ಮಳೆಗಾಲ ಸ್ಪೆಷಲ್: ಬಾಯಲ್ಲಿ ನೀರೂರಿಸುವ ದ.ಕನ್ನಡದ ಏಡಿ ಊಟ!
ಮಂಗಳೂರು, ಜುಲೈ 3: ಮಳೆಗಾಲ ಬಂತು ಅಂದರೆ ಎಲ್ಲಾ ಕಡೆಗಳಲ್ಲಿ ಕೃಷಿಕರು ಕೃಷಿ ಕೆಲಸಗಳಲ್ಲಿ ತೊಡಗಲು ಪ್ರಾರಂಭಿಸುತ್ತಾರೆ ಎಂಬುವುದು ನಮಗೆಲ್ಲರಿಗೂ ಗೊತ್ತಿರುವ ವಿಚಾರ.
ಆದರೆ ತುಳುನಾಡಿನಲ್ಲಿ ಮಳೆ ಬಂತು ಅಂದರೆ ಹಳ್ಳಿಗಳಲ್ಲಿರುವ ಯುವಕರು ಸಂತಸಪಡುತ್ತಾರೆ. ಯಾಕೆಂದರೆ ಮಳೆ ಬರುವವರೆಗೂ ಗುಡ್ಡಗಾಡುಗಳಲ್ಲಿ ಬೇಟೆ ಆಡುವ ಯುವಕರು ಕಾಡುಪ್ರಾಣಿಗಳ ಬೇಟೆ ಬಿಟ್ಟು ತುಂಬಿ ಹರಿಯುವ ಹಳ್ಳ, ಕೊಳ್ಳಗಳತ್ತ ಮೀನು, ಏಡಿ ಹಿಡಿಯುವತ್ತ ಮುಖಮಾಡುತ್ತಾರೆ. ಇದು ಇಲ್ಲಿಗೆ ತಲೆತಲಾಂತರದಿಂದ ಬಂದ ಪದ್ದತಿ.
ಅಂಕಣ : ನೀರುಹಳ್ಳಿಯ ನಿರ್ಲಕ್ಷಿತ ಸುಂದರಿ ಎಂಡ್ರಕಾಯಿ!
ತುಳುನಾಡಿನ ಪರಿಸರದ ವೈಶಿಷ್ಟವೇ ಬೇರೆ ಎತ್ತರದ ಗುಡ್ಡಾಗಾಡು ಪ್ರದೇಶ. ಆಳವಾದ ಹಳ್ಳ, ಕೊಳ್ಳಗಳು ಹೀಗೆ ತನ್ನದೇ ಆದ ಸೌಂದರ್ಯವನ್ನು ಇಲ್ಲಿನ ಪರಿಸರ ಹೊಂದಿದೆ. ಆದ್ದರಿಂದ ಇಲ್ಲಿನ ಜನರ ಜೀವನ ಶೈಲಿ ಅತ್ಯಂತ ವಿಭಿನ್ನ. ಮಳೆಗಾಲ ಬರುವವರೆಗೂ ಕಾಡಿನಲ್ಲಿರುವ ಮೊಲ, ಹಂದಿ, ಬಾವಲಿ ಹೀಗೆ ವಿವಿಧ ತೆರನಾದ ಕಾಡುಪ್ರಾಣಿಗಳನ್ನು ಬೇಟೆಯಾಡಿ ತಿನ್ನುತ್ತಾರೆ. ಮಳೆಗಾಲದಲ್ಲಿ ಏಡಿ ಖಾದ್ಯ ತುಳುನಾಡಿನಲ್ಲಿ ಹೆಚ್ಚು ಪ್ರಸಿದ್ಧಿ.
ಏನಿದರ ವಿಶೇಷ? ಅಡುಗೆ ಭಕ್ಷ್ಯ, ಭೋಜನಗಳ ಕಾಂಬಿನೇಷನ್ ಹೇಗೆ? ಎಂಬಿತ್ಯಾದಿ ಮಾಹಿತಿಗಳು ಇಲ್ಲಿ ನಿಮಗಾಗಿ....
ಮೀನು ಹಿಡಿಯುವುದೂ ಒಂದು ಕಲೆ
ಮಳೆಗಾಲದ ರಾತ್ರಿಗಳಲ್ಲಿ ಹಳ್ಳಿಯ ಯುವಕರು ಒಟ್ಟಾಗಿ ಸುತ್ತಮುತ್ತ ಇರುವ ಹಳ್ಳ, ಕೊಳ್ಳಗಳಲ್ಲಿರುವ ಏಡಿ, ಮೀನುಗಳನ್ನು ಬೇಟೆಯಾಡಲು ಪ್ರಾರಂಭಿಸುತ್ತಾರೆ. ಇದೊಂದು ವಿಶಿಷ್ಟ ಕಲೆ ಅಂತಾನೇ ಹೇಳಬಹುದು. ಯಾಕೆಂದರೆ ಎಲ್ಲರಿಗೂ ಮೀನು ಅಥವಾ ಏಡಿ ಹಿಡಿಯಲು ಬರುವುದಿಲ್ಲ. ಇಲ್ಲಿನ ಹೆಚ್ಚಿನ ಯುವಕರಿಗೂ ಈ ಕಲೆ ಒಲಿದಿದೆ.
ಮಧ್ಯರಾತ್ರಿವರೆಗೆ ಬೇಟೆ
ಹಗಲಿನ ವೇಳೆ ಮಳೆ ಬಂದು ಕೆಸರುಮಯವಾಗಿದ್ದ ನೀರು ಸಂಜೆಹೊತ್ತಿಗೆ ಹಳ್ಳಗಳಲ್ಲಿ ಸ್ವಚ್ಛವಾಗಿ ಹರಿಯಲು ಪ್ರಾರಂಭವಾಗುತ್ತದೆ. ಕತ್ತಲಾದಂತೆ ಏಡಿಗಳು ಹಳ್ಳದ ಸಂದಿಗೊಂದಿಯಿಂದ ಆಹಾರ ಅರಸಿ ಹೊರಬರುತ್ತವೆ. ಈ ವೇಳೆ ಅತ್ಯಂತ ನಾಜೂಕಾಗಿ ಯಾವುದೇ ಪರಿಕರವಿಲ್ಲದೇ ಕೈಯಲ್ಲಿ ಜೀವಂತ ಏಡಿ ಹಿಡಿಯಲಾಗುತ್ತದೆ. ಕೆಲವೊಮ್ಮೆ ಬೇಟೆಗಾರರ ಕೈಗೆ ಏಡಿಗಳು ಕಚ್ಚುವುದು ಸಾಮಾನ್ಯ. ಈ ಬೇಟೆಯು ಸಾಮಾನ್ಯವಾಗಿ 8 ಗಂಟೆಗೆ ಪ್ರಾರಂಭವಾಗಿ ಮಧ್ಯರಾತ್ರಿಯ ವೇಳೆಗೆ ಕೊನೆಗೊಳ್ಳುತ್ತದೆ.
ಎಲ್ಲವೂ ತ್ರಾಸದಾಯಕ
ಬೇಟೆಯ ವೇಳೆ ಕಿಲೋಮೀಟರ್ ಗಟ್ಟಲೆ ದೂರ ಕ್ರಮಿಸುತ್ತಾರೆ. ಹಳ್ಳಗಳು ಸಾಮಾನ್ಯವಾಗಿ ಆ ವೇಳೆಗೆ ತುಂಬಿಹರಿಯುತ್ತದೆ. ಜೊತೆಗೆ ದೊಡ್ಡ ದೊಡ್ಡ ಬಂಡೆಕಲ್ಲು, ಕಸ, ಮುರಿದು ಬಿದ್ದ ಮರದ ಕೊಂಬೆ ಇದನ್ನೆಲ್ಲಾ ತ್ರಾಸದಾಯಕವಾಗಿ ದಾಟಿಕೊಂಡು ಹೋಗಬೆಕಾದ ಅನಿವಾರ್ಯತೆ ಬೇಟೆಗಾರರಲ್ಲಿರುತ್ತದೆ.
ಆಹಾರ ಹುಡುಕಿ ಬಂದವೇ ಆಹಾರವಾಗುತ್ತವೆ!
ಈ ಮಧ್ಯೆ ಹಳ್ಳಗಳ ಪಕ್ಕದಲ್ಲಿರುವ ಗದ್ದೆಗಳಲ್ಲಿ ಆಮೆಗಳು ಆಹಾರ ಅರಸಿಕೊಂಡು ಹೊರಡುತ್ತವೆ. ಮೀನಿನ ಜೊತೆಗೆ ಇದನ್ನೂ ಹಿಡಿಯುವ ಬೇಟೆಗಾರರ ಸಾಹಸ ಅತ್ಯದ್ಭುತ. ನಂತರ ಅದನ್ನು ಗೋಣಿಚೀಲಗಳಲ್ಲಿ ತುಂಬಿಸಿ ಮನೆಕಡೆ ಮುಖಮಾಡುತ್ತಾರೆ.
ಮರುದಿನ ಬೆಳಗ್ಗೆ ಸಾಂಬಾರು ಸಿದ್ಧ!
ತಾವು ಹಿಡಿದ ಏಡಿ, ಆಮೆ, ಮೀನುಗಳನ್ನು ವಿಂಗಡಸಿ ಎತ್ತರವಿರುವ ಪಾತ್ರೆಗಳಲ್ಲಿ ನೀರು ಅದರಲ್ಲಿ ಹಾಕಿ ರಾತ್ರಿಯೇ ತುಂಬಿಸಿಡುತ್ತಾರೆ. ಮರುದಿನ ಬೆಳಗ್ಗೆ ಅದನ್ನು ಸಜ್ಜುಮಾಡಿ ಪದಾರ್ಥ ಮಾಡುವುದು ತುಳುನಾಡಿನ ವಾಡಿಕೆ.
ಕಾಂಬಿನೇಷನ್ ಗಳ ರುಚಿ
ಏಡಿಗಳನ್ನು ಹಿಡಿಯುವುದು ಒಂದು ಮಜಾವಾದರೆ ಅದನ್ನು ಪದಾರ್ಥ ಮಾಡಿ ಚಪ್ಪರಿಸುವುದು ಇನ್ನೊಂದು ಮಜಾ. ವಿವಿಧ ಸಾಂಬಾರು ಪದಾರ್ಥಗಳನ್ನು ಸೇರಿಸಿ ಅದನ್ನು ಏಡಿ ಪದಾರ್ಥ ಮಾಡಲಾಗುತ್ತದೆ. ಇದಕ್ಕೆ ಒಳ್ಳೇ ಕಾಂಬಿನೇಷನ್ ಅಂದ್ರೆ ಕುಚ್ಚಲಕ್ಕಿ ಊಟ.
ತುಳುನಾಡಿನ ಊಟದ ಸ್ಪೆಷಲ್
ಏಡಿಯ ಟೊಂಗೆಗಳಿಂದ ರಸ ಹೀರುವುದು, ಸಂದಿಗೊಂದಿಯಲ್ಲಿರುವ ಮಾಂಸ ಸವಿಯುವುದೇ ಒಂದು ಅತ್ಯದ್ಭುತ ಅನುಭವ. ಜೊತೆಗೆ ಆಮೆ ಪದಾರ್ಥಕ್ಕೆ ಹುರುಳಿಕಾಳು ಬೆಸ್ಟ್ ಕಾಂಬಿನೇಷನ್. ಹೀಗೆ ತುಳುನಾಡಿನ ಬೇಟೆಗಾರರಿಗೆ ರಾತ್ರಿ ಪಟ್ಟ ಕಷ್ಟಕ್ಕೆ ಒಂದು ಅರ್ಥ ಬರುವುದು ಪದಾರ್ಥ ಸೇವಿಸುವಾಗಲೇ. ಅದರ ಅನುಭವೇ ಬೇರೆ.