ಮುಂಬೈ ಬಾರ್ಜ್ ದುರಂತ; ಅನುಭವ ಬಿಚ್ಚಿಟ್ಟ ಮಂಗಳೂರು ಯುವಕರು
ಮಂಗಳೂರು, ಜೂನ್ 02; ತೌಕ್ತೆ ಚಂಡಮಾರುತದ ಅಬ್ಬರಕ್ಕೆ ಮುಂಬೈ ಅರಬ್ಬೀ ಸಮುದ್ರದಲ್ಲಿ ಬಾರ್ಜ್ನಲ್ಲಿ ಜೀವನ್ಮರಣ ಹೋರಾಟ ನಡೆಸಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಇಬ್ಬರು ಯುವಕರು ಮರಳಿ ಮನೆಗೆ ಬಂದಿದ್ದಾರೆ.
ಮೇ 17ರಂದು ತೌಕ್ತೆ ಚಂಡಮಾರುತದ ಅಬ್ಬರಕ್ಕೆ ನಲುಗಿ ಹೋಗಿದ್ದ ಮುಂಬೈ ಕರಾವಳಿಯ, ಅರಬ್ಬೀ ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿದ್ದ ತೊಕ್ಕೊಟ್ಟುವಿನ ಕಲ್ಲಾಪು ನಿವಾಸಿ ಚ್ಯವನ್ ಜೆ. ವಿ. ಮತ್ತು ಬಂಟ್ವಾಳದ ಪಾಣೆಮಂಗಳೂರಿನ ನಿವಾಸಿ ಸುಕುಮಾರ್ ಬಾರ್ಜ್ ಮುಳುಗಿದ ಸಂದರ್ಭದಲ್ಲಿ ಸಮುದ್ರದಲ್ಲೇ ಈಜಾಡಿ ಸಾವಿನ ಜೊತೆ ಕಾದಾಡಿ ಯಶಸ್ವಿಯಾಗಿದ್ದಾರೆ.
ತೌಕ್ತೆ ಚಂಡಮಾರುತ - ಮುಂಬೈ ಬಾರ್ಜ್ ದುರಂತ, ಮತ್ತೆ 37 ಶವ ಪತ್ತೆ, 38 ಮಂದಿ ನಾಪತ್ತೆ
ಮುಂಬೈ ಸಮೀಪದ ಬಾರ್ಜ್ನಲ್ಲಿ ಒಎನ್ ಜೆಸಿಯ ರಿಂಗ್ ಮರುಜೋಡಣೆ ಕಾರ್ಯದಲ್ಲಿ ಚ್ಯವನ್ ಮತ್ತು ಸುಕುಮಾರ್ ಸಹಿತ 260 ಮಂದಿ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದರು. ತೌಕ್ತೆ ಚಂಡಮಾರುತದ ಪರಿಣಾಮ ಸಮುದ್ರ ರೌದ್ರಾವತಾರ ತೋರಿದ್ದು, ಬಾರ್ಜ್ ಮುಳುಗಡೆಯಾಗಿತ್ತು.
ತೌಕ್ತೆ ಚಂಡಮಾರುತ - ಮುಂಬೈನಲ್ಲಿ ಬಾರ್ಜ್ ಮುಳುಗಿ 65 ಮಂದಿ ನಾಪತ್ತೆ, 22 ಶವ ಪತ್ತೆ
ಮೇ 17ರಂದು ಸಂಜೆ 4-5 ಗಂಟೆಯ ವೇಳೆಗೆ ಬಾರ್ಜ್ ಮುಳುಗಲು ಆರಂಭವಾಗಿದ್ದು, ಎಲ್ಲಾ ಕಾರ್ಮಿಕರು ಜೀವ ರಕ್ಷಣೆಗಾಗಿ ಲೈಫ್ ಜಾಕೆಟ್ ತೊಟ್ಟು ಸಮುದ್ರಕ್ಕೆ ಹಾರಿದ್ದರು. ಆದರೆ ದೈತ್ಯ ಅಲೆಗಳ ಹಿನ್ನಲೆಯಲ್ಲಿ ಸಾಕಷ್ಟು ಬಾರಿ ಮುಳುಗಿದ್ದರೂ ಸತತ 12 ಗಂಟೆ ಸಮುದ್ರದಲ್ಲೇ ಈಜಿದರು. ಮೇ 18ರ ಮುಂಜಾನೆ ಭಾರತೀಯ ನೌಕಾ ದಳ ಅವರನ್ನು ರಕ್ಷಣೆ ಮಾಡಿತು.
ತೌಕ್ತೆ ಚಂಡಮಾರುತ: ಬಾರ್ಜ್ ಪಿ305ನಲ್ಲಿದ್ದ 184 ಜನರನ್ನು ರಕ್ಷಿಸಿದ ನೌಕಾಪಡೆ
ಕತ್ತಲ ರಾತ್ರಿಯಲ್ಲಿ ಹೋರಾಟ
"ಲೈಫ್ ಜಾಕೆಟ್ ಇದ್ದರೂ ದೈತ್ಯ ಅಲೆಗಳ ಜೊತೆಗಿನ ಸೆಣಸಾಟ ಸುಲಭದ್ದಾಗಿರಲಿಲ್ಲ. ಸತತ 12 ಗಂಟೆ ಈಜಿದ ಬಳಿಕ ನೌಕಾ ಸೇನೆ ಮೇ 18ರ ಮುಂಜಾನೆ 4 ಗಂಟೆಯ ವೇಳೆಗೆ ನಮ್ಮನ್ನು ರಕ್ಷಿಸಿದರು. ರಾತ್ರಿ ಇಡೀ ಕಗ್ಗತ್ತಲಿನಲ್ಲಿ ಈಜುತ್ತಾ ಎಲ್ಲಿ ಹೋಗುತ್ತಿದ್ದೇವೆಂಬ ಅರಿವೇ ನಮಗೆ ಇರಲಿಲ್ಲ. ನೌಕಾ ಸೇನೆಯವರು ರಕ್ಷಣೆ ಮಾಡಿದ ಸಂಧರ್ಭದಲ್ಲಿ ನಮ್ಮಲ್ಲಿದ್ದ ದೇಹದ ಶಕ್ತಿ ಎಲ್ಲವೂ ನಿಷ್ಕ್ರಿಯ ವಾಗಿತ್ತು" ಎಂದು ಯುವಕರು ಹೇಳಿದ್ದಾರೆ.
5 ಮಂದಿಯ ತಂಡದ ರಕ್ಷಣೆ
"ನಾವು ಮಾತಾನಾಡುವ ಸ್ಥಿತಿಯಲ್ಲಿಯೂ ಇರಲಿಲ್ಲ. ಉಪ್ಪು ನೀರಿನಲ್ಲಿದ್ದ ಕಾರಣ ಕಣ್ಣು ಭಾಗಶಃ ಮಂಜಾಗಿದ್ದು, ಸರಿಯಾಗಿ ಯಾವುದೂ ಗೋಚರವಾಗುತ್ತಿರಲಿಲ್ಲ. ಬದುಕುಳಿಯುವ ಸಣ್ಣ ಭರವಸೆಯೂ ನಮಗೆ ಇರಲಿಲ್ಲ. ಈ ಹಿಂದೆ ತರಬೇತಿಯಲ್ಲಿ ಹೇಳಿದಂತೆ ಅಪಾಯದ ಸಂದರ್ಭದಲ್ಲಿ ಒಟ್ಟಿಗೆ ಇದ್ದರೆ ರಕ್ಷಣೆಗೂ ಮೊದಲ ಪ್ರಾಶಸ್ತ್ಯ ನೀಡುತ್ತಾರೆ ಎಂಬುವುದು ಗೊತ್ತಿತ್ತು. ಹೀಗಾಗಿ ರಾತ್ರಿ ಇಡೀ ನಾವು 5 ಮಂದಿಯ ತಂಡ ಒಬ್ಬರಿಗೊಬ್ಬರು ಧೈರ್ಯ ಹೇಳುತ್ತಾ ಈಜಾಡಿದೆವು" ಎಂದು ಸಾವನ್ನು ಗೆದ್ದ ಚ್ಯವನ್ ಮತ್ತು ಸುಕುಮಾರ್ ಅಭಿಪ್ರಾಯ ಹಂಚಿಕೊಂಡಿದ್ದಾರೆ.
30 ಕಾರ್ಮಿಕರು ಸಾವನ್ನಪ್ಪಿದ್ದಾರೆ
ಬಾರ್ಜ್ನ ಪ್ಲ್ಯಾಟ್ ಫಾರಂ ಕೆಲಸಕ್ಕೆ 100 ದಿನಗಳು ಬೇಕಾಗಿತ್ತು. ಕೊರೊನಾ ಕಾರಣ ಶಿಫ್ಟ್ ರದ್ದಾಗಿದ್ದರಿಂದ ಕೆಲಸವನ್ನೆಲ್ಲಾ ಬೇಗ ಮುಗಿಸಿ ಒಂದು ಪ್ಲ್ಯಾಟ್ ಫಾರಂ ಪೂರ್ತಿಗೊಳಿಸಿ ಇನ್ನೊಂದು ಪ್ಲ್ಯಾಟ್ ಫಾರಂ ಕೆಲಸ ಭಾಗಶಃ ಪೂರ್ತಿಯಾಗಿತ್ತು. ಆದರೆ ಕೆಲಸ ಪೂರ್ಣವಾಗುವ ಮೊದಲೇ ದುರಂತ ಸಂಭವಿಸಿದ್ದು, 30ಕ್ಕೂ ಹೆಚ್ಚು ಕಾರ್ಮಿಕರು ಸಾವನ್ನಪ್ಪಿದ್ದಾರೆ.
ಮತ್ತೆ ಆ ಕೆಲಸಕ್ಕೇ ಹೋಗಬೇಡಿ
ಸಿನಿಮೀಯ ರೀತಿಯಲ್ಲಿ ಹೋರಾಡಿ ಸಾವನ್ನು ಗೆದ್ದು ಮನೆಗೆ ಬಂದ ಯುವಕರಿಬ್ಬರ ಮನೆಯವರು ಈಗ ನೀವು ಇನ್ನು ಆ ಕೆಲಸಕ್ಕೆ ಹೋಗಬೇಡಿ, ಊರಲ್ಲೇ ಬೇರೆ ಏನಾದರೂ ಕೆಲಸ ಮಾಡಬಹುದು ಅಂತಾ ಹೇಳುತ್ತಿದ್ದಾರೆ. ಸಾಹಸ ಮೆರೆದ ಯುವಕರಿಗೆ ದಕ್ಷಿಣ ಕನ್ನಡ ಜಿಲ್ಲಾ ಸಂಸದ ನಳಿನ್ ಕುಮಾರ್ ಕಟೀಲ್ ಸೂಚನೆಯಂತೆ ಒಎನ್ ಜಿಸಿ 1 ಲಕ್ಷ ರೂಪಾಯಿ ನೀಡಿದೆ.