750 ಕೇಜಿ ಈರುಳ್ಳಿಗೆ ಬಂದ 1064 ರುಪಾಯಿ ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ನೀಡಿದ ಅನ್ನದಾತ
ಮಹಾರಾಷ್ಟ್ರ ಮೂಲದ ಈರುಳ್ಳಿ ಬೆಳೆಗಾರರೊಬ್ಬರು ಕೇಂದ್ರ ಸರಕಾರದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದ ಮತ್ತೊಂದು ಉದಾಹರಣೆ ಇದು. 750 ಕೇಜಿ ಈರುಳ್ಳಿಯನ್ನು ಮಾರಿದ್ದರಿಂದ ಬಂದ 1064 ರುಪಾಯಿಯನ್ನು ಪ್ರಧಾನಮಂತ್ರಿ ವಿಕೋಪ ಪರಿಹಾರ ನಿಧಿಗೆ ಕಳುಹಿಸಿ, ತಮ್ಮ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.
ಇಂಥ ಪ್ರತಿಭಟನೆ ದಾಖಲಿಸಿರುವುದು ಪ್ರಗತಿಪರ ರೈತ ಸಂಜಯ್ ಸಾಥೆ. 2010ರಲ್ಲಿ ಅಮೆರಿಕದ ಆಗಿನ ಅಧ್ಯಕ್ಷ ಬರಾಕ್ ಒಬಾಮ ಜತೆಗೆ ಸಂವಾದಕ್ಕೆ ಕೇಂದ್ರ ಕೃಷಿ ಸಚಿವಾಲಯ ಕರೆದೊಯ್ದ ಪ್ರಗತಿಪರ ರೈತರ ತಂಡದಲ್ಲಿ ಸಂಜಯ್ ಸಾಥೆ ಕೂಡ ಇದ್ದರು. ಇದೀಗ ಎಂಟು ವರ್ಷಗಳ ನಂತರ ತಾವು ಬೆಳೆದ ಕೃಷಿ ಉತ್ಪನ್ನವನ್ನು ಕೇಜಿಗೆ ಒಂದು ರುಪಾಯಿಗಿಂತ ಸ್ವಲ್ಪ ಹೆಚ್ಚಿನ ಬೆಲೆಗೆ ಮಾರಲು ಸಾಧ್ಯವಾಗಿದೆ.
ಕೆಜಿ ಈರುಳ್ಳಿಗೆ 1 ರೂ.! ಬೆಳೆದವರ ಕಣ್ಣೀರು ಕೇಳೋರ್ಯಾರು?
ಕೇಂದ್ರ ಸರಕಾರವು ರೈತರ ಬಗ್ಗೆ ತೋರುತ್ತಿರುವ ನಿರ್ಲಕ್ಷ್ಯದ ವಿರುದ್ಧ ತಮ್ಮ ಆಕ್ರೋಶ ದಾಖಲಿಸುವ ಸಲುವಾಗಿ ಪ್ರಧಾನಮಂತ್ರಿ ಪರಿಹಾರ ನಿಧಿಗೆ ಹಣ ಕಳುಹಿಸಿದ್ದಾರೆ. ಅಷ್ಟೇ ಅಲ್ಲ, ಮನಿ ಆರ್ಡರ್ ಮೂಲಕ ಕಳುಹಿಸಿದ್ದರಿಂದ ಹೆಚ್ಚುವರಿ ಐವತ್ನಾಲ್ಕು ರುಪಾಯಿಯನ್ನು ಕೂಡ ಪಾವತಿಸಿದ್ದಾರೆ.
ಒಂದು ಕೇಜಿಗೆ ರು. 1.40ರಂತೆ 750 ಕೇಜಿಗೆ 1064
ನಾಸಿಕ್ ನ ನಿಫಾದ್ ನಿವಾಸಿ ಸಾಥೆ ಮಾಧ್ಯಮ ಸಂಸ್ಥೆಯೊಂದರ ಜತೆ ಮಾತನಾಡಿ, ಈ ಅವಧಿಯಲ್ಲಿ 750 ಈರುಳ್ಳಿ ಮಾತ್ರ ಬೆಳೆಯಲು ಸಾಧ್ಯವಾಯಿತು. ನಿಫಾದ್ ನ ಸಗಟು ಮಾರಾಟ ಮಾರುಕಟ್ಟೆಯಲ್ಲಿ ಕೇಜಿಗೆ 1 ರುಪಾಯಿ ಮಾತ್ರ ಕೊಡುವುದಾಗಿ ಹೇಳಿದರು. ಕೊನೆಗೂ ಹೇಗೋ ಚೌಕಾಸಿ ಮಾಡಿ ಒಂದು ಕೇಜಿಗೆ ರು. 1.40ರಂತೆ 750 ಕೇಜಿಗೆ 1064 ಪಡೆಯಲು ಸಾಧ್ಯವಾಯಿತು ಎಂದಿದ್ದಾರೆ.
ನಾಲ್ಕು ತಿಂಗಳ ಶ್ರಮಕ್ಕೆ 1064 ರುಪಾಯಿ
ನಾಲ್ಕು ತಿಂಗಳು ನಾವು ಪಟ್ಟ ಶ್ರಮಕ್ಕೆ ಇಂಥ ಪ್ರತಿಫಲ ಸಿಕ್ಕಿರುವುದು ಬಹಳ ನೋವಿನ ಸಂಗತಿ. ಆದ್ದರಿಂದ ಈರುಳ್ಳಿ ಮಾರಿ ಬಂದ 1064 ರುಪಾಯಿ ಹಣವನ್ನು ಪ್ರಧಾನಿ ಪರಿಹಾರ ನಿಧಿಗೆ ಕಳುಹಿಸಿದೆ. ಮನಿ ಆರ್ಡರ್ ಮೂಲಕ ಕಳುಹಿಸಿದ್ದರಿಂದ ಹೆಚ್ಚುವರಿ ಐವತ್ನಾಲ್ಕು ರುಪಾಯಿಯನ್ನು ಪಾವತಿಸಬೇಕಾಯಿತು ಎಂದು ಅವರು ಹೇಳಿದ್ದಾರೆ.
ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವನಲ್ಲ
ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವನಲ್ಲ. ಆದರೆ ರೈತರ ಕಷ್ಟಗಳಿಗೆ ಸ್ಪಂದಿಸದ ಸರಕಾರದ ಧೋರಣೆ ಬಗ್ಗೆ ನನಗೆ ಸಿಟ್ಟಿದೆ. ನವೆಂಬರ್ ಇಪ್ಪತ್ತೊಂಬತ್ತನೇ ತಾರೀಕು ಪ್ರಧಾನಿಗಳ ವಿಳಾಸ ಬರೆದು ನಿಫಾದ್ ನ ಅಂಚ ಕಚೇರಿಯಿಂದ ಸಾಥೆ ಹಣ ಕಳುಹಿಸಿದ್ದಾರೆ. ಭಾರತದಲ್ಲಿ ಉತ್ಪಾದನೆ ಆಗುವ ಒಟ್ಟಾರೆ ಈರುಳ್ಳಿ ಪ್ರಮಾಣದ ಪೈಕಿ ಶೇಕಡಾ ಐವತ್ತರಷ್ಟನ್ನು ಉತ್ತರ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲೇ ಬೆಳೆಯಲಾಗುತ್ತದೆ.
ಬರಾಕ್ ಒಬಾಮ ಜತೆಗೆ ಮಾತುಕತೆ ನಡೆಸಿದ್ದ ಪ್ರಗತಿಪರ ರೈತ
ಎಂಟು ವರ್ಷಗಳ ಹಿಂದೆ ಬರಾಕ್ ಒಬಾಮರನ್ನು ಭೇಟಿ ಆಗಿದ್ದ ಸಂದರ್ಭದ ಬಗ್ಗೆ ಸಾಥೆ ವಿವರಿಸುವುದು ಹೀಗೆ: ನಾನು ಬಹಳ ಕಾಲದಿಂದ ರೈತರಿಗೆ ನೀಡುವ ಧ್ವನಿ ಆಧಾರಿತ ಸಲಹಾ ಸೇವೆಯನ್ನು ಪಡೆಯುತ್ತಿದ್ದೇನೆ. ಆಗಾಗ ಅವರಿಗೆ ಕರೆ ಮಾಡುತ್ತೇನೆ, ಹವಾಮಾನ ಬದಲಾವಣೆ ಬಗ್ಗೆ ಮಾಹಿತಿ ಪಡೆಯುತ್ತೇನೆ. ಆದ್ದರಿಂದ ಹೆಚ್ಚು ಉತ್ಪಾದನೆ ಪಡೆಯಲು ಸಾಧ್ಯವಾಗಿದೆ. ಸ್ಥಳೀಯ ರೇಡಿಯೋ ವಾಹಿನಿಗಳು ನನ್ನ ಅನುಭವ ಹಂಚಿಕೊಳ್ಳುವಂತೆ ಆಹ್ವಾನ ನೀಡುತ್ತವೆ. ಆದ್ದರಿಂದ ಒಬಾಮ ಭೇಟಿ ನೀಡಿದ್ದ ವೇಳೆ ಮುಂಬೈನ ಸೇಂಟ್ ಕ್ಸೇವಿಯರ್ ಕಾಲೇಜಿನಲ್ಲಿ ಮಳಿಗೆ ಹಾಕಲು ಕೃಷಿ ಸಚಿವಾಲಯದಿಂದ ನನ್ನನ್ನು ಆಯ್ಕೆ ಮಾಡಿದ್ದರು. ದುಭಾಷಿಯೊಬ್ಬರ ಸಹಾಯದಿಂದ ಕೆಲ ನಿಮಿಷಗಳ ಕಾಲ ಅವರೊಂದಿಗೆ ಮಾತನಾಡಿದ್ದೆ ಎಂದು ಸಂಜಯ್ ಸಾಥೆ ಹೇಳಿದ್ದಾರೆ.