ ಮಂಗಳವಾರ (ಮಾರ್ಚ್ 02)ದಂದು ಸುಪ್ರೀಂಕೋರ್ಟಿನಿಂದ ಕಹಿ ಸುದ್ದಿ ಸಿಕ್ಕಿದೆ. ದೇವೇಂದ್ರ ಸಲ್ಲಿಸಿದ್ದ ಅರ್ಜಿ ತಿರಸ್ಕಾರಗೊಂಡಿದ್ದು, ವಿಚಾರಣೆ ಎದುರಿಸಬೇಕಾಗಿದೆ.
ಕ್ರಿಮಿನಲ್ ಪ್ರಕರಣ ಬಹಿರಂಗ ಪಡಿಸದ ಕಾರಣ ಫಡ್ನವೀಸ್ ಗೆ ಕೋರ್ಟ್ ಸಮನ್ಸ್
ವಕೀಲ ಸತೀಶ್ ಉಕೆ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ಸುಪ್ರೀಂಕೋರ್ಟ್, ದೇವೇಂದ್ರ ವಿರುದ್ಧ 1996, 1998ರಲ್ಲಿ ವಂಚನೆ, ಫೋರ್ಜರಿ ಪ್ರಕರಣಗಳೂ ದಾಖಲಾಗಿದ್ದು, ದೋಷರೋಪಣ ಪಟ್ಟಿ ಸಲ್ಲಿಸಿಲ್ಲ, ಈ ಬಗ್ಗೆ ಯಾವುದೇ ಅಫಿಡವಿಟ್ ನಲ್ಲೂ ನಮೂದಿಸಿಲ್ಲ ಎಂದು ಆರೋಪಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಶಿವಸೇನೆ ನೇತೃತ್ವದಲ್ಲಿ ಹೊಸ ಸರ್ಕಾರ ಪ್ರಮಾಣವಚನ ಸ್ವೀಕರಿಸಿದ ದಿನವೇ ನಾಗ್ಪುರದ ಶಾಸಕರಾಗಿರುವ ಫಡ್ನವೀಸ್ ಮನೆಗೆ ಸಮನ್ಸ್ ಪ್ರತಿ ಅಂಟಿಸಲಾಗಿತ್ತು.
ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ನವೆಂಬರ್ 1 ರಂದು ಬಿಜೆಪಿ ನಾಯಕನ ವಿರುದ್ದ ಅಫಿಡಿಟ್ ನಲ್ಲಿ ಬಹಿರಂಗಪಡಿಸದ ಆರೋಪದ ಕುರಿತು ಕ್ರಿಮಿನಲ್ ಮೊಕದ್ದಮೆ ಕೋರಿ ಅರ್ಜಿಯನ್ನು ಸಲ್ಲಿಸಲಾಗಿತ್ತು.
ದೇವೇಂದ್ರ ವಿರುದ್ಧದ ಜನ ಪ್ರತಿನಿಧಿ ಕಾಯ್ದೆ 1951 ರ ಸೆಕ್ಷನ್ 125 ಎ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವನ್ನಾಗಿ ಪರಿಗಣಣಿಸಲಾಗುವುದು ಎಂದು ಮ್ಯಾಜಿಸ್ಟ್ರೇಟ್ ಎಸ್ ಡಿ ಮೆಹ್ತಾ ಹೇಳಿದ್ದರು. ಆದರೆ, ನಂತರ ಬಾಂಬೆ ಹೈಕೋರ್ಟಿನಿಂದ ವಿಚಾರಣೆಗೆ ತಡೆ ಸಿಕ್ಕಿತ್ತು. ಪ್ರಕರಣ ಸುಪ್ರೀಂಕೋರ್ಟ್ ಮೇಟ್ಟಿಲೇರಿದಾಗ ಈ ಹಿಂದಿನ ಸಿಜೆಐ ರಂಜನ್ ಗೊಗಾಯಿ, ಜಸ್ಟೀಸ್ ದೀಪಕ್ ಗುಪ್ತಾ, ನ್ಯಾ. ಅನಿರುದ್ಧ ಬೋಸ್ ಅವರಿದ್ದ ನ್ಯಾಯಪೀಠವು, ಹೈಕೋರ್ಟ್ ಆದೇಶವನ್ನು ಪಕ್ಕಕ್ಕೆ ತಳ್ಳಿ, ಜನಪ್ರತಿನಿಧಿ ಕಾಯ್ದೆ ಅನ್ವಯ ವಿಚಾರಣೆ ಎದುರಿಸುವಂತೆ ತೀರ್ಪು ನೀಡಿದ್ದರು.