ಸುಬ್ರಹ್ಮಣ್ಯದಲ್ಲಿ ಯುವಕನಿಗೆ ಸಿಡಿಲು ಬಡಿದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ
ಮಂಗಳೂರು, ಫೆಬ್ರವರಿ 08: ಸುಬ್ರಹ್ಮಣ್ಯದಲ್ಲಿ ನಿನ್ನೆ ಗುರುವಾರ ಸಂಜೆ ಫೆ.08 ಯುವಕನೋರ್ವನಿಗೆ ಸಿಡಿಲು ಬಡಿದು ಸಾವಿಗೀಡಾದ ದೃಶ್ಯ ಸಿ.ಸಿ. ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಳೆಯಿಂದ ರಕ್ಷಣೆ ಪಡೆಯಲು ರಸ್ತೆ ಪಕ್ಕದಲ್ಲಿ ನಿಂತಿದ್ದ ಕೊಲ್ಲಮೊಗ್ರು ಗ್ರಾಮದ ಹರಿಹರ ನಿವಾಸಿ ಪ್ರವೀಣ್ ಗೆ ಸಿಡಿಲು ಬಡಿದಿದೆ.
ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ಅಕಾಲಿಕ ಭಾರೀ ಮಳೆ ಸುರಿದ ಪರಿಣಾಮ ಪ್ರವೀಣ್ ಗೆ ಸಿಡಿಲು ಬಡಿದಿದ್ದು, ಘಟನೆಯಲ್ಲಿ ಗಂಭೀರ ಗಾಯಗೊಂಡ ಪ್ರವೀಣ್ ನನ್ನು ಸಮೀಪದ ಕಡಬ ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಪ್ರವೀಣ್ ಮೃತಪಟ್ಟಿದ್ದರು. ಪ್ರವೀಣ್ ಗೆ ಸಿಡಿಲು ಬಡಿದ ಭಯಾನಕ ದೃಶ್ಯ ಅಲ್ಲೇ ಕಟ್ಟಡಕ್ಕೆ ಅಳವಡಿಸಲಾಗಿದ್ದ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಕುಮಾರಧಾರಾ ನದಿ ಸಮೀಪದ ಕಟ್ಟಡವೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಪ್ರವೀಣ್ ಗೆ ಸಿಡಿಲು ಬಡಿದಿತ್ತು. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸಂಜೆಯಾಗುತ್ತಿದ್ದಂತೆ ಎಲ್ಲೆಡೆ ಕತ್ತಲೆ ಕವಿದು ಏಕಾಏಕಿ ಭಾರೀ ಮಳೆ ಸುರಿದಿತ್ತು.ಸಿಸಿಟಿವಿಯಲ್ಲಿ ಸೆರೆಯಾಗಿರುವ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.