ಮಹಾರಾಷ್ಟ್ರದ 12 ಶಾಸಕರ ಅಮಾನತು ಆದೇಶ ರದ್ದುಗೊಳಿಸಿದ ಸುಪ್ರೀಂಕೋರ್ಟ್
ಮುಂಬೈ, ಜನವರಿ 28: ಮಹಾರಾಷ್ಟ್ರ ವಿಧಾನಸಭೆಯಲ್ಲಿ ಅನುಚಿತ ವರ್ತನೆ ತೋರಿದ ಆರೋಪದ ಹಿನ್ನೆಲೆ ಭಾರತೀಯ ಜನತಾ ಪಕ್ಷದ 12 ಶಾಸಕರ ಅನಿರ್ದಿಷ್ಟಾವಧಿ ಅಮಾನತು ಕ್ರಮವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.
ಶುಕ್ರವಾರ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಎಎಂ ಖಾನ್ವಿಲ್ಕರ್, ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಮತ್ತು ನ್ಯಾಯಮೂರ್ತಿ ಸಿಟಿ ರವಿಕುಮಾರ್ ಅವರ ತ್ರಿಸದಸ್ಯ ಪೀಠವು ಸ್ಪೀಕರ್ ತೆಗೆದುಕೊಂಡ ಕ್ರಮವು "ಅಸಂವಿಧಾನಿಕ ಮತ್ತು ಅನಿಯಂತ್ರಿತ" ಎಂಬ ಮಹತ್ವದ ತೀರ್ಪು ನೀಡಿದೆ.
ಅನುಚಿತ ವರ್ತನೆ ತೋರಿದ ಬಿಜೆಪಿಯ 12 ಶಾಸಕರ ಅಮಾನತುಗೊಳಿಸುವಿಕೆ ಕ್ರಮವು 2021ರ ಜುಲೈ ತಿಂಗಳಿನಲ್ಲಿ ನಡೆದ ಮಾನ್ಸೂನ್ ಅಧಿವೇಶನದ ಸಂದರ್ಭಕ್ಕೆ ಮಾತ್ರ ಇರಬಹುದು ಎಂದು ಸುಪ್ರೀಂಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.
ಏನಿದು ಶಾಸಕರ ಅಮಾನತು ಕ್ರಮ?:
ಕಳೆದ 2021ರ ಜುಲೈ ತಿಂಗಳಿನಲ್ಲಿ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಅಶಿಸ್ತಿನ ವರ್ತನೆ ತೋರಿದ ಹಾಗೂ ಕಲಾಪದಲ್ಲಿ ಗದ್ದಲ ಸೃಷ್ಟಿಸಿದ ಭಾರತೀಯ ಜನತಾ ಪಕ್ಷದ 12 ಶಾಸಕರನ್ನು ಸ್ಪೀಕರ್ ಭಾಸ್ಕರ್ ಜಾಧವ್ ಅಮಾನತುಗೊಳಿಸಿದರು. ಒಂದು ವರ್ಷಗಳವರೆಗೂ ಶಾಸಕರು ಕಲಾಪಕ್ಕೆ ಹಾಜರಾಗದಂತೆ ಅಮಾನತುಗೊಳಿಸಲಾಗಿತ್ತು. ಸದನವನ್ನು ಮುಂದೂಡಿದ ನಂತರದಲ್ಲಿ ಸ್ಪೀಕರ್ ಕಚೇರಿಗೆ ತೆರಳಿದ ಬಿಜೆಪಿ ಶಾಸಕರು ವಿರೋಧ ಪಕ್ಷದ ನಾಯಕ ದೇವೇಂದ್ರ ಫಡ್ನವೀಸ್ ಮತ್ತು ಬಿಜೆಪಿ ಹಿರಿಯ ನಾಯಕ ಚಂದ್ರಕಾಂತ್ ಪಾಟೀಲ್ ಎದುರಿನಲ್ಲೇ ತಮ್ಮನ್ನು ನಿಂದಿಸಿದರು ಎಂದು ಸ್ಪೀಕರ್ ಜಾಧವ್ ವಿವರಿಸಿದ್ದರು.
ಅಮಾನತುಗೊಂಡ ಬಿಜೆಪಿ ಶಾಸಕರು ಯಾರು?:
ಸಂಜಯ್ ಕುಟೆ, ಆಶಿಶ್ ಶೆಲಾರ್, ಅಭಿಮನ್ಯು ಪವಾರ್, ಗಿರೀಶ್ ಮಹಾಜನ್, ಅಥುಲ್ ಭಟ್ಕಳಕರ್, ಪರಾಗ್ ಅಲವ್ನಿ, ಹರೀಶ್ ಪಿಂಪಾಲೆ, ರಾಮ್ ಸತ್ಪುತೆ, ವಿಜಯ್ ಕುಮಾರ್ ರಾವಲ್, ಯೋಗೇಶ್ ಸಾಗರ್, ನಾರಾಯಣ್ ಕುಚೆ ಮತ್ತು ಕೀರ್ತಿಕುಮಾರ್ ಬಾಂಗ್ಡಿಯಾ ಅಮಾನತುಗೊಂಡಿದ್ದ 12 ಬಿಜೆಪಿ ಶಾಸಕರಾಗಿದ್ದಾರೆ.
Recommended Video