ಕೊರೊನಾದಿಂದ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೆ ಸಿದ್ಧ 200 ಮುಸ್ಲಿಂ ಯುವಕರ ತಂಡ
ಮುಂಬೈ, ಜುಲೈ 8: ಕೊರೊನಾ ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರವೇ ಈಗ ಚರ್ಚೆಯ ವಿಷಯವಾಗಿದೆ. ಕೆಲವು ಕಡೆಗಳಲ್ಲಿ ಅಂತ್ಯಸಂಸ್ಕಾರ ನಡೆಸುವುದನ್ನು ವಿರೋಧಿಸಲಾಗುತ್ತಿದೆ. ಆದರೆ ಜಾತಿ ಮತದ ಭೇದವಿಲ್ಲದೇ ಇಲ್ಲಿನ ಸುಮಾರು 200 ಮುಸ್ಲಿಂ ಯುವಕರನ್ನೊಳಗೊಂಡ ತಂಡ ಕೊರೊನಾ ಸೋಂಕಿನಿಂದ ಮೃತಪಟ್ಟವರ ಶವಸಂಸ್ಕಾರ ನಡೆಸಲು ಸಹಾಯಕ್ಕೆ ನಿಂತಿದೆ.
ಇಲ್ಲಿನ ಬಡಾ ಕಬರಸ್ತಾನ ಸಮಿತಿಯ ಸುಮಾರು 200 ಯುವಕರು ಕೊರೊನಾ ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರ ನಡೆಸಲು ದಿನದ 24 ಗಂಟೆಯಲ್ಲೂ ಸಹಾಯಕ್ಕೆ ಸನ್ನದ್ಧರಾಗಿದ್ದಾರೆ. ಕೊರೊನಾ ಸೋಂಕಿನಿಂದ ಮೃತಪಟ್ಟವರ ಸಂಬಂಧಿಗಳಿಗೆ ಸಹಾಯ ಮಾಡುವಲ್ಲಿ ತೊಡಗಿಕೊಂಡಿದ್ದು, ಈ ಸಂಗತಿ ಈಗ ವೈರಲ್ ಆಗಿದೆ.
ಮನ ಕಲಕುವ ದೃಶ್ಯ: ಜೆಸಿಬಿಯಲ್ಲಿ ಕೊರೊನಾ ರೋಗಿಯ ಶವ ಸಾಗಣೆ
ಈ ಸಮಿತಿಯ ಯುವಕರು ಆಸ್ಪತ್ರೆಗಳೊಂದಿಗೆ ಸಮನ್ವಯ ಸಾಧಿಸಿ ಸೋಂಕಿನಿಂದ ಮೃತಪಟ್ಟವರ ಅಂತಿಮ ವಿಧಿಗಳಿಗೆ ವ್ಯವಸ್ಥೆ ಮಾಡುತ್ತಾರೆ. ದಿನದ 24 ಗಂಟೆಯೂ ಇವರು ಸೇವೆಗೆ ಸಿದ್ಧ ಎಂದು ಈ ಸಮಿತಿ ಕಾರ್ಯಪಡೆಯ ಸದಸ್ಯರೊಬ್ಬರು ಹೇಳುತ್ತಾರೆ. ಒಟ್ಟು ಹದಿನೈದು ಸ್ಮಶಾನ ಮತ್ತು 62 ಕಬರಸ್ತಾನದಲ್ಲಿ ತಂಡ ಕಾರ್ಯಾಚರಣೆ ನಡೆಸುತ್ತಿದೆ.
ಜಾತಿ, ಮತದ ಭೇದವಿಲ್ಲದೇ ಈ ಕೆಲಸ ಮಾಡುತ್ತಿದ್ದು, ಮೃತರ ಧರ್ಮದ ಪ್ರಕಾರ ಅಂತಿಮ ವಿಧಿ ವಿಧಾನಗಳನ್ನು ನಡೆಸಲು ಸಹಕರಿಸುತ್ತಿದ್ದಾರೆ. ಇದುವರೆಗೂ ಕೊರೊನಾ ಸೋಂಕಿನಿಂದ ಮೃತಪಟ್ಟ 250 ಮಂದಿ ಹಿಂದೂಗಳ ಸಂಸ್ಕಾರವನ್ನು ನಡೆಸಿದ್ದಾರೆ. ಜಾತಿ ಮತಗಳನ್ನು ಮೀರಿ ಮಾನವೀಯ ದೃಷ್ಟಿಯಿಂದ ನಡೆಸುತ್ತಿರುವ ಈ ಕಾರ್ಯಕ್ಕೆ ಎಲ್ಲೆಡೆಯಿಂದಲೂ ಶ್ಲಾಘನೆ ವ್ಯಕ್ತವಾಗಿದೆ.