ಅಮ್ಮಾ ನೀನೇಕೆ ಅಷ್ಟೊಂದು ಕ್ರೂರಿಯಾದೆ?
ಕುಂದಾಪುರ, ಆ. 2 : "ಅಮ್ಮಾ ನೀನೇಕೆ ಅಷ್ಟೊಂದು ಕ್ರೂರಿಯಾದೆ? ಧೋಧೋ ಮಳೆ ಸುರಿಯುತ್ತಿದ್ದರೂ ಹಾಲೂಡಿಸಬೇಕಾಗಿದ್ದ ನೀನು ಹುಟ್ಟಿದ ಕೂಡಲೆ ಕಾಡಲ್ಲಿ ಏಕೆ ಬಿಸಾಕಿ ಬಂದೆ? ನಿನ್ನ ಮನಸ್ಸು ಅಷ್ಟೊಂದು ಕಲ್ಲಾಯಿತೆ? ಕಾಡುಮೃಗಗಳ, ಕ್ರಿಮಿಕೀಟಗಳ ಪಾಲು ನಾನಾಗುತ್ತೇನೆಂಬ ಕಲ್ಪನೆಯೂ ನಿನಗೆ ಇರಲಿಲ್ಲವೆ? ಹೋಗಲಿ, ನನ್ನನ್ನು ಹುಟ್ಟಿಸಿದ್ದಾದರೂ ಏತಕೆ?"
ಆ ಪುಟ್ಟ ಮಗುವಿಗೆ ಮಾತು ಬಂದು, ತನ್ನ ತಾಯಿ ಯಾರೆಂದು ಗೊತ್ತಾಗಿ, ಆಕೆಯನ್ನು ಭೇಟಿಯಾಗಿ, ಆಕೆಯ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡು ಹೀಗೆ ಪ್ರಶ್ನೆ ಕೇಳಿದರೆ ಹೇಗಿರುತ್ತದೆ? ಆ ನಿರ್ದಯಿ ತಾಯಿಯಾದರೂ ಏನು ಉತ್ತರ ಕೊಟ್ಟಾಳು? ಏನೂ ತಪ್ಪು ಮಾಡದ ಆ ಮಗುವಿಗೆ ಉತ್ತರವಾದರೂ ಸಿಗುತ್ತದಾ?
ತಾಯಿ ದೇವರಿಗೆ ಸಮಾನ, ತಾಯಿ ತನ್ನ ಮಗುವಿಗೆ ಎಂದೂ ಕೇಡು ಬಯಸಲಾರಳು ಎಂಬ ಮಾತು ಚಾಲ್ತಿಯಲ್ಲಿದೆ. ಆದರೆ, ಇಲ್ಲೊಬ್ಬ ಅಪ್ರಾಪ್ತ ವಯಸ್ಕ ತಾಯಿಯೊಬ್ಬಳು, ಅನೈತಿಕ ಸಂಬಂಧದಿಂದ ಜನಿಸಿದ ಕಂದಮ್ಮನನ್ನು ಎಳ್ಳಷ್ಟು ಕರುಣೆಯೂ ಇಲ್ಲದೆ ಕಾಡಲ್ಲಿ ಬಿಸಾಕಿದ ಘಟನೆ ಕುಂದಾಪುರದಲ್ಲಿ ಜರುಗಿದೆ. ಆದರೆ, ಪತ್ರಕರ್ತರ ಸಮಯಸ್ಫೂರ್ತಿಯಿಂದಾಗಿ ಮಗು ಬದುಕುಳಿದಿದೆ. ಇದು ಪವಾಡವಲ್ಲವೆ?
ಒಂದೆರಡು ಗಂಟೆಯಲ್ಲ ಸತತ ಮೂವತ್ತು ಗಂಟೆಗಳ ಕಾಲ ಕಾಡಿನ ನಡುವೆ ಮಳೆಯಲ್ಲಿ ಬಿದ್ದಿದ್ದ ಮಗು ಈಗ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದೆ. ಹೀಗೆ ಮಗುವನ್ನು ಕಾಡಿನಲ್ಲಿ ಎಸೆದುಹೋದ ತಾಯಿಯನ್ನು ಹಟ್ಟಿಯಂಗಡಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಗುಡ್ಡೇನಂಗಡಿ ನಿವಾಸಿ ಸ್ವಾತಿ (17) ಎಂದು ಗುರುತಿಸಲಾಗಿದೆ.
ಮಗು ಅನೈತಿಕ ಸಂಬಂಧದಿಂದ ಹುಟ್ಟಿದ್ದರಿಂದ ಸ್ವಾತಿ ಮತ್ತು ಆಕೆಯ ಅಮ್ಮ ಪ್ರೇಮಾ ಮಗುವನ್ನು ತ್ಯಜಿಸಲು ನಿರ್ಧರಿಸಿದ್ದಾರೆ. ಅನೈತಿಕ ಸಂಬಂಧದಿಂದ ಸ್ವಾತಿ ತಾಯಿಯಾಗುತ್ತಿದ್ದಾಳೆ ಎಂದು ಗೊತ್ತಿದ್ದರೂ ಮಾನವೀಯತೆ ದೃಷ್ಟಿಯಿಂದ ಗ್ರಾಮಸ್ಥರು ಸುಮ್ಮನಿದ್ದರು. ಹೆರಿಗೆ ಮಾಡಿಸಲು ಬಾಡಿಗೆ ಕಾರು ತೆಗೆದುಕೊಂಡು ಶಿವಮೊಗ್ಗಕ್ಕೆ ತೆರಳುತ್ತಿರುವುದಾಗಿ ತಾಯಿ-ಮಗಳು ಹೇಳಿದ್ದಾರೆ.
ಆಗ ಆಕೆಗೆ ಹೆರಿಗೆ ನೋವು ಶುರುವಾಗಿದೆ. ಡ್ರೈವರನ್ನು ಕಾಡಿನ ಬಳಿ ನಿಲ್ಲಿಸಲು ಹೇಳಿ, ನಿಸರ್ಗ ಕರೆಗೆ ಹೋಗುವುದಾಗಿ ಹೇಳಿ, ಹದಿನೈದು ನಿಮಿಷದ ನಂತರ ಮರಳಿದ್ದಾರೆ. ಗಾಡಿಯನ್ನು ವಾಪಸ್ ತೆಗೆದುಕೊಂಡು ಹೋಗಲು ಹೇಳಿದ್ದಾರೆ. ತಲ್ಲೂರು ಬಳಿಯ ಆಸ್ಪತ್ರೆಯೊಂದರಲ್ಲಿ ಕೆಲ ಮಾತ್ರೆಗಳನ್ನೂ ಕೊಂಡಿದ್ದಾರೆ. [ಭೂ ಕುಸಿದರೂ ಪಾರಾದ ತಾಯಿ ಮಗು]
ಆದರೆ, ಉಬ್ಬಿದ ಹೊಟ್ಟೆ ಸಪಾಟಾಗಿರುವುದನ್ನು ನೆರೆಹೊರೆಯವರು ಗಮನಿಸಿದ್ದಾರೆ. ಕೂಡಲೆ ಪತ್ರಕರ್ತರೊಬ್ಬರಿಗೆ ಮಾಹಿತಿ ತಿಳಿಸಿದ್ದಾರೆ ಗ್ರಾಮಸ್ಥರು. ಇನ್ಸ್ಪೆಕ್ಟರ್ ದಿವಾಕರ್ ತಾಯಿ-ಮಗಳನ್ನು ವಿಚಾರಿಸಿದಾಗ ಸಹಕರಿಸಲು ನಿರಾಕರಿಸಿದ್ದಾರೆ. ಕೂಡಲೆ ಅವರನ್ನು ಕರೆದೊಯ್ದಿದ್ದ ಮಾರುತಿ ಓಮ್ನಿ ವಾಹನ ಚಾಲಕನ ಸಹಾಯದೊಂದಿಗೆ ಯುಟರ್ನ್ ತೆಗೆದುಕೊಂಡ ಸ್ಥಳಕ್ಕೆ ತೆರಳಿದ್ದಾರೆ.
ಸಾಕಷ್ಟು ಹುಡುಕಾಟ ನಡೆಸಿದಾಗ ಅಳುತ್ತ ಬಿದ್ದಿರುವ ಮಗು ಪತ್ತೆಯಾಗಿದೆ. ಮೂವತ್ತು ಗಂಟೆಗಳ ಕಾಲ ಮಳೆಯಲ್ಲಿ ಬಿದ್ದಿದ್ದರಿಂದ ಮಗುವಿನ ಸ್ಥಿತಿ ಚಿಂತಾಜನಕವಾಗಿತ್ತು. ದೇಹ ಕೂಡ ಸ್ವಲ್ಪ ಊದಿಕೊಂಡಿತ್ತು. ಕೂಡಲೆ ಮಗುವನ್ನು ಚಿನ್ಮಯಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆಗೆ ಚೇತರಿಸಿಕೊಳ್ಳುತ್ತಿದೆ.
ಹೆತ್ತ ಮಗುವನ್ನು ಕಾಡಲ್ಲಿ ಬಿಸಾಕಿದ್ದಕ್ಕಾಗಿ ತಾಯಿ ಮತ್ತು ಆಕೆಯ ಅಮ್ಮನನ್ನು ಬಂಧಿಸಲಾಗಿದ್ದು, ಅವರ ವಿರುದ್ಧ ಕೇಸ್ ದಾಖಲಿಸಲಾಗಿದೆ. ಈ ಕೃತ್ಯದಲ್ಲಿ ಭಾಗಿಯಾದ ಖಾಸಗಿ ಆಸ್ಪತ್ರೆಯ ವೈದ್ಯನ ವಿರುದ್ಧವೂ ಮೊದಕದ್ದಮೆ ದಾಖಲಿಸಲಾಗಿದೆ. ಸ್ವಾತಿ ಮತ್ತು ಪ್ರೇಮಾರನ್ನು ಕರೆದೊಯ್ದಿದ್ದ ವಾಹನ ಚಾಲಕನನ್ನು ದೂರುದಾರನನ್ನಾಗಿ ದಾಖಲಿಸಿಕೊಳ್ಳಲಾಗಿದೆ.