ಮಹಾರಾಷ್ಟ್ರ ಸಂಪುಟ ವಿಸ್ತರಣೆ; ಹದಿಮೂರು ಮಂದಿ ಸೇರ್ಪಡೆ
ಮುಂಬೈ, ಜೂನ್ 16: ತಮ್ಮ ಸಂಪುಟದ ಮೂರನೇ ವಿಸ್ತರಣೆಯಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಭಾನುವಾರ ಎಂಟು ಸಂಪುಟ ಸಚಿವರು ಹಾಗೂ ರಾಜ್ಯ ಸಚಿವರನ್ನು ಸೇರ್ಪಡೆ ಮಾಡಿಕೊಂಡಿದ್ದಾರೆ. ವಿರೋಧ ಪಕ್ಷದ ಮಾಜಿ ನಾಯಕ ಹಾಗೂ ಕಾಂಗ್ರೆಸ್ ನಾಯಕ ವಿಖೆ ಪಾಟೀಲ್ ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿಯ ಮಾಜಿ ನಾಯಕ ಜಯ್ ದತ್ತ ಕ್ಷೀರಸಾಗರ್ ಸಂಪುಟ ಸಚಿವರಾಗಿ ಅಧಿಕಾರ ಸ್ವೀಕರಿಸಿದರು.
ಬಾಳಾ ಠಾಕ್ರೆ ಮೊಮ್ಮಗ, 29 ವರ್ಷದ ಆದಿತ್ಯ ಮಹಾರಾಷ್ಟ್ರ ಸಿಎಂ ಸ್ಥಾನಕ್ಕೆ
ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ (ಎ) ನಾಯಕ ಅವಿನಾಶ್ ಮಹತೇಕರ್ ರಾಜ್ಯ ಸಚಿವರಾಗಿ ಪ್ರಮಾಣ ಸ್ವೀಕರಿಸಿದ್ದಾರೆ. ಈ ಮೂವರೂ ಸದ್ಯಕ್ಕೆ ಮಹಾರಾಷ್ಟ್ರ ವಿಧಾನಸಭೆಯ ಸದಸ್ಯರಾಗಿಲ್ಲ. ಅವರು ಆರು ತಿಂಗಳ ಮಟ್ಟಿಗೆ ಸಚಿವ ಸ್ಥಾನ ಹೊಂದಿರಬಹುದು. ಅಕ್ಟೋಬರ್ ನಲ್ಲಿ ಮಹಾರಾಷ್ಟ್ರದ ವಿಧಾನಸಭೆ ಚುನಾವಣೆ ನಡೆಯಬೇಕಿದೆ.
ಬಿಜೆಪಿಯ ಮುಂಬೈ ಮುಖ್ಯಸ್ಥ ಆಶಿಶ್ ಶೆಲಾರ್, ಸುರೇಶ್ ಖಡೆ, ಡಾ.ಸಂಜಯ್ ಕುಟೆ, ಡಾ. ಅನಿಲ್ ಬೊಂಡೆ ಹಾಗೂ ಅಶೋಕ್ ಉಯ್ಕೆ ಸಂಪುಟ ಸಚಿವರಾಗಿ ಸೇರ್ಪಡೆಯಾದರೆ, ಶಿವಸೇನೆಯಿಂದ ಸಂಪುಟಕ್ಕೆ ಸೇರ್ಪಡೆಯಾದ ಏಕೈಕ ಸದಸ್ಯ ತಾನಾಜಿ ಸಾವಂತ್.
ಬಿಜೆಪಿಯ ಯೋಗೇಶ್ ಸಾಗರ್, ಸಂಜಯ್ ಅಲಿಯಾಸ್ ಬಾಲಾ ಭೇಗಡೆ, ಪರಿಣಯ್ ಫುಕೆ ಹಾಗೂ ಅತುಲ್ ಸವೆ ಕಿರಿಯ ಸಚಿವರಾಗಿ ಸಂಪುಟಕ್ಕೆ ಸೇರಿಕೊಂಡಿದ್ದಾರೆ.