20 ವರ್ಷದ ಕೊರೊನಾವೈರಸ್ ಸೋಂಕಿತನ ಸಾವಿಗೆ ಕಾರಣವೇ ಬೇರೆ!
ಮುಂಬೈ, ಜುಲೈ.09: ಕೊರೊನಾವೈರಸ್ ಎಂಬ ಮಹಾಮಾರಿ ಒಮ್ಮೆ ದೇಹವನ್ನು ಹೊಕ್ಕಿದರೆ ಸಾವು ನಿಶ್ಚಿತ ಎನ್ನುವ ಭೀತಿ ಜನರಲ್ಲಿ ಹುಟ್ಟಿಕೊಂಡಿದೆ. ಭಾರತದಲ್ಲಿ ಕೊರೊನಾವೈರಸ್ ಸೋಂಕಿತರಿಗಿಂತ ಗುಣಮುಖರಾದವರ ಸಂಖ್ಯೆಯೇ ಹೆಚ್ಚಾಗಿದೆ. ಇಂಥದರ ನಡುವೆಯೂ 20 ವರ್ಷದ ಕೊರೊನಾವೈರಸ್ ಸೋಂಕಿತನು ಆಸ್ಪತ್ರೆಯಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಮಹಾರಾಷ್ಟ್ರದ ಕಿಂಗ್ ಎಡ್ವರ್ಡ್ ಮೆಮೋರಿಯಲ್ ಆಸ್ಪತ್ರೆಯಲ್ಲಿ ಇಂಥದೊಂದು ಘಟನೆ ನಡೆದಿದೆ. ಕೊರೊನಾವೈರಸ್ ಸೋಂಕಿನ ಲಕ್ಷಣಗಳು ಕಂಡು ಬಂದ ಹಿನ್ನೆಲೆ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆದ ಯುವಕ ಗುಣಮುಖವೂ ಆಗಿದ್ದನು.
ಮಹಾರಾಷ್ಟ್ರ, ತಮಿಳುನಾಡು, ಕರ್ನಾಟಕ ಮತ್ತು ಕೇರಳದ ಕೊವಿಡ್-19 ಕಥೆ
ಕೊವಿಡ್-19 ಸೋಂಕಿನಿಂದ ಗುಣಮುಖನಾದ ಯುವಕನು ಬ್ಲೆಡ್ ಕ್ಯಾನ್ಸರ್ ನಿಂದ ಬಳಲುತ್ತಿದ್ದನು. ಇದರಿಂದ ತೀವ್ರ ಮನೋರೋಗಕ್ಕೆ ತುತ್ತಾಗಿದ್ದ ಯುವಕನು ಮಾನಸಿಕವಾಗಿ ನೊಂದು ಆಸ್ಪತ್ರೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಕೊರೊನಾವೈರಸ್ ಕಂಡೀಷನ್:
ಇನ್ನು ಮಹಾರಾಷ್ಟ್ರದಲ್ಲಿ ಕೊರೊನಾವೈರಸ್ ಸೋಂಕು ಹರಡುವಿಕೆ ಪ್ರಮಾಣವು ಪ್ರತಿನಿತ್ಯ ಏರುಮುಖವಾಗಿ ಸಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ 6875 ಹೊಸ ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ರಾಜ್ಯದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 2,30,599ಕ್ಕೆ ಏರಿಕೆಯಾಗಿದೆ. ಒಂದೇ ದಿನ ಮಹಾಮಾರಿಗೆ ರಾಜ್ಯದಲ್ಲಿ 219 ಮಂದಿ ಪ್ರಾಣ ಬಿಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 9,667ಕ್ಕೆ ಏರಿಕೆಯಾಗಿದೆ. ಇನ್ನು, 1,27,259 ಸೋಂಕಿತರು ಗುಣಮುಖರಾಗಿದ್ದು, 93652 ಸಕ್ರಿಯ ಪ್ರಕರಣಗಳಿವೆ.