ಬೆಂಕಿ ದುರಂತ : ಪೋಷಕರ ಅತಿಯಾದ ಕಾಳಜಿಗೆ ಬಲಿಯಾದ ಮಗಳು
ಮುಂಬೈ, ಮೇ 14: ದಾದರ್ ಪೊಲೀಸ್ ಠಾಣೆ ಆವರಣದಲ್ಲಿ ಸಂಭವಿಸಿದ ಅಗ್ನಿ ಆಕಸ್ಮಿಕದಲ್ಲಿ ಶ್ರಾವಣಿ ಚವಾಣ್ ಎಂಬ ಯುವತಿಯೊಬ್ಬಳು ಮೃತಪಟ್ಟ ದುರ್ಘಟನೆ ಬಗ್ಗೆ ಓದಿರಬಹುದು. ಈಗ ಶ್ರಾವಣಿ ಸಾವಿಗೆ ಕಾರಣ ತಿಳಿದು ಬಂದಿದೆ.
ಭಾನುವಾರ ಮಧ್ಯಾಹ್ನ 1.40ರ ಸುಮಾರಿಗೆ ದಾದರ್ ಪೊಲೀಸ್ ಠಾಣೆ(ಪಶ್ಚಿಮ) ಸಮೀಪದ ವಸತಿ ಸಮುಚ್ಚಯದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ತಕ್ಷಣವೇ ಅಗ್ನಿಶಾಮಕದಳಕ್ಕೆ ಕರೆ ಬಂದಿದೆ. ನಾಲ್ಕು ಅಗ್ನಿ ಶಾಮಕದಳ ತಂಡ ಘಟನಾ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಲು ಯತ್ನಿಸಿದ್ದರು.
ಗೋಖಲೆ ರಸ್ತೆಯಲ್ಲಿರುವ ಮೂರು ಅಂತಸ್ತಿನ ವಸತಿ ಕಟ್ಟಡದ ಬೆಂಕಿ ದುರಂತದಲ್ಲಿ ಸಿಲುಕಿದ್ದ ಯುವತಿ ಸಾವಿಗೆ ಆಕೆಯ ಪೋಷಕರೇ ಪರೋಕ್ಷವಾಗಿ ಕಾರಣರಾಗಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ದಾದರ್ ಪೊಲೀಸ್ ಠಾಣೆ ಬಳಿ ಅಗ್ನಿ ಆಕಸ್ಮಿಕ, ಯುವತಿ ಸಾವು
ಸೈತಾನ್ ಚೌಕಿ ಪೊಲೀಸ್ ಕಾಲೋನಿಯಲ್ಲಿ ಬೆಂಕಿ ಕಾಣಿಸಿಕೊಂಡಾಗ ಮನೆಯೊಳಗೆ ಇದ್ದ ಶ್ರಾವಣಿ ನಿದ್ದೆಗೆ ಜಾರಿದ್ದರು. ಆದರೆ, ಬೆಂಕಿ, ಹೊಗೆ ಹೆಚ್ಚಾದಂತೆ ಶ್ರಾವಣಿಗೆ ಎಚ್ಚರವಾಗಿದೆ. ಆದರೆ, ತನ್ನ ರೂಮಿನಿಂದ ಹೊರಕ್ಕೆ ಬರಲಾಗದೆ ಒದ್ದಾಡಿದ್ದಾರೆ.
16 ವರ್ಷ ವಯಸ್ಸಿನ ಶ್ರಾವಣಿ ರೂಮಿನಲ್ಲೇ ಇದ್ದು ಓದಿಕೊಳ್ಳಲಿ ಎಂದು ಆಕೆಯ ಪೋಷಕರು ಹೊರಗಿನಿಂದ ಬಾಗಿಲಿಗೆ ಬೀಗ ಹಾಕಿಕೊಂಡು, ಅತಿಯಾದ ಕಾಳಜಿ ತೋರಿಸಿದ್ದಾರೆ. ನಂತರ ಸ್ನೇಹಿತರೊಬ್ಬರ ಮದುವೆ ಮನೆಗೆ ಹೋಗಿದ್ದಾರೆ. ಹೀಗಾಗಿ, ಹೊರಗೆ ಬರಲು ಸಾಧ್ಯವಾಗದ ಶ್ರಾವಣಿ, ಸರಿಯಾದ ಸಮಯಕ್ಕೆ ಅಗತ್ಯ ನೆರವು ಸಿಗದೆ ಬೆಂಕಿಯಲ್ಲಿ ಬೆಂದು ಬೂದಿಯಾಗಿದ್ದಾಳೆ.
ಅಗ್ನಿಶಾಮಕದಳ ಸಿಬ್ಬಂದಿ ಹೇಳಿಕೆ: ಪೊಲೀಸ್ ಕಾಲೋನಿಯ ಫ್ಲಾಟ್ ನಂಬರ್ 37ರಲ್ಲಿ ಚವಾಣ್ ಅವರ ಮನೆ ಇದೆ. ಎಲೆಕ್ಟ್ರಿಕ್ ವೈರಿಂಗ್ ಮೂಲಕ ಬೆಂಕಿ ವೇಗವಾಗಿ ವ್ಯಾಪಿಸಿತ್ತು. ನಮ್ಮ ಸಿಬ್ಬಂದಿ ಅಲ್ಲಿಗೆ ತೆರಳುವಷ್ಟರಲ್ಲಿ ಬೆಂಕಿ ಹೆಚ್ಚಾಗಿ ವ್ಯಾಪಿಸಿತ್ತು. ಫ್ಲಾಟ್ 37 ಹೊರಗಿನಿಂದ ಲಾಗ್ ಆಗಿತ್ತು. ಫ್ಲಾಟ್ ಸಂಖ್ಯೆ 36 ರಿಂದ 38 ರ ಮೂಲಕ ಫ್ಲಾಟ್ 37ರೊಳಗೆ ಹೋಗಲು ಯತ್ನಿಸಿದ್ದು ವಿಫಲವಾಯಿತು ಎಂದು ಮುಂಬೈ ಅಗ್ನಿ ಶಾಮಕ ದಳದ ಸಿಬ್ಬಂದಿ ವಿವರಿಸಿದ್ದಾರೆ.
ಬೆಂಕಿ ಹೊತ್ತಿಕೊಳ್ಳಲು ಕಾರಣ ಏನು ಎಂಬುದು ಇನ್ನು ತಿಳಿದುಬಂದಿಲ್ಲ. ಆದರೆ, ಘಟನಾ ಸ್ಥಳದಲ್ಲಿ ಸೀಮೆಎಣ್ಣೆ ಸೀಸೆಯೊಂದು ಪತ್ತೆಯಾಗಿರುವುದು ಅನುಮಾನಕ್ಕೆ ನಾಂದಿ ಹಾಡಿದೆ.